ಪದ್ಯ ೫೯: ದಿಕ್ಪಾಲಕರ ನಗರಗಳಾವುವು?

ಸುರಪನದುವೇ ಸ್ವರ್ಗ ಸಾರವು
ನಿರುತದಲಿ ಸಂಯಮನಿಯೆಂಬಾ
ಪುರವು ಕಾಲನ ನಗರಿ ತೆಂಕಲು ಪಶ್ಚಿಮಾದ್ರಿಯಲಿ
ವರುಣನದು ಶುದ್ಧಿಮತಿ ಯಕ್ಷೇ
ಶ್ವರಗೆಸೆವುದಾ ಕಾಂತಿಮತಿ ಶಿಖಿ
ನಿರುತಿ ಮರುದೀಶಾನರಿಗೆಯವರವರ ನಾಮದಲಿ (ಅರಣ್ಯ ಪರ್ವ, ೮ ಸಂಧಿ, ೫೯ ಪದ್ಯ್)

ತಾತ್ಪರ್ಯ:
ದೇವೇಂದ್ರನ ನಗರವು ಅತ್ಯುತ್ತಮವಾದ ಸ್ವರ್ಗ. ಸಂಯಮನಿಯೆನ್ನುವುದು ಯಮನ ಊರು ಅದು ದಕ್ಷಿಣ ದಿಕ್ಕಿನಲ್ಲಿದೆ. ಪಶ್ಚಿಮದಲ್ಲಿ ವರುಣನಿರುವ ಶುದ್ಧಮತಿ ಎಂಬ ನಗರ. ಕುಬೇರನಿರುವುದು ಕಾಂತಿಮತಿ (ಅಲಕಾನಗರಿ), ಅಗ್ನಿ, ವಾಯು, ನಿರಋತಿ, ಈಶಾನರ ನಗರಗಳು ಅವರವರ ಹೆಸರನ್ನೇ ಹೊಂದಿವೆ.

ಅರ್ಥ:
ಸುರಪ: ದೇವತೆಗಳ ಒಡೆಯ, ಇಂದ್ರ; ಸ್ವರ್ಗ: ನಾಕ; ಸಾರ: ರಸ; ನಿರುತ: ನಿಶ್ಚಯ; ಕಾಲ: ಯಮನ್; ನಗರ: ಊರು; ತೆಂಕಲು: ದಕ್ಷಿಣ; ಪಶ್ಚಿಮ: ಪಡುವಣ; ಅದ್ರಿ: ಬೆಟ್ಟ; ವರುಣ: ನೀರಿನ ಅಧಿದೇವತೆ, ಪಶ್ಚಿಮ ದಿಕ್ಕಿನ ಒಡೆಯ; ಯಕ್ಷೇಶ್ವರ: ಕುಬೇರ; ಶಿಖಿ: ಅಗ್ನಿ; ಮರು: ಮಾರುತಿ, ವಾಯು; ನಾಮ: ಹೆಸರು;

ಪದವಿಂಗಡಣೆ:
ಸುರಪನದುವೇ +ಸ್ವರ್ಗ +ಸಾರವು
ನಿರುತದಲಿ +ಸಂಯಮನಿ+ಎಂಬ+ಆ
ಪುರವು +ಕಾಲನ +ನಗರಿ+ ತೆಂಕಲು+ ಪಶ್ಚಿಮಾದ್ರಿಯಲಿ
ವರುಣನದು +ಶುದ್ಧಿಮತಿ+ ಯಕ್ಷೇ
ಶ್ವರಗ್+ಎಸೆವುದ್+ಆ+ ಕಾಂತಿಮತಿ +ಶಿಖಿ
ನಿರುತಿ +ಮರುತ್+ಈಶಾನರಿಗೆ+ಅವರವರ +ನಾಮದಲಿ

ಅಚ್ಚರಿ:
(೧) ನಗರಗಳ ಹೆಸರು – ಸ್ವರ್ಗ, ಸಂಯಮನಿ, ಶುದ್ಧಿಮತಿ, ಕಾಂತಿಮತಿ

ನಿಮ್ಮ ಟಿಪ್ಪಣಿ ಬರೆಯಿರಿ