ಪದ್ಯ ೭೫: ಯಾರು ಸ್ವರ್ಗದತ್ತ ಪ್ರಯಾಣ ಬಳಸಿದರು?

ಈತನಿಂದ್ರಿಯ ವಿಜಯಿ ದುಷ್ಕೃತ
ಭೀತನಿವ ವೇದಾಧ್ಯಯನ ಪರ
ನೀತ ತೀರ್ಥವಿಹಾರಿ ಸಜ್ಜನನೀತ ಗುಣಿಯೀತ
ಈತ ನಿರ್ಮತ್ಸರನಸೂಯಾ
ತೀತನಿವನತಿ ವಿಪ್ರಪೂಜಕ
ನೀತ ಮಾತಾ ಪಿತರ ಭಕ್ತನು ಪಾರ್ಥನೋಡೆಂದ (ಅರಣ್ಯ ಪರ್ವ, ೮ ಸಂಧಿ, ೭೫ ಪದ್ಯ)

ತಾತ್ಪರ್ಯ:
ಇವನು ಇಂದ್ರಿಯಗಳನ್ನು ಗೆದ್ದವನು, ಇವನು ಪಾಪ ಕರ್ಮಗಳಿಗೆ ಹೆದರಿದವನು. ಇವನು ವೇದಾಧ್ಯಯನ ಮಾಡಿದವನು, ಇವನು ತೀರ್ಥ ಯಾತ್ರೆ ಮಾಡಿದವನು, ಇವನು ಸಜ್ಜನ, ಇವನು ಸದ್ಗುಣ ಶಾಲಿ, ಇವನು ಅಸೂಯೆಯನ್ನು ಗೆದ್ದವನು, ಇವನು ಬ್ರಾಹ್ಮಣರನ್ನು ಪೂಜಿಸಿದವನು, ಇವನು ತಂದೆ ತಾಯಿಗಳ ಭಕ್ತ, ಇವರು ಸ್ವರ್ಗದತ್ತ ಹೊರಟಿದ್ದಾರೆ.

ಅರ್ಥ:
ಇಂದ್ರಿಯ: ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳನ್ನು ಗ್ರಹಿಸಲು ಸಹಕಾರಿಯಾಗಿರುವ ಅವಯವ; ವಿಜಯ: ಗೆಲುವು; ದುಷ್ಕೃತ: ಕೆಟ್ಟ ಕೆಲಸ, ಪಾಪ; ಭೀತ: ಹೆದರು; ವೇದ: ಶೃತಿ; ಅಧ್ಯಯನ: ಓದುವುದು, ಕಲಿಯುವುದು; ತೀರ್ಥ: ಪವಿತ್ರಸ್ಥಳ; ವಿಹಾರಿ: ಓಡಾಡುವವ; ಸಜ್ಜನ: ಒಳ್ಳೆಯ ವ್ಯಕ್ತಿ; ಗುಣಿ: ಒಳ್ಳೆಯ ಗುಣವುಳ್ಳವ; ಮತ್ಸರ: ಹೊಟ್ಟೆಕಿಚ್ಚು; ಅಸೂಯೆ: ಹೊಟ್ಟೆಕಿಚ್ಚು ;ವಿಪ್ರ: ಬ್ರಾಹ್ಮಣ; ಪೂಜಕ: ಆರಾಧಕ; ಮಾತ: ತಾಯಿ; ಪಿತ: ತಂದೆ; ಭಕ್ತ: ಪೂಜಿಸುವವನು, ಆರಾಧಕ;

ಪದವಿಂಗಡಣೆ:
ಈತನ್+ಇಂದ್ರಿಯ +ವಿಜಯಿ +ದುಷ್ಕೃತ
ಭೀತನ್+ಇವ +ವೇದಾಧ್ಯಯನಪರನ್
ಈತ +ತೀರ್ಥವಿಹಾರಿ+ ಸಜ್ಜನನ್+ಈತ +ಗುಣಿಯೀತ
ಈತ +ನಿರ್ಮತ್ಸರನ್+ಅಸೂಯಾ
ತೀತನ್+ಇವನ್+ಅತಿ+ ವಿಪ್ರ+ಪೂಜಕನ್
ಈತ +ಮಾತಾ +ಪಿತರ+ ಭಕ್ತನು +ಪಾರ್ಥ+ನೋಡೆಂದ

ಅಚ್ಚರಿ:
(೧) ಸ್ವರ್ಗಕ್ಕೆ ಹೋಗುವವರು – ಇಂದ್ರಿಯವಿಜಯಿ, ದುಷ್ಕೃತಭೀತನ್, ವೇದಾಧ್ಯಯನಪರ, ತೀರ್ಥವಿಹಾರಿ, ಸಜ್ಜನ, ಮಾತಾ ಪಿತರ ಭಕ್ತ

ನಿಮ್ಮ ಟಿಪ್ಪಣಿ ಬರೆಯಿರಿ