ಪದ್ಯ ೭೯: ಅರ್ಜುನನು ಯಾರನ್ನು ಸ್ವರ್ಗದಲಿ ನೋಡಿದನು?

ಈತ ಭರತನು ದೂರದಲಿ ತೋ
ರ್ಪಾತನು ಹರಿಶ್ಚಂದ್ರನಳ ನೃಗ
ರೀತಗಳು ಪುರುಕುತ್ಸನೀತ ಮರುತ್ತ ನೃಪನೀತ
ಈತ ಹೈಹಯ ದುಂದುಮಾರಕ
ನಿತ ನಹುಷ ದಿಳೀಪ ದಶರಥ
ನೀತ ರಘು ತಾನೀತ ಶಂತನು ಪಾರ್ಥ ನೋಡೆಂದ (ಅರಣ್ಯ ಪರ್ವ, ೮ ಸಂಧಿ, ೭೯ ಪದ್ಯ)

ತಾತ್ಪರ್ಯ:
ಮಾತಲಿಯು ಅರ್ಜುನನಿಗೆ ಸ್ವರ್ಗವನ್ನು ತೋರಿಸುತ್ತಾ, ಇವನು ಭರತ, ಅಲ್ಲಿ ದೂರದಲ್ಲಿ ಕಾಣುವವನು ಹರಿಶ್ಚಂದ್ರ, ಇವನು ನಳ, ಇವನು ನೃಗ, ಇವನು ಪುರುಕುತ್ಸ, ಇವನು ಮರುತ್ತ, ಇವನು ಹೈಹಯ, ಇವನು ದುಂದುಮಾರ, ಇವನು ನಹುಷ, ಇವನು ದಿಲೀಪ, ಇವನು ದಶರಥ, ಇವನು ರಘು, ಇವನು ಶಂತನು ಎಂದು ಹೇಳಿದನು.

ಅರ್ಥ:
ದೂರ: ಅಂತರ; ತೋರ್ಪ: ತೋರುವ; ನೋಡು: ವೀಕ್ಷಿಸು;

ಪದವಿಂಗಡಣೆ:
ಈತ +ಭರತನು +ದೂರದಲಿ +ತೋರ್ಪ
ಆತನು +ಹರಿಶ್ಚಂದ್ರ+ ನಳ +ರ್
ಈತಗಳು +ಪುರುಕುತ್ಸನ್+ಈತ +ಮರುತ್ತ ನೃಪನ್+ಈತ
ಈತ+ ಹೈಹಯ +ದುಂದುಮಾರಕನ್
ಈತ +ನಹುಷ +ದಿಲೀಪ +ದಶರಥನ್
ಈತ +ರಘು +ತಾನ್+ಈತ +ಶಂತನು +ಪಾರ್ಥ +ನೋಡೆಂದ

ಅಚ್ಚರಿ:
(೧) ಈತ – ೮ ಬಾರಿ ಪ್ರಯೋಗ
(೨) ಮುಖ್ಯ ರಾಜರ ಪರಿಚಯ – ಭರತ, ಹರಿಶ್ಚಂದ್ರ, ನಳ, ನೃಗ, ದುಂದುಮಾರ, ಪುರುಕುತ್ಸ, ಹೈಹಯ, ದಿಲೀಪ, ದಶರಥ, ರಘು, ಶಂತನು

ನಿಮ್ಮ ಟಿಪ್ಪಣಿ ಬರೆಯಿರಿ