ಪದ್ಯ ೭೧: ಮಂದೇಹರು ಯಾರಿಂದ ವರವನ್ನು ಪಡೆದಿಹರು?

ಪರಿಕಿಸಲು ಪರಮಾತ್ಮ ದಿನಕರ
ಹರಿಹರ ವಿರಿಂಚಿಗಳು ಸೂರ್ಯನ
ನೆರೆದು ಸುತಿ ಕೈವಾರಿಸುತ್ತಿರೆ ಘನ ಮಹಾಮಹಿಮ
ಕಿರಣದುರಿಯ ಮಹಾಪ್ರತಾಪನು
ತರಣಿಯೊಂದಾತನೊಳು ಕಾದಲು
ಸರಸಿರುಹ ಸಂಭವನ ಮೆಚ್ಚಿಸಿ ವರವ ಪಡೆದಿಹರು (ಅರಣ್ಯ ಪರ್ವ, ೮ ಸಂಧಿ, ೭೧ ಪದ್ಯ)

ತಾತ್ಪರ್ಯ:
ಎಲೈ ಪಾರ್ಥ ಗಮನಿಸು, ಹರಿಹರ ಬ್ರಹ್ಮಾದಿಗಳು ಪರಮಾತ್ಮನಾದ ಸೂರ್ಯನನ್ನು ಶೃತಿ ಘೋಷದಿಂದ ಹೊಗಳುತ್ತಿರುವರು. ಮಹಾಮಹಿಮನಾದ ಸೂರ್ಯನ ಕಿರಣದ ಉರಿಯನ್ನು ಯುದ್ಧದಲ್ಲೆದುರಿಸುವುದು ಸುಲಭವಲ್ಲವೆಂದು ತಿಳಿದು ಮಂದೇಹರು ಬ್ರಹ್ಮನನ್ನು ತಪಸ್ಸಿನಿಂದ ಮೆಚ್ಚಿಸಿ ವರವನ್ನು ಪಡೆದಿಹರು.

ಅರ್ಥ:
ಪರಿಕಿಸು: ಗಮನಿಸು; ಪರಮಾತ್ಮ: ಭಗವಂತ; ದಿನಕರ: ಸೂರ್ಯ; ಹರಿ: ವಿಷ್ಣು; ಹರ: ಶಿವ; ವಿರಿಂಚಿ: ಬ್ರಹ್ಮ; ಸೂರ್ಯ: ರವಿ; ನೆರೆ: ಜೊತೆ; ಸುತಿ: ಶೃತಿ; ಕೈವಾರಿಸು:ಹೊಗಳು; ಘನ: ಶ್ರೇಷ್ಠ; ಮಹಾಮಹಿಮ: ಉತ್ತಮ, ಶ್ರೇಷ್ಠ; ಕಿರಣ: ಕಾಂತಿ, ಪ್ರಕಾಶ; ಉರಿ: ಜ್ವಾಲೆ; ಪ್ರತಾಪ: ಪರಾಕ್ರಮ; ಕಾದು: ಜಗಳವಾಡು;ಸರಸಿರುಹ: ಕಮಲ; ಸಂಭವ: ಹುಟ್ಟು; ಮೆಚ್ಚು: ಒಲುಮೆ, ಪ್ರೀತಿ, ಇಷ್ಟ; ವರ: ಅನುಗ್ರಹ; ಪಡೆ:ಹೊಂದು, ತಾಳು;

ಪದವಿಂಗಡಣೆ:
ಪರಿಕಿಸಲು+ ಪರಮಾತ್ಮ +ದಿನಕರ
ಹರಿ+ಹರ+ ವಿರಿಂಚಿಗಳು+ ಸೂರ್ಯನ
ನೆರೆದು +ಸುತಿ +ಕೈವಾರಿಸುತ್ತಿರೆ +ಘನ +ಮಹಾಮಹಿಮ
ಕಿರಣದ್+ಉರಿಯ +ಮಹಾ+ಪ್ರತಾಪನು
ತರಣಿಯೊಂದ್+ಆತನೊಳು +ಕಾದಲು
ಸರಸಿರುಹ ಸಂಭವನ +ಮೆಚ್ಚಿಸಿ +ವರವ +ಪಡೆದಿಹರು

ಅಚ್ಚರಿ:
(೧) ದಿನಕರ, ಸೂರ್ಯ, ತರಣಿ – ಸೂರ್ಯನನ್ನು ಕರೆದ ಬಗೆ
(೨) ಬ್ರಹ್ಮನನ್ನು ಸರಸಿರುಹಸಂಭವ ಎಂದು ಕರೆದಿರುವುದು

ನಿಮ್ಮ ಟಿಪ್ಪಣಿ ಬರೆಯಿರಿ