ಪದ್ಯ ೮೨: ಅರ್ಜುನನು ಅಮರಾವತಿಯನ್ನು ಹೇಗೆ ಪ್ರವೇಶಿಸಿದನು?

ಹೊಕ್ಕನಮರಾವತಿಯನರ್ಜುನ
ಎಕ್ಕತುಳದಲುಪಾರ್ಜಿಸಿದಪು
ಣ್ಯಕ್ಕೆ ಸರಿಯೇ ನಳನಹುಷ ಭರತಾದಿ ಭೂಮಿಪರು
ಉಕ್ಕಿದವು ಪರಿಮಳದ ತೇಜದ
ತೆಕ್ಕೆಗಳು ಲಾವಣ್ಯ ಲಹರಿಯ
ಸೊಕ್ಕುಗಳ ಸುರಸೂಳೆಗೇರಿಗಳೊಳಗೆ ನಡೆ ತಂದ (ಅರಣ್ಯ ಪರ್ವ, ೮ ಸಂಧಿ, ೮೨ ಪದ್ಯ)

ತಾತ್ಪರ್ಯ:
ಅರ್ಜುನನು ಅಮರಾವತಿಯನ್ನು ಪ್ರವೇಶಿಸಿದನು. ತನ್ನ ಪರಾಕ್ರಮದಿಮ್ದ ಅವನು ಗಳಿಸಿದ ಪುಣ್ಯಕ್ಕೆ ಸರಿ ಸಮಾನವಾದುದು ಇಲ್ಲ. ನಳ ನಹುಷ ಭರತನೇ ಮೊದಲಾದವರ ಪುಣ್ಯವು ಇವನ ಪುಣ್ಯಕ್ಕೆ ಸಮವಲ್ಲ. ಅರ್ಜುನನು ಅಮರಾವತಿಯ ಸೂಳೆಕೇರಿಗಳಲ್ಲಿ ರಥದಲ್ಲಿ ಚಲಿಸಿದನು, ಅಲ್ಲಿ ಸುಗಂಧ, ಸೌಂದರ್ಯ ತೇಜದ ತೆಕ್ಕೆಗಳು ಲಾವಣ್ಯದ ತೆರೆಗಳು ಕೊಬ್ಬಿ ಕಂಗೊಳಿಸುತ್ತಿದ್ದವು.

ಅರ್ಥ:
ಹೊಕ್ಕು: ಸೇರು; ಎಕ್ಕತುಳ: ಪರಾಕ್ರಮ; ಆರ್ಜಿಸು: ಸಂಪಾದಿಸು; ಪುಣ್ಯ: ಸದಾಚಾರ; ಸರಿ: ಸಮಾನವಾದ; ಭೂಮಿಪ: ರಾಜ; ಉಕ್ಕು: ಸುರಿ; ಪರಿಮಳ: ಸುಗಂಧ; ತೇಜ: ಕಾಂತಿ; ತೆಕ್ಕೆ: ಗುಂಪು; ಲಾವಣ್ಯ: ಚೆಲುವು, ಸೌಂದರ್ಯ; ಲಹರಿ: ರಭಸ, ಆವೇಗ; ಸೊಕ್ಕು:ಅಮಲು, ಮದ; ಸುರ: ದೇವತೆ; ಸೂಳೆ: ವೇಶ್ಯೆ; ಕೇರಿ: ಬೀದಿ, ಓಣಿ; ನಡೆ: ಚಲಿಸು, ಹೋಗು;

ಪದವಿಂಗಡಣೆ:
ಹೊಕ್ಕನ್+ಅಮರಾವತಿಯನ್+ಅರ್ಜುನ
ಎಕ್ಕತುಳದಲು+ಪಾರ್ಜಿಸಿದ+ಪು
ಣ್ಯಕ್ಕೆ +ಸರಿಯೇ +ನಳ+ನಹುಷ+ ಭರತಾದಿ+ ಭೂಮಿಪರು
ಉಕ್ಕಿದವು+ ಪರಿಮಳದ +ತೇಜದ
ತೆಕ್ಕೆಗಳು +ಲಾವಣ್ಯ +ಲಹರಿಯ
ಸೊಕ್ಕುಗಳ+ ಸುರಸೂಳೆ+ಕೇರಿಗಳ್+ಒಳಗೆ +ನಡೆ ತಂದ

ಅಚ್ಚರಿ:
(೧) ಲಾವಣ್ಯ ಲಹರಿ, ಸೋಕ್ಕುಗಳ ಸುರಸೂಳೆಕೇರಿ; ಭರತಾದಿ ಭೂಮಿಪರು; ತೇಜದ ತೆಕ್ಕೆಗಳು – ಜೋಡಿ ಅಕ್ಷರದ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ