ಪದ್ಯ ೮೦: ಸ್ವರ್ಗಕ್ಕೆ ಭರತವರ್ಷದಿಂದ ಯಾರು ಹೋಗಿದ್ದಾರೆ?

ಇದೆಯಸಂಖ್ಯಾತ ಕ್ಷಿತೀಶ್ವರ
ರುದಿತ ಕೃತಪುಣ್ಯೋಪಚಯ ಭೋ
ಗದಲಿ ಭಾರತ ವರುಷ ನಿಮ್ಮದು ಪುಣ್ಯಭೂಮಿ ಕಣ
ಇದರೊಳಗೆ ಜಪ ಯಜ್ಞ ದಾನಾ
ಭ್ಯುದಯ ವೈದಿಕ ಕರ್ಮನಿಷ್ಠರ
ಪದವಿಗಳ ಪರುಠವಣೆಯನು ಕಲಿಪಾರ್ಥನೋಡೆಂದ (ಅರಣ್ಯ ಪರ್ವ, ೮ ಸಂಧಿ, ೮೦ ಪದ್ಯ)

ತಾತ್ಪರ್ಯ:
ಎಲೈ ಅರ್ಜುನ, ನಿಮ್ಮದು ಪುಣ್ಯಭೂಮಿಯಾದ ಭರತವರ್ಷ, ಇಲ್ಲಿ ಅಸಂಖ್ಯಾತ ರಾಜರು ತಾವು ಮಾಡಿದ ಪುಣ್ಯ ಕರ್ಮ ಸಂಗ್ರಹದಿಂದ ಸ್ವರ್ಗವನ್ನು ಸಂಪಾದಿಸಿದ್ದಾರೆ. ಇಲ್ಲಿ ಜಪ, ತಪ, ಯಜ್ಞ, ದಾನ ಅಭ್ಯುದಯವನ್ನುಂಟು ಮಾಡುವ ವೈದಿಕ ಕರ್ಮಗಳಿಂದ ಸ್ವರ್ಗಕ್ಕೆ ಬಂದು ಸುಖವನ್ನನುಭವಿಸುತ್ತಿದ್ದಾರೆ, ಈ ವ್ಯವಸ್ಥೆಯನ್ನು ಗಮನಿಸು ಎಂದು ಮಾತಲಿಯು ಅರ್ಜುನನಿಗೆ ಹೇಳಿದನು.

ಅರ್ಥ:
ಅಸಂಖ್ಯಾತ: ಲೆಕ್ಕವಿಲ್ಲದಷ್ಟು; ಕ್ಷಿತೀಶ್ವರ: ರಾಜ; ಕ್ಷಿತಿ: ಭೂಮಿ; ಉದಿತ: ಹುಟ್ಟಿದ; ಕೃತ: ಮಾಡಿದ; ಪುಣ್ಯ: ಸದಾಚಾರ; ಉಪಚಯ: ಶೇಖರಣೆ, ರಾಶಿ; ಭೋಗ: ಸುಖವನ್ನು ಅನುಭವಿಸುವುದು; ಪುಣ್ಯಭೂಮಿ: ಶ್ರೇಷ್ಠವಾದ ನೆಲೆ; ಜಪ: ತಪಸ್ಸು; ಯಜ್ಞ: ಯಾಗ; ದಾನ: ನೀಡು; ಅಭ್ಯುದಯ: ಏಳಿಗೆ; ವೈದಿಕ: ವೇದದಲ್ಲಿ ಹೇಳಿರುವ; ಕರ್ಮ: ಕಾರ್ಯ; ನಿಷ್ಠ: ಶ್ರದ್ಧೆಯುಳ್ಳವನು; ಪದವಿ: ಸ್ಥಾನ; ಪರುಠವ: ವಿಸ್ತಾರ, ಹರಹು; ಕಲಿ: ಶೂರ; ನೋಡು: ವೀಕ್ಷಿಸು;

ಪದವಿಂಗಡಣೆ:
ಇದೆ+ಅಸಂಖ್ಯಾತ +ಕ್ಷಿತೀಶ್ವರರ್
ಉದಿತ +ಕೃತ+ಪುಣ್ಯ+ಉಪಚಯ +ಭೋ
ಗದಲಿ +ಭಾರತ +ವರುಷ +ನಿಮ್ಮದು +ಪುಣ್ಯಭೂಮಿ +ಕಣ
ಇದರೊಳಗೆ+ ಜಪ +ಯಜ್ಞ +ದಾನ
ಅಭ್ಯುದಯ +ವೈದಿಕ+ ಕರ್ಮನಿಷ್ಠರ
ಪದವಿಗಳ +ಪರುಠವಣೆಯನು +ಕಲಿ+ಪಾರ್ಥ+ನೋಡೆಂದ

ಅಚ್ಚರಿ:
(೧) ಭರತ ಭೂಮಿಯನ್ನು ಹೊಗಳುವ ಪರಿ – ಭಾರತ ವರುಷ ನಿಮ್ಮದು ಪುಣ್ಯಭೂಮಿ ಕಣ

ನಿಮ್ಮ ಟಿಪ್ಪಣಿ ಬರೆಯಿರಿ