ಪದ್ಯ ೭೮: ಸ್ವರ್ಗಕ್ಕೆ ಹೋಗುವವರ ಗುಣಗಳೆಂತಿಹವು?

ಮೇಲೆ ಮೇಲೈದರೆ ಸುತಾರಾ
ಮಾಲೆಗಳವೊಲು ರಾಜಸೂಯದ
ಮೇಲುಯಜ್ಞದ ವಾಜಿ ಮೇಧದ ಭೂರಿಸುಕೃತಿಗಳು
ಕಾಳಗದೊಳರಿ ಸುಭಟ ಸಿತ ಕರ
ವಾಲ ಧಾರಾತೀರ್ಥ ಸೇವಿ ನೃ
ಪಾಲರೈದರೆ ದೀಪ್ಯಮಾನ ವಿಮಾನ ಮಧ್ಯದಲಿ (ಅರಣ್ಯ ಪರ್ವ, ೮ ಸಂಧಿ, ೭೮ ಪದ್ಯ)

ತಾತ್ಪರ್ಯ:
ಮಾತಲಿಯು ಅರ್ಜುನನಿಗೆ, ಅಗೋ ಅಲ್ಲಿ ಮೇಲೆ ನಕ್ಷತ್ರ ಮಾಲೆಗಳಂತೆ ವಿಮಾನದಲ್ಲಿ ರಾಜಸೂಯ ಅಶ್ವಮೇಧಗಳನ್ನು ಮಾಡಿದ ಮಹಾ ಪುಣ್ಯಶಾಲಿಗಳಿದ್ದಾರೆ, ಯುದ್ಧದಲ್ಲಿ ಶತ್ರುಗಳೊಡನೆ ಕತ್ತಿಯಲ್ಲಿ ಯುದ್ಧಮಾಡಿ ರಕ್ತಸುರಿದು ಸತ್ತವರು ಅವರು ಎಂದು ಅರ್ಜುನನಿಗೆ ಹೇಳಿದನು.

ಅರ್ಥ:
ಮೇಲೆ: ಎತ್ತರ, ದೂರ, ಉತ್ತುಂಗ; ಐದು: ಹೋಗಿಸೇರು; ತಾರ: ನಕ್ಷತ್ರ; ಮಾಲೆ: ಹಾರ; ಮೇಲುಯಜ್ಞ: ಶ್ರೇಷ್ಠವಾದ ಯಾಗ; ವಾಜಿ: ಕುದುರೆ; ಮೇಧ: ಯಾಗ, ಯಜ್ಞ; ಭೂರಿ: ಹೆಚ್ಚು, ಅಧಿಕ; ಸುಕೃತಿ: ಒಳ್ಳೆಯ ಆಕೃತಿ; ಕಾಳಗ: ಯುದ್ಧ; ಅರಿ: ವೈರಿ; ಸುಭಟ: ಸೈನಿಕ; ಸಿತ: ಶ್ವೇತ; ಕರವಾಲ: ಕತ್ತಿ; ಧಾರೆ: ಪ್ರವಾಹ; ತೀರ್ಥ: ಪವಿತ್ರವಾದ ಜಲ; ನೃಪಾಲ: ರಾಜ; ದೀಪ್ಯಮಾನ: ಪ್ರಜ್ವಲಿಸು; ಮಧ್ಯ: ನಡುವೆ; ವಿಮಾನ: ಆಕಾಶದಲ್ಲಿ ಚರಿಸುವ ವಾಹನ;

ಪದವಿಂಗಡಣೆ:
ಮೇಲೆ +ಮೇಲ್+ಐದರೆ+ ಸುತಾರಾ
ಮಾಲೆಗಳವೊಲು +ರಾಜಸೂಯದ
ಮೇಲುಯಜ್ಞದ +ವಾಜಿ ಮೇಧದ +ಭೂರಿ+ಸುಕೃತಿಗಳು
ಕಾಳಗದೊಳ್+ಅರಿ+ ಸುಭಟ+ ಸಿತ+ ಕರ
ವಾಲ +ಧಾರಾ+ತೀರ್ಥ +ಸೇವಿ +ನೃ
ಪಾಲರ್+ಐದರೆ+ ದೀಪ್ಯಮಾನ +ವಿಮಾನ +ಮಧ್ಯದಲಿ

ಅಚ್ಚರಿ:
(೧) ಕರವಾಲ, ನೃಪಾಲ – ಪ್ರಾಸ ಪದ

ನಿಮ್ಮ ಟಿಪ್ಪಣಿ ಬರೆಯಿರಿ