ಪದ್ಯ ೯೦: ಅಪ್ಸರೆಯರು ಹೇಗೆ ಇಂದ್ರನೋಲವನ್ನು ಸೇರಿದರು?

ನೇವುರದ ನುಣ್ದನಿಯ ಕಾಂಚಿಯ
ಕೇವಣದ ಕಿಂಕಿಣಿಯ ರಭಸದ
ನೇವಣಗಳುಲುಹುಗಳ ಮೌಳಿಯ ಮುರಿದ ಮುಸುಕುಗಳ
ಭಾವದುಬ್ಬಿನ ಚೆಲ್ಲೆಗಂಗಳ
ಡಾವರದ ಡೊಳ್ಳಾಸಕಾತಿಯ
ರಾ ವಿಬುಧಪತಿಯೋಲಗವ ಹೊಕ್ಕರು ನವಾಯಿಯಲಿ (ಅರಣ್ಯ ಪರ್ವ, ೮ ಸಂಧಿ, ೯೦ ಪದ್ಯ)

ತಾತ್ಪರ್ಯ:
ಕಾಲಂದುಗೆಯ ಮೆಲುದನಿ, ರತ್ನಖಚಿತವಾದ ಡಾಬಿಗೆ ಕಟ್ಟಿದ ಕಿರುಗೆಜ್ಜೆಗಳ ಸದ್ದು, ಚಿನ್ನದ ಹಾರಗಳ ಸದ್ದು, ಮುಖಕ್ಕೆ ಹಾಕಿದ ಸರಿದ ಮುಸುಕುಗಳು, ಭಾವಪೂರಿತವಾಗಿ ಅರಳಿದ ಕಣ್ಣುಅಳು ಇವುಗಳಿಂದ ನೋಟಕರ ಮನಸ್ಸಿನಲ್ಲಿ ತೀವ್ರವಾದ ಏರುಪೇರು ಮಾಡಬಲ್ಲ ಅಪ್ಸರೆಯರು ಸೊಗಸನ್ನು ಬೀರುತ್ತಾ ಇಂದ್ರನೋಲಗನ್ನು ಸೇರಿದರು.

ಅರ್ಥ:
ನೇವುರ: ಅಂದುಗೆ, ನೂಪುರ; ನುಣುಪು: ನಯ; ದನಿ: ಶಬ್ದ; ಕಾಂಚಿ: ಡಾಬು; ಕೇವಣ: ಕೂಡಿಸುವುದು; ಕಿಂಕಿಣಿ: ಕಿರುಗೆಜ್ಜೆ; ರಭಸ: ವೇಗ; ನೇವಣ: ಚಿನ್ನದ ಹಾರ; ಉಲುಹು: ಶಬ್ದ; ಮೌಳಿ: ಶಿರ; ಮುರಿ: ಸೀಳು; ಮುಸುಕು: ಹೊದಿಕೆ; ಭಾವ: ಮನಸ್ಸು; ಉಬ್ಬು: ಹಿಗ್ಗು; ಚೆಲ್ಲೆ: ಚಂಚಲವಾದ; ಕಂಗಳು: ಕಣ್ಣುಗಳು; ಡಾವರ: ಕಾವು, ಗಲಿಬಿಲಿ; ಡೊಳ್ಳಾಸ: ಬೆಡಗು, ಒಯ್ಯಾರ; ಕಾತಿ: ಗರತಿ, ಮುತ್ತೈದೆ; ವಿಬುಧ: ಸುರ, ದೇವತೆ; ಪತಿ: ಒಡೆಯ; ವಿಬುಧಪತಿ: ಇಂದ್ರ; ಓಲಗ: ದರ್ಬಾರು; ಹೊಕ್ಕು: ಸೇರು; ನವಾಯಿ: ಠೀವಿ;

ಪದವಿಂಗಡಣೆ:
ನೇವುರದ +ನುಣ್ದನಿಯ +ಕಾಂಚಿಯ
ಕೇವಣದ+ ಕಿಂಕಿಣಿಯ +ರಭಸದ
ನೇವಣಗಳ್+ಉಲುಹುಗಳ +ಮೌಳಿಯ +ಮುರಿದ +ಮುಸುಕುಗಳ
ಭಾವದುಬ್ಬಿನ +ಚೆಲ್ಲೆಗಂಗಳ
ಡಾವರದ+ ಡೊಳ್ಳಾಸ+ಕಾತಿಯರ್
ಆ+ ವಿಬುಧಪತಿ+ಓಲಗವ+ ಹೊಕ್ಕರು +ನವಾಯಿಯಲಿ

ಅಚ್ಚರಿ:
(೧) ಕ, ಮ ಕಾರದ ತ್ರಿವಳಿ ಪದ – ಕಾಂಚಿಯ ಕೇವಣದ ಕಿಂಕಿಣಿಯ; ಮೌಳಿಯ ಮುರಿದ ಮುಸುಕುಗಳ
(೨) ಇಂದ್ರನನ್ನು ಕರೆದ ಪರಿ – ವಿಬುಧಪತಿ

ನಿಮ್ಮ ಟಿಪ್ಪಣಿ ಬರೆಯಿರಿ