ಪದ್ಯ ೫೩: ಕ್ಷೀರಸಾಗರವನ್ನು ಯಾವ ದ್ವೀಪವು ಸುತ್ತುವರೆದಿದೆ?

ನಳಿನನಾಭನ ದುಗ್ಧಶರಧಿಯ
ಬಳಸಿಕೊಂಡಿಹ ಪುಷ್ಕರದ ಹೊರ
ವಳಯದಲಿ ಮೆರೆದಿಪ್ಪುದಾ ಸ್ವಾದೋದ ವಾರಾಶಿ
ಇಳೆಗೆ ಕೋಟೆಯ ನಿಕ್ಕಿದಂತಿರೆ
ಬೆಳೆದ ಲೋಕಾಲೋಕ ಪರ್ವತ
ತಿಳಿವಡಲ್ಲಿಂದತ್ತ ತಿಮಿರವಜಾಂಡ ಪರ್ಯಂತ (ಅರಣ್ಯ ಪರ್ವ, ೮ ಸಂಧಿ, ೫೩ ಪದ್ಯ)

ತಾತ್ಪರ್ಯ:
ಕ್ಷೀರಸಾಗರವನ್ನು ಸುತ್ತುವರಿದಿರವ ಪುಷ್ಕರ ದ್ವೀಪದ ಹೊರಗೆ ಸಿಹಿನೀರಿನ ಸಮುದ್ರವಿದೆ. ಅದರಾಚೆ ಭೂಲೋಕದ ಕೋಟೆಯೋ ಎಂಬಂತೆ ಲೋಕಾಲೋಕ ಪರ್ವತವಿದೆ. ಅಲ್ಲಿಂದ ಬ್ರಹ್ಮಾಂಡದ ಕೊನೆಯವರೆಗೂ ಅಂಧಕಾರವಿದೆ.

ಅರ್ಥ:
ನಳಿನ: ತಾವರೆ; ನಳಿನನಾಭ: ವಿಷ್ಣು; ದುಗ್ಧ: ಹಾಲು, ಕ್ಷೀರ; ಶರಧಿ: ಸಮುದ್ರ; ಬಳಸು: ಆವರಿಸು; ಪುಷ್ಕರ: ತಾವರೆ, ಕಮಲ; ಹೊರವಳಯ: ಆಚೆ; ಮೆರೆ: ಶೋಭಿಸು; ವಾರಾಶಿ: ಸಮುದ್ರ; ಇಳೆ: ಭೂಮಿ; ಕೋಟೆ: ದುರ್ಗ; ಬೆಳೆ: ವೃದ್ಧಿಸು; ಪರ್ವತ: ಗಿರಿ; ತಿಮಿರ: ಅಂಧಕಾರ; ಪರ್ಯಂತ: ವರೆಗೂ; ಸ್ವಾದ: ಸವಿ, ರುಚಿ; ಉದ: ನೀರು;

ಪದವಿಂಗಡಣೆ:
ನಳಿನನಾಭನ +ದುಗ್ಧ+ಶರಧಿಯ
ಬಳಸಿಕೊಂಡಿಹ +ಪುಷ್ಕರದ +ಹೊರ
ವಳಯದಲಿ +ಮೆರೆದಿಪ್ಪುದಾ+ ಸ್ವಾದೋದ +ವಾರಾಶಿ
ಇಳೆಗೆ ಕೋಟೆಯ ನಿಕ್ಕಿದಂತಿರೆ
ಬೆಳೆದ ಲೋಕಾಲೋಕ ಪರ್ವತ
ತಿಳಿವಡಲ್ಲಿಂದತ್ತ ತಿಮಿರವಜಾಂಡ ಪರ್ಯಂತ

ಅಚ್ಚರಿ:
(೧) ವಾರಾಶಿ, ಶರಧಿ – ಸಮನಾರ್ಥಕ ಪದ

ಪದ್ಯ ೫೨: ಯಾವ ನಗರವನ್ನು ನೋಡಲು ಪಾರ್ಥನಿಗೆ ಮಾತಲಿ ಹೇಳಿದನು?

ಯೋಗಿಗಳ ನೆಲೆನೀಡು ಬೊಮ್ಮದ
ಸಾಗರವು ಸನಕಾದಿ ಮುನಿಗಳ
ಭೋಗ ಭೂಮಿಯನಂತವೆನಿಸಿರ್ದುಪನಿಷತ್ತುಗಳು
ಆಗರವು ಮೂಲೋಕದರ್ಪಣ
ವಾಗಿ ದುಗ್ಧೋದಧಿಯೊಳೆಸೆವುದು
ಶ್ರೀಗಧೀಶನ ನಗರ ನೋಡೆಲೆ ಪಾರ್ಥ ನೀನೆಂದ (ಅರಣ್ಯ ಪರ್ವ, ೮ ಸಂಧಿ, ೫೨ ಪದ್ಯ)

ತಾತ್ಪರ್ಯ:
ಕ್ಷೀರಸಾಗರದಲ್ಲಿರುವ ಶ್ರೀನಗರವು ಯೋಗಿಗಳು ನೆಲೆಸುವ ಸ್ಥಾನ, ಬ್ರಹ್ಮಸಾಗರವು ಸನಕಾದಿಗಳು ಭೋಗಿಸುವ ಆತ್ಮಾನಂದ ಭೂಮಿ, ಅನಂತ ಉಪನಿಷತ್ತುಗಳ ಉಗಮಸ್ಥಾನ, ಮೂರು ಲೋಕಗಳ ಕನ್ನಡಿಯಂತಿರುವ ಶ್ರೀನಗರವನ್ನು ಪಾರ್ಥ ನೋಡು ಎಂದು ಮಾತಲಿಯು ಹೇಳಿದನು.

ಅರ್ಥ:
ಯೋಗಿ: ಋಷಿ; ನೆಲೆ: ಸ್ಥಾನ; ಬೊಮ್ಮ: ಬ್ರಹ್ಮ; ಸಾಗರ: ಸಮುದ್ರ; ಮುನಿ: ಋಷಿ; ಭೋಗ: ಸುಖವನ್ನು ಅನುಭವಿಸುವುದು; ಭೂಮಿ: ಧರಿತ್ರಿ; ಅನಂತ: ವಿಷ್ಣು, ಕೊನೆಯಿಲ್ಲದ್ದು; ಉಪನಿಷತ್ತು: ವೇದದ ಕೊನೆಯ ಭಾಗ; ಆಗರ: ಆಶ್ರಯ; ಮುಲೋಕ: ತ್ರಿಜಗತ್ತು; ದರ್ಪಣ: ಕನ್ನಡಿ, ಮುಕುರ; ದುಗ್ಧೋದಧಿ: ಕ್ಷೀರಸಾಗರ; ಎಸೆ: ತೋರು; ಶ್ರೀ: ಲಕ್ಷ್ಮೀ, ಐಶ್ವರ್ಯ; ಈಶ:ಒಡೆಯ; ನಗರ: ಪುರ; ನೋಡು: ವೀಕ್ಷಿಸು;

ಪದವಿಂಗಡಣೆ:
ಯೋಗಿಗಳ +ನೆಲೆನೀಡು +ಬೊಮ್ಮದ
ಸಾಗರವು +ಸನಕಾದಿ +ಮುನಿಗಳ
ಭೋಗ+ ಭೂಮಿ+ಅನಂತವ್+ ಎನಿಸಿರ್ದ್+ಉಪನಿಷತ್ತುಗಳು
ಆಗರವು +ಮೂಲೋಕ+ದರ್ಪಣ
ವಾಗಿ+ ದುಗ್ಧೋದಧಿಯೊಳ್+ಎಸೆವುದು
ಶ್ರೀಗಧೀಶನ+ ನಗರ+ ನೋಡೆಲೆ+ ಪಾರ್ಥ +ನೀನೆಂದ

ಅಚ್ಚರಿ:
(೧) ಶ್ರೀನಗರದ ಹಿರಿಮೆ – ಯೋಗಿಗಳ ನೆಲೆನೀಡು, ಬೊಮ್ಮದ ಸಾಗರವು, ಸನಕಾದಿ ಮುನಿಗಳ
ಭೋಗ ಭೂಮಿ, ಮೂಲೋಕದರ್ಪಣ

ಪದ್ಯ ೫೧: ಕ್ಷೀರಸಾಗರದ ವೈಶಿಷ್ಟ್ಯತೆಗಳೇನು?

ಚೆಲುವಿಕೆಗೆ ನೆಲೆಯೆನಿಸಿ ಮೆರೆವುದು
ಪ್ರಳಯವೆಂದೂಯಿಲ್ಲ ಲಕ್ಷ್ಮೀ
ನಿಲಯನಿಹನನವರತ ಸುಳಿಯವು ಮೃತ್ಯುಮಾಯೆಗಳು
ಬಳಕೆ ಸಲ್ಲದು ಕಲಿಯ ಕಾಲದ
ಹೊಲಬು ಹೊದ್ದದು ಹರಿಯ ರೂಪನು
ತಳೆದ ಪುರವನು ಕ್ಷೀರವಾರಿಧಿ ಬಳಸಿಕೊಂಡಿಹುದು (ಅರಣ್ಯ ಪರ್ವ, ೮ ಸಂಧಿ, ೫೧ ಪದ್ಯ)

ತಾತ್ಪರ್ಯ:
ವಿಷ್ಣುವಿನ ನಿಲಯವಾದ ಕ್ಷೀರಸಾಗರವು ಸೌಂದರ್ಯದ ನೆಲೆಯಾಗಿದೆ. ಅಲ್ಲಿ ಪ್ರಳಯವೆನ್ನುವುದು ಇಲ್ಲ. ಲಕ್ಷ್ಮೀರಮಣನು ಸದಾ ಇರುವುದರಿಂದ ಮೃತ್ಯುಮಾಯೆಗಳು ಅಲ್ಲಿ ಸುಳಿಯುವುದಿಲ್ಲ. ಕಲಿಯು ಅಲ್ಲಿಗೆ ಬರುವುದಿಲ್ಲ. ಕಾಲದ ದಾರಿ ಅದರ ಹತ್ತಿರಕ್ಕೂ ಬರುವುದಿಲ್ಲ. ಶ್ರೀಮನ್ಮಹಾವಿಷ್ಣುವಿರುವ ಅದನ್ನು ಕ್ಷೀರಸಾಗರವು ಆವರಿಸಿದೆ.

ಅರ್ಥ:
ಚೆಲುವು: ಸುಂದರ; ನೆಲೆ: ಆಲಯ, ಸ್ಥಾನ; ಮೆರೆ: ಶೋಭಿಸು; ಪ್ರಳಯ: ನಾಶ; ಲಕ್ಷ್ಮೀ; ಶ್ರೀ, ಐಶ್ವರ್ಯ; ನಿಳಯ: ಆಲಯ; ಅನವರತ: ಯಾವಾಗಲು; ಸುಳಿ: ಸೇರು; ಮೃತ್ಯು: ಸಾವು; ಮಾಯ: ಗಾರುಡಿ, ಇಂದ್ರಜಾಲ; ಬಳಕೆ: ಉಪಯೋಗಿಸುವಿಕೆ; ಸಲ್ಲದು: ಸರಿಹೊಂದದು; ಕಲಿ: ಯುಗದ ಹೆಸರು; ಕಾಲ: ಸಮಯ; ಹೊಲಬು: ದಾರಿ, ಪಥ; ಹೊದ್ದು: ಹೊಂದು, ಸೇರು; ಹರಿ: ವಿಷ್ಣು; ರೂಪ: ಆಕಾರ; ತಳೆದು: ಹೊಂದು; ಪುರ: ಊರು; ವಾರಿಧಿ: ಸಾಗರ; ಬಳಸು: ಆವರಿಸು;

ಪದವಿಂಗಡಣೆ:
ಚೆಲುವಿಕೆಗೆ +ನೆಲೆಯೆನಿಸಿ +ಮೆರೆವುದು
ಪ್ರಳಯವೆಂದೂಯಿಲ್ಲ+ ಲಕ್ಷ್ಮೀ
ನಿಲಯನಿಹನ್+ಅನವರತ +ಸುಳಿಯವು +ಮೃತ್ಯು+ಮಾಯೆಗಳು
ಬಳಕೆ+ ಸಲ್ಲದು +ಕಲಿಯ +ಕಾಲದ
ಹೊಲಬು +ಹೊದ್ದದು+ ಹರಿಯ+ ರೂಪನು
ತಳೆದ+ ಪುರವನು +ಕ್ಷೀರ+ವಾರಿಧಿ +ಬಳಸಿಕೊಂಡಿಹುದು

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹೊಲಬು ಹೊದ್ದದು ಹರಿಯ
(೨) ವಿಷ್ಣುವಿನ ಆಲಯದ ಹಿರಿಮೆ – ಬಳಕೆ ಸಲ್ಲದು ಕಲಿಯ ಕಾಲದ ಹೊಲಬು ಹೊದ್ದದು ಹರಿಯ ರೂಪನು ತಳೆದ ಪುರವನು ಕ್ಷೀರವರಿಧಿ ಬಳಸಿಕೊಂಡಿಹುದು

ಪದ್ಯ ೫೦: ವಿಷ್ಣುವಿನ ನಿಲಯ ಯಾವುದು?

ತಿಳಿವೊಡಾ ಸುರೆಯಿಂದ ಕುಶಘೃತ
ಜಲಧಿ ಕ್ರೌಂಚ ದ್ವೀಪವೆಂಬಿವ
ರಳತೆಗಿಮ್ಮಡಿಯಾಗಿ ದಧಿಯ ಸಮುದ್ರವಲ್ಲಿಂದ
ಇಳೆಯ ಮೇಲೆಸೆದಿಪ್ಪ ಶಾಕದ
ಬಳಿಯ ದುಗ್ಧವಿದೊಂದನೊಂದನು
ಬಳಸಿಕೊಂಡಿಹವಬುಜನಾಭನ ನಿಳಯವದು ನೋಡು (ಅರಣ್ಯ ಪರ್ವ, ೮ ಸಂಧಿ, ೫೦ ಪದ್ಯ)

ತಾತ್ಪರ್ಯ:
ಸುರಾಸಮುದ್ರದಿಮ್ದ ಆಚೆ ಕುಶದ್ವೀಪ, ಅದನ್ನು ಘೃತ ಸಮುದ್ರವು ಬಳಸಿದೆ. ಅಲ್ಲಿಂದ ಮುಂದೆ ಕ್ರೌಂಚದ್ವೀಪ, ಅದನ್ನು ಮೊಸರಿನ ಸಮುದ್ರವು ಬಳಸಿದೆ. ಅಲ್ಲಿಂದ ಮುಂದೆ ಶಾಕದ್ವೀಪ, ಅದನ್ನು ಕ್ಷೀರ ಸಮುದ್ರವು ಬಳಸಿದೆ. ಆ ಕ್ಷೀರ ಸಮುದ್ರವು ವಿಷ್ಣುವಿನ ಆಲಯ, ಅದನ್ನು ಗಮನಿಸು ಎಂದು ಮಾತಲಿಯು ವಿವರಿಸಿದನು.

ಅರ್ಥ:
ತಿಳಿ: ಗ್ರಹಿಸು, ಕಲಿ; ಸುರೆ: ಸೋಮರಸ; ಘೃತ: ತುಪ್ಪ; ಜಲಧಿ: ಸಾಗರ; ಅಳತೆ: ವಿಸ್ತಾರ; ಇಮ್ಮಡಿ:ಎರಡು ಪಟ್ಟು; ದಧಿ: ಮೊಸರು; ಸಮುದ್ರ: ಸಾಗರ; ಇಳೆ: ಭೂಮಿ; ಎಸೆ: ತೋರು; ಬಳಿ: ಹತ್ತಿರ; ದುಗ್ಧ: ಹಾಲು; ಬಳಸು: ಆವರಿಸು; ಅಬುಜನಾಭ: ಕಮಲನಾಭ (ವಿಷ್ಣು); ನಿಳಯ: ಮನೆ; ನೋಡು: ವೀಕ್ಷಿಸು;

ಪದವಿಂಗಡಣೆ:
ತಿಳಿವೊಡ್+ಆ+ ಸುರೆಯಿಂದ +ಕುಶ+ಘೃತ
ಜಲಧಿ+ ಕ್ರೌಂಚ +ದ್ವೀಪವೆಂಬ್+ಇವರ್
ಅಳತೆಗ್+ಇಮ್ಮಡಿಯಾಗಿ +ದಧಿಯ+ ಸಮುದ್ರವ್+ಅಲ್ಲಿಂದ
ಇಳೆಯ +ಮೇಲೆಸೆದಿಪ್ಪ+ ಶಾಕದ
ಬಳಿಯ +ದುಗ್ಧವಿದ್+ಒಂದನೊಂದನು
ಬಳಸಿಕೊಂಡಿಹವ್+ಅಬುಜನಾಭನ+ ನಿಳಯವದು+ ನೋಡು

ಅಚ್ಚರಿ:
(೧) ದ್ವೀಪಗಳ ಹೆಸರು – ಕುಶ, ಕ್ರೌಂಚ, ಶಾಕ
(೨) ಸಾಗರಗಳ ಹೆಸರು – ಘೃತಸಾಗರ, ಸುರಾಸಮುದ್ರ, ದಧಿಯ ಸಾಗರ, ದುಗ್ಧಸಾಗರ

ಪದ್ಯ ೪೯: ಶಾಲ್ಮಲೀ ಮತ್ತು ಪ್ಲಕ್ಷದ್ವೀಪಗಳು ಎಲ್ಲಿವೆ?

ವರುಷವನು ಗಿರಿಗಳನು ಬಳಸಿಹ
ಪಿರಿಯ ಲವಣ ಸಮುದ್ರ ತದನಂ
ತರದಿ ಪ್ಲಕ್ಷದ್ವೀಪ ಇಕ್ಷ್ ಸಮುದ್ರವಲ್ಲಿಂದ
ಇರಲು ಶಾಲ್ಮಲವದರ ಹೊರಗಣ
ಸುರೆಯ ಶರಧಿಯನೊಂದೊನೊಂದಾ
ವರಸಿ ಪರಿಭಾವಿಸಲು ತದಿವ್ಗುನಂಗಳಾಗಿಹವು (ಅರಣ್ಯ ಪರ್ವ, ೮ ಸಂಧಿ, ೪೯ ಪದ್ಯ)

ತಾತ್ಪರ್ಯ:
ಈ ಮೊದಲು ಹೇಳಿದ ವರ್ಷಗಳನ್ನು ಬೆಟ್ಟಗಳನ್ನು ಲವಣ ಸಮುದ್ರವು ಸುತ್ತುವರೆದಿದೆ. ಅಲ್ಲಿಂದ ಮುಂದೆ ಪ್ಲಕ್ಷದ್ವೀಪ, ಅದನ್ನು ಕಬ್ಬಿನ ಹಾಲಿನ ಸಮುದ್ರವು ಸುತ್ತುವರೆದಿದೆ, ಅಲ್ಲಿಂದ ಮುಂದೆ ಶಾಲ್ಮಲೀ ದ್ವೀಪ ಅದನ್ನು ಸುರೆಯ ಸಮುದ್ರವು ಸುತ್ತುವರೆದಿದೆ, ಇವು ಒಂದಕ್ಕೊಂದು ಎರಡರಷ್ಟಿವೆ.

ಅರ್ಥ:
ವರುಷ: ಭೂ ಮಂಡಲದ ಒಂಭತ್ತು ವಿಭಾಗಗಳಲ್ಲಿ ಒಂದು; ಗಿರಿ: ಬೆಟ್ಟ; ಬಳಸು: ಆವರಿಸು; ಪಿರಿ: ದೊಡ್ಡ; ಲವಣ: ಉಪ್ಪು; ಸಮುದ್ರ: ಸಾಗರ; ನಂತರ: ಆಮೇಲೆ; ಇಕ್ಷು: ಕಬ್ಬು; ಆವರಿಸು: ಸುತ್ತುವರಿ; ಭಾವಿಸು: ತಿಳಿ; ದ್ವಿಗುಣ: ಎರಡು ಪಟ್ಟು;

ಪದವಿಂಗಡಣೆ:
ವರುಷವನು +ಗಿರಿಗಳನು+ ಬಳಸಿಹ
ಪಿರಿಯ +ಲವಣ +ಸಮುದ್ರ +ತದನಂ
ತರದಿ+ ಪ್ಲಕ್ಷದ್ವೀಪ+ ಇಕ್ಷು+ ಸಮುದ್ರವ್+ಅಲ್ಲಿಂದ
ಇರಲು +ಶಾಲ್ಮಲವ್+ಅದರ +ಹೊರಗಣ
ಸುರೆಯ +ಶರಧಿಯನ್+ಒಂದೊನ್+ಒಂದ್
ಆವರಸಿ+ ಪರಿಭಾವಿಸಲು +ತದ್ವಿಗುಣಂಗಳಾಗಿಹವು

ಅಚ್ಚರಿ:
(೧) ದ್ವೀಪಗಳ ಹೆಸರು – ಪ್ಲಕ್ಷ, ಶಾಲ್ಮಲ
(೨) ಸಮುದ್ರಗಳ ವಿವರ – ಇಕ್ಷುಸಮುದ್ರ, ಸುರೆಯ ಶರಧಿ
(೩) ಸಮುದ್ರ, ಶರಧಿ – ಸಮನಾರ್ಥಕ ಪದ

ಪದ್ಯ ೪೮: ಕಿಂಪುರುಷಕ್ಕೆ ಪಾಲಕರಾರು?

ರಾಮ ಕಿಂಪುರುಷಕ್ಕೆ ಭಾರತ
ಸೀಮೆಯಲಿ ನಾರಾಯಣನು ನರ
ನಾಮಧಾರಕ ಹನುಮ ವಸುಧಾದೇವಿ ನಾರದನು
ಆ ಮನು ಜಗಚ್ಚಕ್ಷು ಲಕ್ಷ್ಮಿಯು
ಪ್ರೇಮದಿಂ ಪ್ರಹ್ಲಾದ ನಿಜ ನಿ
ಸ್ಸೀಮ ಭದ್ರಶ್ರವ ಸದಾಶಿವನಿವರು ಪಾಲಕರು (ಅರಣ್ಯ ಪರ್ವ, ೮ ಸಂಧಿ, ೪೮ ಪದ್ಯ)

ತಾತ್ಪರ್ಯ:
ಶ್ರೀರಾಮನು ಕಿಂಪುರುಷ ವರ್ಷಕ್ಕೆ ಪಾಲಕ, ಭರವರ್ಷಕ್ಕೆ ನರ, ನಾರಾಯನ, ಹನುಮಂತ, ಭೂದೇವಿ, ನಾರದ, ಮನು, ಸೂರ್ಯ, ಲಕ್ಷ್ಮೀದೇವಿ, ಪ್ರಹ್ಲಾದ, ಭದ್ರಶ್ರವ, ಸದಾಶಿವ ಇವರು ಪಾಲಕರು.

ಅರ್ಥ:
ಸೀಮೆ: ಎಲ್ಲೆ, ಗಡಿ; ವಸುಧ: ಭೂಮಿ; ಚಕ್ಷು: ಕಣ್ಣು; ನಿಸ್ಸೀಮ: ಎಲ್ಲೆಯಿಲ್ಲದುದು; ಪ್ರೇಮ: ಒಲವು;

ಪದವಿಂಗಡಣೆ:
ರಾಮ+ ಕಿಂಪುರುಷಕ್ಕೆ +ಭಾರತ
ಸೀಮೆಯಲಿ +ನಾರಾಯಣನು +ನರ
ನಾಮಧಾರಕ+ ಹನುಮ +ವಸುಧಾದೇವಿ+ ನಾರದನು
ಆ +ಮನು+ ಜಗ+ಚಕ್ಷು +ಲಕ್ಷ್ಮಿಯು
ಪ್ರೇಮದಿಂ +ಪ್ರಹ್ಲಾದ +ನಿಜ +ನಿ
ಸ್ಸೀಮ +ಭದ್ರಶ್ರವ +ಸದಾಶಿವನಿವರು +ಪಾಲಕರು

ಅಚ್ಚರಿ:
(೧) ಸೂರ್ಯನನ್ನು ಜಗಚ್ಚಕ್ಷು ಎಂದು ಕರೆದಿರುವುದು

ಪದ್ಯ ೪೭: ವರ್ಷದ ಅಧಿಪತಿಗಳಾರು?

ವರುಷದೊಡೆಯನಿಳಾವೃತಕೆ ಸಂ
ಕರುಷಣನು ಭದ್ರಾಶ್ವದೊಳು ಹಯ
ಶಿರನು ಹರಿವರುಷಕ್ಕೆ ನರಹರಿ ಕೇತುಮಾಲದಲಿ
ಸಿರಿಯರಸ ರಮ್ಯಕಕೆಮತ್ಸ್ಯನು
ಪಿರಿಯಕಮಠ ಹಿರಣ್ಮಯಕೆ ಕುರು
ವರುಷದಲ್ಲಿ ಮಹಾವರಾಹನು ಪಾರ್ಥ ಕೇಳೆಂದ (ಅರಣ್ಯ ಪರ್ವ, ೮ ಸಂಧಿ, ೪೮ ಪದ್ಯ)

ತಾತ್ಪರ್ಯ:
ಇಳಾವೃತ ವರ್ಷಕ್ಕೆ ಸಂಕರ್ಷಣ, ಭದ್ರಾಶ್ವದಲ್ಲಿ ಹಯವದನನು, ಹರಿವರ್ಷಕ್ಕೆ ನರಹರಿ, ಕೇತುಮಾಲಕ್ಕೆ ಲಕ್ಷ್ಮೀಪತಿ, ರಮ್ಯಕ ವರ್ಷಕ್ಕೆ ಮತ್ಸ್ಯ, ಹಿರಣ್ಮಯ ವರ್ಷಕ್ಕೆ ಕೂರ್ಮ, ಕುರುವರ್ಷಕ್ಕೆ ವರಾಹ ಇವರು ಅಧಿಪತಿಗಳು.

ಅರ್ಥ:
ವರ್ಷ: ಭೂ ಮಂಡಲದ ಒಂಭತ್ತು ವಿಭಾಗಗಳಲ್ಲಿ ಒಂದು; ಒಡೆಯ: ದೊರೆ; ಪಿರಿ: ದೊಡ್ಡದ್ದು; ಶಿರ: ತಲೆ;

ಪದವಿಂಗಡಣೆ:
ವರುಷದ್+ಒಡೆಯನ್+ಇಳಾವೃತಕೆ +ಸಂ
ಕರುಷಣನು +ಭದ್ರಾಶ್ವದೊಳು +ಹಯ
ಶಿರನು +ಹರಿವರುಷಕ್ಕೆ+ ನರಹರಿ +ಕೇತುಮಾಲದಲಿ
ಸಿರಿಯರಸ+ ರಮ್ಯಕಕೆ+ಮತ್ಸ್ಯನು
ಪಿರಿಯ+ಕಮಠ +ಹಿರಣ್ಮಯಕೆ+ ಕುರು
ವರುಷದಲ್ಲಿ +ಮಹಾವರಾಹನು +ಪಾರ್ಥ +ಕೇಳೆಂದ

ಅಚ್ಚರಿ:
(೧) ವಿಷ್ಣುವನ್ನು ಸಿರಿಯರಸ ಎಂದು ಕರೆದಿರುವುದು

ಪದ್ಯ ೪೬: ನೀಲಗಿರಿಯ ವಿಸ್ತಾರವೆಷ್ಟು?

ನೀಲಗಿರಿಯಿಕ್ಕೆಲಕೆ ವಾರಿಧಿ
ಮೇಲೆನಿಪ್ಪತ್ರಿಶೃಂಗವಿವು ಮೈ
ನೀಳದಲಿ ಪೂರ್ವಾಪರದ ಜಲನಿಧಿಯ ಮುಟ್ಟಿಹವು
ಹೇಳಿದೆಂಟುಪಪರ್ವತಾಗ್ರವಿ
ಶಾಲ ತಾನೆಂಬತ್ತು ಯೋಜನ
ಕೇಳಿಳಾವೃತ ಮೇಲೆಯಾಗಿಹ ಗಿರಿಯ ಲೆಕ್ಕವನು (ಅರಣ್ಯ ಪರ್ವ, ೮ ಸಂಧಿ, ೪೬ ಪದ್ಯ)

ತಾತ್ಪರ್ಯ:
ನೀಲ ಪರ್ವತದ ಎರಡೂ ಕಡೆಗೆ ಸಮುದ್ರದ ದಡದಿಂದ ಮೇಲೆ ಹಬ್ಬಿರುವ ಪರ್ವತಗಳಲ್ಲಿ ಮೂರು ಶಿಖರಗಳಿವೆ. ಇವಲ್ಲದೆ ಇಳಾವೃತ ವರ್ಷಕ್ಕೆ ಸೀಮೆಯಾಗಿ ಎಂಟು ಉಪ ಪರ್ವತಗಳಿವೆ.

ಅರ್ಥ:
ಗಿರಿ: ಬೆಟ್ಟ; ಇಕ್ಕೆಲ: ಎರಡು ಬದಿ; ವಾರಿಧಿ: ಸಮುದ್ರ; ಶೃಂಗ: ಶಿಖರ; ತ್ರಿ: ಮೂರು; ಮೈ: ತನು; ನೀಳ: ವಿಸ್ತಾರ, ಹರಹು; ಪೂರ್ವ: ಮೂಡಣ; ಅಪರ: ಪಶ್ಚಿಮದಿಕ್ಕು ; ಜಲನಿಧಿ: ಸಾಗರ; ಮುಟ್ಟು: ತಾಗು, ತಗಲು; ವಿಶಾಲ: ವಿಸ್ತಾರ; ಯೋಜನ: ಅಳತೆಯ ಪ್ರಮಾಣ; ಲೆಕ್ಕ: ಎಣಿಕೆ;

ಪದವಿಂಗಡಣೆ:
ನೀಲಗಿರಿ+ಇಕ್ಕೆಲಕೆ+ ವಾರಿಧಿ
ಮೇಲೆನಿಪ್ಪ+ತ್ರಿಶೃಂಗವ್+ಇವು+ ಮೈ
ನೀಳದಲಿ +ಪೂರ್ವ+ಅಪರದ +ಜಲನಿಧಿಯ +ಮುಟ್ಟಿಹವು
ಹೇಳಿದ್+ಎಂಟು+ಪಪರ್ವತ+ಅಗ್ರ+ವಿ
ಶಾಲ +ತಾನ್+ಎಂಬತ್ತು +ಯೋಜನ
ಕೇಳ್+ಇಳಾವೃತ+ ಮೇಲೆಯಾಗಿಹ +ಗಿರಿಯ +ಲೆಕ್ಕವನು

ಅಚ್ಚರಿ:
(೧) ಜಲನಿಧಿ, ವಾರಿಧಿ – ಸಮನಾರ್ಥಕ ಪದ
(೨) ನೀಲಗಿರಿಯ ವಿಸ್ತಾರವನ್ನು ತಿಳಿಸುವ ಪದ್ಯ

ಪದ್ಯ ೪೫: ಕೈಲಾಸ ಪರ್ವತವು ಎಲ್ಲಿದೆ?

ದೇವಕೂಟದ ಜಠರವೆಂಬಿವು
ಭಾವಿಸಲು ಮಾಲ್ಯವತದಿಕ್ಕೆಲ
ನಾವಿಧದಿ ಕೈಲಾಸ ಪರ್ವತ ಗಂಧಮಾದನವು
ಭೂವಳಯದಲಿ ಪುಣ್ಯವಂತರು
ಭಾವಿಸುವೊಡಾ ಈಶ ದಿಕ್ಕಿನ
ದೀವಕೂಟಡ ನಿಕರ ಪಡುವಣ ಗಿರಿಯ ಪ್ರಾಂತ್ಯದಲಿ (ಅರಣ್ಯ ಪರ್ವ, ೮ ಸಂಧಿ, ೪೫ ಪದ್ಯ)

ತಾತ್ಪರ್ಯ:
ಮಾಲ್ಯವಂತ ಪರ್ವತದ ಎರಡು ಕಡೆಯೂ ದೇವ್ಕೂಟದ ಜಠರದಂತಿರುವ ಕೈಲಾಸ ಗಂಧಮಾದನವೆಂಬ ಪರ್ವತಗಳಿವೆ. ದೇವಗಿರಿಯ ಈಶಾನ್ಯ ದಿಕ್ಕಿನಲ್ಲಿ ಪುಣ್ಯವಂತರು ಸೇರುವ ಗಿರಿಗಳ ಪ್ರಾಂತ್ಯವಿದೆ.

ಅರ್ಥ:
ದೇವ: ಸುರರು; ಕೂಟ: ಗುಂಪು; ಜಠರ: ಹೊಟ್ಟೆ; ಭಾವಿಸು: ತಿಳಿ; ಇಕ್ಕೆಲ: ಎರಡು ಕಡೆ; ಭೂವಳಯ: ಭೂಪ್ರದೇಶ; ಪುಣ್ಯ: ಸದಾಚಾರ; ಭಾವಿಸು: ತಿಳಿ, ಗೊತ್ತುಪಡಿಸಿಕೊಳ್ಳು; ಈಶನ್ಯ:ಉತ್ತರದಿಕ್ಕಿಗೂ ಪೂರ್ವ ದಿಕ್ಕಿಗೂ ಮಧ್ಯೆ ಇರುವ ದಿಕ್ಕು; ಈಶ: ಒಡೆಯ; ದಿಕ್ಕು: ದಿಶೆ; ದೇವಕೂಟ: ಸುರರ ಗುಂಪು; ನಿಕರ: ಗುಂಪು; ಪಡುವಣ: ಪಶ್ಚಿಮ; ಗಿರಿ: ಬೆಟ್ಟ; ಪ್ರಾಂತ್ಯ: ರಾಜ್ಯ;

ಪದವಿಂಗಡಣೆ:
ದೇವಕೂಟದ +ಜಠರವೆಂಬಿವು
ಭಾವಿಸಲು +ಮಾಲ್ಯವತದ್+ಇಕ್ಕೆಲ
ನಾವಿಧದಿ+ ಕೈಲಾಸ +ಪರ್ವತ +ಗಂಧಮಾದನವು
ಭೂವಳಯದಲಿ+ ಪುಣ್ಯವಂತರು
ಭಾವಿಸುವೊಡ್+ಆ+ ಈಶ+ ದಿಕ್ಕಿನ
ದೇವಕೂಟಡ +ನಿಕರ +ಪಡುವಣ+ ಗಿರಿಯ +ಪ್ರಾಂತ್ಯದಲಿ

ಅಚ್ಚರಿ:
(೧) ದೇವಕೂಟ – ೧, ೬ ಸಾಲಿನ ಮೊದಲ ಪದ
(೨) ಕೈಲಾಸ ಪರ್ವತದ ವಿವರ – ಮಾಲ್ಯವತದಿಕ್ಕೆಲನಾವಿಧದಿ ಕೈಲಾಸ ಪರ್ವತ ಗಂಧಮಾದನವು

ಪದ್ಯ ೪೪: ಗಿರಿಗಳ ವಿಸ್ತಾರವೆಷ್ಟು?

ವರುಷ ಮಧ್ಯದ ಪರ್ವತಂಗಳ
ಹರಹು ತಾನೆರಡೆರಡು ಸಾಸಿರ
ವರುಷ ನವನವ ನವಸಹಸ್ರವದಾರು ಮಧ್ಯದಲಿ
ವರುಷವದು ಇಪ್ಪತ್ತ ನಾಲ್ಕರ
ಪರಿಗಣಿತ ಮೂಡಣದು ಪಡುವಣ
ದೆರಡು ತಾನದರಂತೆ ಮೆರೆವುದು ಹೊರಗೆ ಲವಣಾಬ್ಧಿ (ಅರಣ್ಯ ಪರ್ವ, ೮ ಸಂಧಿ, ೪೪ ಪದ್ಯ)

ತಾತ್ಪರ್ಯ:
ಒಂಬತ್ತು ವರ್ಷಗಳ (ಕುರು, ಹಿರಣ್ಮಯ, ರಮ್ಯಕ, ಇಳಾವೃತ, ಹರಿ, ಕಿಂಪುರುಷ, ಭರತ, ಭದ್ರಾಶ್ವ, ಕೇತುಮಾಲ) ನಡುವಿರುವ ಗಿರಿಗಳು ಎರಡೆರಡು ಸಹಸ್ರ ಯೋಜನ ವಿಸ್ತಾರವಾಗಿವೆ. ಮಧ್ಯದಲ್ಲಿ ಆರು ಸಹಸ್ರ ಯೋಜನ ವಿಸ್ತಾರದ ಪರ್ವತಗಳಿವೆ. ಹೀಗೆ ಪೂರ್ವ, ಪಶ್ಚಿಮ ದಿಕ್ಕುಗಳಲ್ಲಿ ಇಪ್ಪತ್ನಾಲ್ಕು ಯೋಜನ ವಿಸ್ತಾರದ ಪರ್ವತಗಳಿವೆ. ಇವು ಲವಣ ಸಮುದ್ರದವರೆಗೂ ಹಬ್ಬಿವೆ.

ಅರ್ಥ:
ವರ್ಷ: ಭೂ ಮಂಡಲದ ವಿಭಾಗ; ಮಧ್ಯ: ನಡುವೆ; ಪರ್ವತ: ಗಿರಿ, ಬೆಟ್ಟ; ಹರಹು: ವಿಸ್ತಾರ; ಸಾಸಿರ: ಸಹಸ್ರ, ಸಾವಿರ; ನವ: ಹೊಸ; ಪರಿಗಣನೆ: ಗಮನ, ಲೆಕ್ಕಾಚಾರ; ಮೂಡಣ: ಪೂರ್ವ; ಪಡುವಣ: ಪಶ್ಚಿಮ; ಮೆರೆ: ಹೊಳೆ, ಪ್ರಕಾಶಿಸು; ಹೊರಗೆ: ಆಚೆ; ಲವಣ: ಉಪ್ಪು; ಅಬ್ಧಿ: ಸಾಗರ;

ಪದವಿಂಗಡಣೆ:
ವರುಷ +ಮಧ್ಯದ +ಪರ್ವತಂಗಳ
ಹರಹು+ ತಾನ್+ಎರಡೆರಡು +ಸಾಸಿರ
ವರುಷ +ನವನವ +ನವ+ಸಹಸ್ರವದ್+ಆರು+ ಮಧ್ಯದಲಿ
ವರುಷವದು +ಇಪ್ಪತ್ತ +ನಾಲ್ಕರ
ಪರಿಗಣಿತ+ ಮೂಡಣದು +ಪಡುವಣದ್
ಎರಡು+ ತಾನದರಂತೆ +ಮೆರೆವುದು+ ಹೊರಗೆ +ಲವಣಾಬ್ಧಿ

ಅಚ್ಚರಿ:
(೧) ಎರಡೆರಡು , ನವನವ – ಜೋಡಿ ಪದಗಳ ಬಳಕೆ