ಪದ್ಯ ೯೬: ಇಂದ್ರನ ಓಲಗವು ಹೇಗೆ ಮುಕ್ತಾಯಗೊಂಡಿತು?

ಪಾರುಖಾಣೆಯನಿತ್ತನಾ ಜಂ
ಭಾರಿಯೂರ್ವಶಿ ರಂಭೆ ಮೇನಕೆ
ಗೌರಿಮೊದಲಾದಖಿಳ ಪಾತ್ರಕೆ ಪರಮ ಹರುಷದಲಿ
ನಾರಿಯರು ನಿಖಿಳಾಮರರು ಬೀ
ಡಾರಕೈದಿತು ಹರೆದುದೋಲಗ
ವಾರತಿಯ ಹರಿವಾಣ ಸುಳಿದುದು ಸಾಲು ಸೊಡರುಗಳ (ಅರಣ್ಯ ಪರ್ವ, ೮ ಸಂಧಿ, ೯೬ ಪದ್ಯ)

ತಾತ್ಪರ್ಯ:
ಇಂದ್ರನು ಊರ್ವಶಿ ರಂಭೆ, ಮೇನಕೆ, ಗೌರಿ ಮೊದಲಾದ ಅಪ್ಸರೆಯರಿಗೆ ಬಹುಮಾನವನ್ನು ಕೊಟ್ಟನು. ಅಪ್ಸರೆಯರೂ, ಸಮಸ್ತ ದೇವತೆಗಳೂ ತಮ್ಮ ತಮ್ಮ ಮನೆಗಳಿಗೆ ಹೋದರು. ಓಲಗ ಮುಗಿಯಿತು. ಸಾಲು ದೀಪಗಳನ್ನು ಹಚ್ಚಿದರು. ಆರತಿಯ ಹರಿವಾಣಗಳ ಸಾಲು ಸುಳಿಯಿತು.

ಅರ್ಥ:
ಪಾರುಖಾಣೆ: ಬಹು ಮಾನ, ಉಡುಗೊರೆ; ಜಂಭ: ತಾರಕಾಸುರನ ಪ್ರಧಾನಿ; ಜಂಭಾರಿ: ಇಂದ್ರ; ಮೊದಲಾದ: ಮುಂತಾದ; ಅಖಿಳ: ಎಲ್ಲಾ; ಪಾತ್ರ: ಅರ್ಹನಾದವನು; ಪರಮ: ಅತೀವ; ಹರುಷ: ಸಂತಸ; ನಾರಿ: ಸ್ತ್ರೀ; ನಿಖಿಳ: ಎಲ್ಲಾ; ಅಮರ: ದೇವತೆ; ಬೀಡಾರ: ತಂಗುವ ಸ್ಥಳ, ವಸತಿ; ಐದು: ಬಂದು ಸೇರು; ಹರೆದು: ತೀರಿತು; ಓಲಗ: ದರ್ಬಾರು; ಆರತಿ: ನೀರಾಜನ; ಹರಿವಣ: ತಟ್ಟೆ; ಸುಳಿ: ಕಾಣಿಸಿಕೊಳ್ಳು; ಸಾಲು: ಆವಳಿ; ಸೊಡರು: ದೀಪ;

ಪದವಿಂಗಡಣೆ:
ಪಾರುಖಾಣೆಯನಿತ್ತನಾ +ಜಂ
ಭಾರಿ+ಊರ್ವಶಿ +ರಂಭೆ +ಮೇನಕೆ
ಗೌರಿ+ಮೊದಲಾದ್+ಅಖಿಳ +ಪಾತ್ರಕೆ +ಪರಮ +ಹರುಷದಲಿ
ನಾರಿಯರು +ನಿಖಿಳ+ಅಮರರು+ ಬೀ
ಡಾರಕ್+ಐದಿತು +ಹರೆದುದ್+ಓಲಗವ್
ಆರತಿಯ +ಹರಿವಾಣ+ ಸುಳಿದುದು +ಸಾಲು +ಸೊಡರುಗಳ

ಅಚ್ಚರಿ:
(೧) ಸ ಕಾರದ ತ್ರಿವಳಿ ಪದ – ಸುಳಿದುದು ಸಾಲು ಸೊಡರುಗಳ

ನಿಮ್ಮ ಟಿಪ್ಪಣಿ ಬರೆಯಿರಿ