ಪದ್ಯ ೬೩: ಸೂರ್ಯನ ದಾರಿ ಯಾವುದು?

ಹರಿವ ಗಾಲಿಯ ನಾಭಿ ಮೂಲ
ಕ್ಕುರುವ ಚಾತುರ್ಮಾಸಗಳು ಘನ
ತರದ ಷಡುರುತುವಯನ ಚಕ್ರವು ಚಾರುಚತುರಯುಗ
ತರವಿಡಿದ ಸಂವತ್ಸರವು ಘನ
ತರದ ಪರಿವತ್ಸರ ವಿಡಾವ
ತ್ಸರವು ವಿದ್ವತ್ಸರವು ವತ್ಸರವೆಂದು ಮೊಳೆಯಾಯ್ತು (ಅರಣ್ಯ ಪರ್ವ, ೮ ಸಂಧಿ, ೬೩ ಪದ್ಯ)

ತಾತ್ಪರ್ಯ:
ಸೂರ್ಯನ ರಥದ ಚಕ್ರವೆಂದರೆ ನಾಲ್ಕು ಯುಗಗಳು. ಅದರ ಗುಂಬವು ಚಾತುರ್ಮಾಸಗಳು, ಆರು ಋತುಗಳೇ ಅದರ ದರಿ, ಸಂವತ್ಸರ, ಪರಿವತ್ಸರ, ಇಡಾವತ್ಸರ, ವಿದ್ವತ್ಸರ, ವತ್ಸರಗಳೆಂಬುವು ಮೊಳೆಗಳು.

ಅರ್ಥ:
ಹರಿ: ಚಲಿಸು; ಗಾಲಿ: ಚಕ್ರ; ನಾಭಿ: ಹೊಕ್ಕಳು; ಮೂಲ: ಬುಡ; ಉರುವ: ಶ್ರೇಷ್ಠ; ಮಾಸ: ತಿಂಗಳು; ಘನ: ಗಟ್ಟಿ, ಭಾರ ಷಡುರುತು: ೬ ಋತುಗಳು; ಚಕ್ರ: ಗಾಲಿ; ಚಾರು: ಸುಂದರ; ಚತುರ: ನಾಲ್ಕು; ಯುಗ: ದೀರ್ಘವಾದ ಕಾಲಾವಧಿ; ತರ: ಸಾಲು; ಸಂವತ್ಸರ: ವರ್ಷ; ಮೊಳೆ: ಕುಡಿ, ಮೊಳಕೆ;

ಪದವಿಂಗಡಣೆ:
ಹರಿವ +ಗಾಲಿಯ +ನಾಭಿ +ಮೂಲ
ಕ್ಕುರುವ +ಚಾತುರ್ಮಾಸಗಳು +ಘನ
ತರದ +ಷಡುರುತುವಯನ +ಚಕ್ರವು +ಚಾರು+ಚತುರಯುಗ
ತರವಿಡಿದ +ಸಂವತ್ಸರವು +ಘನ
ತರದ+ ಪರಿವತ್ಸರ +ವಿಡಾವ
ತ್ಸರವು +ವಿದ್ವತ್ಸರವು +ವತ್ಸರವೆಂದು +ಮೊಳೆಯಾಯ್ತು

ಅಚ್ಚರಿ:
(೧) ಸಂವತ್ಸರ, ಪರಿವತ್ಸರ, ವತ್ಸರ – ಸಮನಾರ್ಥಕ ಪದಗಳು

ಪದ್ಯ ೬೨: ಸೂರ್ಯನ ರಥದ ವಿಸ್ತಾರವೆಷ್ಟು?

ಗಾಲಿ ಮಾನಸ ಗಿರಿಯ ಶಿಖರದ
ಮೇಲೆ ತಿರುಗುವುದೊಂದು ಕಡೆ ಸುರ
ಶೈಲದಲಿ ಬಿಗಿದಚ್ಚು ಕೋಟಿಯ ಮೇಲೆಯೈವತ್ತು
ಏಳುಲಕ್ಕದ ನೀಳ ರಥದ ವಿ
ಶಾಲವದು ಮುವ್ವತ್ತು ಸಾವಿರ
ಮೇಲೆ ಧ್ರುವ ಮಂಡಲಕೆ ಬಿಗಿದಿಹುದನಿಲಪಾಶದಲಿ (ಅರಣ್ಯ ಪರ್ವ, ೮ ಸಂಧಿ, ೬೨ ಪದ್ಯ)

ತಾತ್ಪರ್ಯ:
ಸೂರ್ಯನ ರಥವು ಒಂದು ಕೋಟಿ ಐವತ್ತೇಳು ಲಕ್ಷ ಯೋಜನ ಉದ್ದವಾಗಿದೆ. ಮೂವತ್ತು ಸಾವಿರ ಯೋಜನ ವಿಸ್ತಾರವಾಗಿದೆ. ಹಿಮಾಲಯದಲ್ಲಿ ಅದನ್ನು ಬಿಗಿದಿರುವ ಅಚ್ಚಿದೆ, ಮಾನಸಗಿರಿಯ ಮೇಲೆ ತಿರುಗುತ್ತದೆ. ಧೃವ ಮಂಡಲಕ್ಕೆ ಅನಿಲ ಪಾಶದಿಂದ ಬಿಗಿದಿದೆ.

ಅರ್ಥ:
ಗಾಲಿ: ಚಕ್ರ; ಗಿರಿ: ಬೆಟ್ಟ; ಶಿಖರ: ತುದಿ, ಅಗ್ರ; ತಿರುಗು: ಸುತ್ತು; ಕಡೆ: ಕೊನೆ; ಸುರ: ದೇವತೆ; ಶೈಲ: ಬೆಟ್ಟ; ಲಕ್ಕ: ಲಕ್ಷ; ನೀಳ: ಉದ್ದ; ರಥ: ಬಂಡಿ; ವಿಶಾಲ: ವಿಸ್ತಾರ; ಸಾವಿರ: ಸಹಸ್ರ; ಮಂಡಲ: ಜಗತ್ತು, ವರ್ತುಲಾಕಾರ; ಬಿಗಿ: ಭದ್ರವಾಗಿರುವುದು; ಅನಿಲ: ವಾಯು; ಪಾಶ: ಹಗ್ಗ;

ಪದವಿಂಗಡಣೆ:
ಗಾಲಿ +ಮಾನಸ +ಗಿರಿಯ +ಶಿಖರದ
ಮೇಲೆ +ತಿರುಗುವುದೊಂದು +ಕಡೆ+ ಸುರ
ಶೈಲದಲಿ +ಬಿಗಿದಚ್ಚು +ಕೋಟಿಯ +ಮೇಲೆ+ಐವತ್ತು
ಏಳು+ಲಕ್ಷದ+ ನೀಳ +ರಥದ +ವಿ
ಶಾಲವದು +ಮುವ್ವತ್ತು +ಸಾವಿರ
ಮೇಲೆ +ಧ್ರುವ +ಮಂಡಲಕೆ+ ಬಿಗಿದಿಹುದ್+ಅನಿಲ+ಪಾಶದಲಿ

ಪದ್ಯ ೬೧: ಮಾತಲಿಯು ಅರ್ಜುನನಿಗೆ ಯಾವುದರ ಬಗ್ಗೆ ತಿಳಿಸಲು ಮುಂದಾದನು?

ಧರೆಯ ವರುಷ ದ್ವೀಪ ಗಿರಿಗಳ
ಶರಧಿಗಳ ಸುರಶೈಲದಗ್ರದ
ಹರನ ಚತುರಾನನನ ಪಟ್ಟಣದಿರವ ತಿಳುಹಿದೆನು
ಸರಸಿರುಹ ಬಂಧುವಿನ ರಥವಿಹ
ಪರಿಯ ಚರಿಸುವ ಪಥವ ತಾರೆಗ
ಳಿರವ ನೀ ಕೇಳೆಂದು ಮಾತಲಿ ನುಡಿದನರ್ಜುನಗೆ (ಅರಣ್ಯ ಪರ್ವ, ೮ ಸಂಧಿ, ೬೧ ಪದ್ಯ)

ತಾತ್ಪರ್ಯ:
ಭೂಮಿಯು ದ್ವೀಪಗಳು, ವರ್ಷಗಳು, ಪರ್ವತಗಳು, ಸಮುದ್ರಗಳು ಮೇರು ಪರ್ವತದ ಮೇಲಿರುವ ಬ್ರಹ್ಮ, ಶಿವ ಇವರ ನಗರಗಳು ಇರುವುದನ್ನು ತಿಳಿಸಿದ್ದೇನೆ. ಈಗ ಸೂರ್ಯನ ರಥವಿರುವ ಪರಿ, ಅದು ಚಲಿಸುವ ದಾರಿ, ನಕ್ಷತ್ರಗಳು ಇವನ್ನು ಕುರಿತು ಹೇಳುತ್ತೇನೆ ಕೇಳು ಎಂದು ಮಾತಲಿಯು ಅರ್ಜುನನಿಗೆ ಹೇಳಿದನು.

ಅರ್ಥ:
ಧರೆ: ಭೂಮಿ; ವರುಷ: ಭೂಭಾಗ; ದ್ವೀಪ: ನೀರಿನಿಂದ ಆವರಿಸಿದ ಭೂಭಾಗ; ಗಿರಿ: ಬೆಟ್ಟ; ಶರಧಿ: ಸಮುದ್ರ; ಸುರ: ದೇವತೆ; ಸುರಶೈಲ: ದೇವಗಿರಿ; ಅಗ್ರ: ತುದಿ, ಶ್ರೇಷ್ಠ; ಹರ: ಶಿವ; ಚತುರಾನನ: ಬ್ರಹ್ಮ; ಆನನ: ಮುಖ; ಪಟ್ಟಣ: ಊರು; ತಿಳುಹು: ತಿಳಿಸು; ಸರಸಿರುಹ: ಕಮಲ; ಬಂಧು: ನೆಂಟ, ಸಂಬಂಧಿಕ; ರಥ: ತೇರು; ಪರಿ: ರೀತಿ; ಚರಿಸು: ಚಲಿಸು; ಪಥ: ಮಾರ್ಗ; ತಾರೆ: ನಕ್ಷತ್ರ; ಕೇಳು: ಆಲಿಸು; ನುಡಿ: ಮಾತಾಡು;

ಪದವಿಂಗಡಣೆ:
ಧರೆಯ+ ವರುಷ +ದ್ವೀಪ +ಗಿರಿಗಳ
ಶರಧಿಗಳ +ಸುರಶೈಲದ್+ಅಗ್ರದ
ಹರನ +ಚತುರಾನನನ +ಪಟ್ಟಣದಿರವ+ ತಿಳುಹಿದೆನು
ಸರಸಿರುಹ +ಬಂಧುವಿನ +ರಥವಿಹ
ಪರಿಯ +ಚರಿಸುವ +ಪಥವ +ತಾರೆಗಳ್
ಇರವ +ನೀ +ಕೇಳೆಂದು +ಮಾತಲಿ +ನುಡಿದನ್+ಅರ್ಜುನಗೆ

ಅಚ್ಚರಿ:
(೧) ಸೂರ್ಯನನ್ನು ಸರಸಿರುಹಬಂಧು ಎಂದು ಕರೆದಿರುವುದು
(೨) ಶೈಲ, ಗಿರಿ – ಸಮನಾರ್ಥಕ ಪದ

ಪದ್ಯ ೬೦: ಭೂಮಿಯು ಹೇಗೆ ಶೋಭಿಸುತ್ತದೆ?

ಉರಗ ನಾಳಾಂಬುಜ ಕುಸುಮವೀ
ಧರಣಿ ಕರ್ಣಿಕೆ ಮೇರುಗಿರಿ ಕೇ
ಸರ ನಗಂಗಳು ಬಳಸಿ ಕೇಸರದಂತೆ ಸೊಗಯಿಪವು
ಸರಸಿರುಹಸಂಭವನು ಮಧ್ಯದೊ
ಳಿರಲು ಭೂತಲವೈದೆ ಮೆರೆವುದು
ಸಿರಿ ಮಹಾವಿಷ್ಣುವಿನ ನಾಭೀಕಮಲದಂದದಲಿ (ಅರಣ್ಯ ಪರ್ವ, ೮ ಸಂಧಿ, ೬೦ ಪದ್ಯ)

ತಾತ್ಪರ್ಯ:
ಆದಿಶೇಷವು (ಹಾವು) ನಾಳವಾಗಿ, ಈ ಭೂಮಿಯು ಮಹಾವಿಷ್ಣುವಿನ ನಾಭೀಕಮಲದಂತಿದೆ. ಭೂಮಿಯು ಕರ್ಣಿಕೆ, ಇದನ್ನು ಸುತ್ತಿರುವ ಪರ್ವತಗಳೇ ಕುಸುರು. ಬ್ರಹ್ಮನು ಮಧ್ಯದಲ್ಲಿರಲು ಭೂಮಿಯು ವಿಷ್ಣುವಿನ ನಾಭೀಕಮಲದಂತಿದೆ.

ಅರ್ಥ:
ಉರಗ: ಹಾವು; ನಾಳ: ಟೊಳ್ಳಾದ ಕೊಳವೆ, ನಳಿಕೆ; ಅಂಬುಜ: ತಾವರೆ; ಕುಸುಮ: ಹೂವು; ಧರಣಿ: ಭೂಮಿ; ಕರ್ಣಿಕೆ: ಮಲದ ಮಧ್ಯ ಭಾಗ, ಬೀಜಕೋಶ; ಮೇರುಗಿರಿ: ಮೇರು ಪರ್ವತ; ಕೇಸರ: ಹೂವಿನಲ್ಲಿರುವ ಕುಸುರು, ಎಳೆ; ನಗ: ಬೆಟ್ಟ, ಪರ್ವತ; ಬಳಸು: ಆವರಿಸು; ಸೊಗ: ಚೆಲುವು; ಸರಸಿರುಹ: ಕಮಲ; ಸರಸಿರುಹಸಂಭವ: ಬ್ರಹ್ಮ; ಮಧ್ಯ: ನಡುವೆ; ಭೂತಲ: ಭೂಮಿ; ಐದೆ: ಸೇರು; ಮೆರೆ: ಶೋಭಿಸು; ಸಿರಿ: ಐಶ್ವರ್ಯ; ನಾಭಿ: ಹೊಕ್ಕಳು; ಕಮಲ: ತಾವರೆ;

ಪದವಿಂಗಡಣೆ:
ಉರಗ +ನಾಳ+ಅಂಬುಜ +ಕುಸುಮವ್+ಈ+
ಧರಣಿ +ಕರ್ಣಿಕೆ +ಮೇರುಗಿರಿ+ ಕೇ
ಸರ +ನಗಂಗಳು+ ಬಳಸಿ+ ಕೇಸರದಂತೆ +ಸೊಗಯಿಪವು
ಸರಸಿರುಹಸಂಭವನು+ ಮಧ್ಯದೊಳ್
ಇರಲು +ಭೂತಲವ್+ಐದೆ+ ಮೆರೆವುದು
ಸಿರಿ+ ಮಹಾವಿಷ್ಣುವಿನ+ ನಾಭೀ+ಕಮಲದಂದದಲಿ

ಅಚ್ಚರಿ:
(೧) ಅಂಬುಜ, ಕಮಲ, ಸರಸಿರುಹ – ಸಮನಾರ್ಥಕ ಪದ

ಪದ್ಯ ೫೯: ದಿಕ್ಪಾಲಕರ ನಗರಗಳಾವುವು?

ಸುರಪನದುವೇ ಸ್ವರ್ಗ ಸಾರವು
ನಿರುತದಲಿ ಸಂಯಮನಿಯೆಂಬಾ
ಪುರವು ಕಾಲನ ನಗರಿ ತೆಂಕಲು ಪಶ್ಚಿಮಾದ್ರಿಯಲಿ
ವರುಣನದು ಶುದ್ಧಿಮತಿ ಯಕ್ಷೇ
ಶ್ವರಗೆಸೆವುದಾ ಕಾಂತಿಮತಿ ಶಿಖಿ
ನಿರುತಿ ಮರುದೀಶಾನರಿಗೆಯವರವರ ನಾಮದಲಿ (ಅರಣ್ಯ ಪರ್ವ, ೮ ಸಂಧಿ, ೫೯ ಪದ್ಯ್)

ತಾತ್ಪರ್ಯ:
ದೇವೇಂದ್ರನ ನಗರವು ಅತ್ಯುತ್ತಮವಾದ ಸ್ವರ್ಗ. ಸಂಯಮನಿಯೆನ್ನುವುದು ಯಮನ ಊರು ಅದು ದಕ್ಷಿಣ ದಿಕ್ಕಿನಲ್ಲಿದೆ. ಪಶ್ಚಿಮದಲ್ಲಿ ವರುಣನಿರುವ ಶುದ್ಧಮತಿ ಎಂಬ ನಗರ. ಕುಬೇರನಿರುವುದು ಕಾಂತಿಮತಿ (ಅಲಕಾನಗರಿ), ಅಗ್ನಿ, ವಾಯು, ನಿರಋತಿ, ಈಶಾನರ ನಗರಗಳು ಅವರವರ ಹೆಸರನ್ನೇ ಹೊಂದಿವೆ.

ಅರ್ಥ:
ಸುರಪ: ದೇವತೆಗಳ ಒಡೆಯ, ಇಂದ್ರ; ಸ್ವರ್ಗ: ನಾಕ; ಸಾರ: ರಸ; ನಿರುತ: ನಿಶ್ಚಯ; ಕಾಲ: ಯಮನ್; ನಗರ: ಊರು; ತೆಂಕಲು: ದಕ್ಷಿಣ; ಪಶ್ಚಿಮ: ಪಡುವಣ; ಅದ್ರಿ: ಬೆಟ್ಟ; ವರುಣ: ನೀರಿನ ಅಧಿದೇವತೆ, ಪಶ್ಚಿಮ ದಿಕ್ಕಿನ ಒಡೆಯ; ಯಕ್ಷೇಶ್ವರ: ಕುಬೇರ; ಶಿಖಿ: ಅಗ್ನಿ; ಮರು: ಮಾರುತಿ, ವಾಯು; ನಾಮ: ಹೆಸರು;

ಪದವಿಂಗಡಣೆ:
ಸುರಪನದುವೇ +ಸ್ವರ್ಗ +ಸಾರವು
ನಿರುತದಲಿ +ಸಂಯಮನಿ+ಎಂಬ+ಆ
ಪುರವು +ಕಾಲನ +ನಗರಿ+ ತೆಂಕಲು+ ಪಶ್ಚಿಮಾದ್ರಿಯಲಿ
ವರುಣನದು +ಶುದ್ಧಿಮತಿ+ ಯಕ್ಷೇ
ಶ್ವರಗ್+ಎಸೆವುದ್+ಆ+ ಕಾಂತಿಮತಿ +ಶಿಖಿ
ನಿರುತಿ +ಮರುತ್+ಈಶಾನರಿಗೆ+ಅವರವರ +ನಾಮದಲಿ

ಅಚ್ಚರಿ:
(೧) ನಗರಗಳ ಹೆಸರು – ಸ್ವರ್ಗ, ಸಂಯಮನಿ, ಶುದ್ಧಿಮತಿ, ಕಾಂತಿಮತಿ