ಪದ್ಯ ೯೮: ಚಿತ್ರಸೇನನು ಯಾರ ಮನೆಗೆ ಬಂದನು?

ಇನಿಬರಿರೆ ರಂಭಾದಿ ಸೀಮಂ
ತಿನಿಯರೊಳಗೂರ್ವಶಿಯೊಳಾದುದು
ಮನ ಧನಂಜಯನೀಕ್ಷಿಸಿದನನಿಮೇಷ ದೃಷ್ಟಿಯಲಿ
ವನಿತೆಯನು ಕಳುಹೇಳು ನೀನೆಂ
ದೆನೆ ಹಸಾದವೆನುತ್ತ ದೇವಾಂ
ಗನೆಯ ಭವನಕೆ ಬಂದನೀತನು ಹರಿಯ ನೇಮದಲಿ (ಅರಣ್ಯ ಪರ್ವ, ೮ ಸಂಧಿ, ೯೮ ಪದ್ಯ)

ತಾತ್ಪರ್ಯ:
ರಂಭೆ ಮೊದಲಾಗಿ ಇಷ್ಟು ಜನ ಅಪ್ಸರೆಯರಿದ್ದರೂ, ಅರ್ಜುನನಿಗೆ ಊರ್ವಶಿಯಲ್ಲಿ ಮನಸ್ಸು ನೆಟ್ಟಿತು, ಊರ್ವಶಿಯನ್ನು ರೆಪ್ಪೆ ಬಡಿಯದೆ ಒಂದೇ ದೃಷ್ಟಿಯಿಂದ ನೋಡುತ್ತಿದ್ದನು. ಇಂದ್ರನು ಚಿತ್ರಸೇನನಿಗೆ, ನೀನು ಹೋಗಿ ಊರ್ವಶಿಯನ್ನು ಕಳುಹಿಸು, ಎಂದು ಹೇಳಲು, ಚಿತ್ರಸೇನನು ಊರ್ವಶಿಯ ಮನೆಗೆ ಬಂದನು.

ಅರ್ಥ:
ಇನಿಬರು: ಇಷ್ಟುಜನ; ಆದಿ: ಮೊದಲಾದ; ಸೀಮಂತಿನಿ: ಹೆಂಗಸು, ಸ್ತ್ರೀ; ಮನ: ಮನಸ್ಸು; ಈಕ್ಷಿಸು: ನೋಡು; ಅನಿಮೇಷ: ಕಣ್ಣಿನ ರೆಪ್ಪೆ ಬಡಿಯದೆ; ದೃಷ್ಟಿ: ನೋಟ; ವನಿತೆ: ಹೆಂಗಸು; ಕಳುಹೇಳು: ಬರೆಮಾಡು; ಹಸಾದ: ಪ್ರಸಾದ; ದೇವಾಂಗನೆ: ಅಪ್ಸರೆ; ಭವನ: ಆಲಯ; ಬಂದು: ಆಗಮಿಸು; ಹರಿ: ಇಂದ್ರ; ನೇಮ: ಆಜ್ಞೆ;

ಪದವಿಂಗಡಣೆ:
ಇನಿಬರಿರೆ +ರಂಭಾದಿ +ಸೀಮಂ
ತಿನಿಯರೊಳಗ್+ಊರ್ವಶಿಯೊಳ್+ಆದುದು
ಮನ +ಧನಂಜಯನ್+ಈಕ್ಷಿಸಿದನ್+ಅನಿಮೇಷ +ದೃಷ್ಟಿಯಲಿ
ವನಿತೆಯನು +ಕಳುಹೇಳು +ನೀನೆಂದ್
ಎನೆ +ಹಸಾದವೆನುತ್ತ +ದೇವಾಂ
ಗನೆಯ +ಭವನಕೆ+ ಬಂದನ್+ಈತನು+ ಹರಿಯ +ನೇಮದಲಿ

ಅಚ್ಚರಿ:
(೧) ಸೀಮಂತಿನಿ, ವನಿತೆ, ಅಂಗನೆ – ಸಮನಾರ್ಥಕ ಪದ

ನಿಮ್ಮ ಟಿಪ್ಪಣಿ ಬರೆಯಿರಿ