ಪದ್ಯ ೮೩: ಇಂದ್ರನು ಅರ್ಜುನನನ್ನು ಹೇಗೆ ಬರಮಾಡಿಕೊಂಡನು?

ಇಳಿದು ರಥವನು ದಿವಿಜರಾಯನ
ನಿಳಯವನು ಹೊಕ್ಕನು ಕಿರೀಟಿಯ
ನಳವಿಯಲಿ ಕಂಡಿದಿರು ಬಂದನು ನಗುತ ಶತಮನ್ಯು
ಸೆಳೆದು ಬಿಗಿದಪ್ಪಿದನು ಕರದಲಿ
ತಳುಕಿ ಕರವನು ತಂದು ತನ್ನಯ
ಕೆಲದೊಳಗೆ ಕುಳ್ಳಿರಿಸಿದನು ಸಿಂಹಾಸನಾರ್ಧದಲಿ (ಅರಣ್ಯ ಪರ್ವ, ೮ ಸಂಧಿ, ೮೩ ಪದ್ಯ)

ತಾತ್ಪರ್ಯ:
ಅರ್ಜುನನು ರಥವನ್ನಿಳಿದು ದೇವೇಂದ್ರನ ಮನೆಯನ್ನು ಹೊಕ್ಕನು. ಹತ್ತಿರದಲ್ಲೇ ಅವನನ್ನು ಕಂಡು ಇಂದ್ರನು ನಗುತ್ತಾ ಎದುರುಬಂದನು. ಮಗನನ್ನು ಬರಸೆಳೆದು ಬಿಗಿದಪ್ಪಿ ಕೈಗೆ ಕೈಯನ್ನು ಜೋಡಿಸಿ, ಕರೆದೊಯ್ದು ತನ್ನ ಸಿಂಹಾಸನದಲ್ಲಿ ದೇವೇಂದ್ರನು ಅರ್ಜುನನನ್ನು ಕುಳ್ಳಿರಿಸಿಕೊಂಡನು.

ಅರ್ಥ:
ಇಳಿ: ಕೆಳಕ್ಕೆ ಬಾ; ರಥ: ಬಂಡಿ; ದಿವಿಜ: ದೇವತೆ; ರಾಯ: ಒಡೆಯ; ನಿಳಯ: ಮನೆ; ಹೊಕ್ಕು: ಸೇರು; ಕಿರೀಟಿ: ಅರ್ಜುನ; ಅಳವಿ: ಹತ್ತಿರ; ಕಂಡು: ನೋಡು, ಭೇಟಿ; ಇದಿರು: ಎದುರು; ಬಂದು: ಆಗಮಿಸು; ನಗುತ: ಸಂತಸ; ಶತಮನ್ಯು: ದೇವೇಂದ್ರ; ಸೆಳೆ: ಆಕರ್ಷಿಸು; ಬಿಗಿ: ಭದ್ರವಾಗಿ; ಅಪ್ಪು: ಆಲಂಗಿಸು; ಕರ: ಹಸ್ತ; ತಳುಕು: ಜೋಡಣೆ; ಕರ: ಹಸ್ತ; ತಂದು: ಬರೆಮಾಡು; ಕೆಲ: ಹತ್ತಿರ; ಕುಳ್ಳಿರಿಸು: ಆಸೀನನಾಗು; ಸಿಂಹಾಸನ: ರಾಜರ ಆಸನ; ಅರ್ಧ: ಎರಡು ಸಮಪಾಲುಗಳಲ್ಲಿ ಒಂದು;

ಪದವಿಂಗಡಣೆ:
ಇಳಿದು+ ರಥವನು +ದಿವಿಜ+ರಾಯನ
ನಿಳಯವನು +ಹೊಕ್ಕನು +ಕಿರೀಟಿಯ
ನಳವಿಯಲಿ+ ಕಂಡ್+ಇದಿರು +ಬಂದನು +ನಗುತ +ಶತಮನ್ಯು
ಸೆಳೆದು +ಬಿಗಿದಪ್ಪಿದನು +ಕರದಲಿ
ತಳುಕಿ +ಕರವನು +ತಂದು +ತನ್ನಯ
ಕೆಲದೊಳಗೆ +ಕುಳ್ಳಿರಿಸಿದನು +ಸಿಂಹಾಸನ+ಅರ್ಧದಲಿ

ಅಚ್ಚರಿ:
(೧) ಪ್ರೀತಿ, ಮಮಕಾರ, ವಾತ್ಸಲ್ಯವನ್ನು ತೋರುವ ಪರಿ – ಸೆಳೆದು ಬಿಗಿದಪ್ಪಿದನು ಕರದಲಿ
ತಳುಕಿ ಕರವನು ತಂದು ತನ್ನಯ ಕೆಲದೊಳಗೆ ಕುಳ್ಳಿರಿಸಿದನು ಸಿಂಹಾಸನಾರ್ಧದಲಿ

ನಿಮ್ಮ ಟಿಪ್ಪಣಿ ಬರೆಯಿರಿ