ಹರನ ಕೃಪೆಯಂ ಪಡೆವುದರಿದಾ
ದರಿಸುವರೆ ಶಸ್ತ್ರಾಭಿಲಾಷೆಯ
ಮರುಳತನದಲಿ ವ್ಯರ್ಥನಾದೆನಲಾ ಮಹಾದೇವ
ಧರೆಯು ಕಾಮಿತವೆಂದು ಸುಖವನು
ಮರೆದೆನಕಟಕಟಾ ದುರಾಗ್ರಹ
ಪರಿವೃತಂಗೆ ಸುಬುದ್ಧಿಯೇಕಹುದೆಂದನಾ ಪಾರ್ಥ (ಅರಣ್ಯ ಪರ್ವ, ೭ ಸಂಧಿ, ೧೧೨ ಪದ್ಯ)
ತಾತ್ಪರ್ಯ:
ಶಿವನ ಕೃಪೆಯನ್ನು ಪಡೆಯುವುದು ಬಹು ಕಷ್ಟ ಸಾಧ್ಯವಾದುದು ಅವನು ಕೃಪೆ ಮಾಡಿ ನಿನಗೇನು ಬೇಕೆಂದು ಕೇಳಿದಾಗ ಅಸ್ತ್ರವನ್ನು ವರವಾಗಿ ಕೇಳಿ ಹುಚ್ಚುತನದಿಮ್ದ ಅವಕಾಶವನ್ನು ವ್ಯರ್ಥಮಾಡಿಕೊಂಡೆ. ಭೂಮಿಯ ಆಶೆಯಿಂದ ಆನಂದವನ್ನು ಮರೆತೆ. ದುರಾಗ್ರಹ ಪೀಡಿತರಿಗೆ ಸುಬುದ್ಧಿಯೆಲ್ಲಿಂದ ಬಂದೀತು ಎಂದು ಅರ್ಜುನನು ಚಿಂತಿಸಿದನು.
ಅರ್ಥ:
ಹರ: ಶಿವ; ಕೃಪೆ: ದಯೆ; ಪಡೆ: ಗಳಿಸು; ಆದರಿಸು: ಉಪಚಾರಮಾಡು; ಶಸ್ತ್ರ: ಅಸ್ತ್ರ, ಆಯುಧ; ಅಭಿಲಾಷೆ: ಆಸೆ, ಬಯಕೆ; ಮರುಳತನ: ತಿಳಿಗೇಡಿ; ವ್ಯರ್ಥ: ನಿರುಪಯುಕ್ತತೆ; ಧರೆ: ಭೂಮಿ; ಕಾಮಿತ: ಬಯಸಿದ, ಅಪೇಕ್ಷಿಸಿದ; ಸುಖ: ಸಂತೋಷ, ನಲಿವು; ಮರೆ: ನೆನಪಿನಿಂದ ದೂರ ಮಾಡು; ಅಕಟಕಟಾ: ಅಯ್ಯೋ; ದುರಾಗ್ರಹ: ಹಟಮಾರಿತನ; ಪರಿವೃತ: ಆವರಿಸಿದ, ಸುತ್ತುವರಿದ; ಸುಬುದ್ಧಿ: ಒಳ್ಳೆಯ ಬುದ್ಧಿ;
ಪದವಿಂಗಡಣೆ:
ಹರನ +ಕೃಪೆಯಂ +ಪಡೆವುದರಿದ್+
ಆದರಿಸುವರೆ +ಶಸ್ತ್ರ+ಅಭಿಲಾಷೆಯ
ಮರುಳತನದಲಿ+ ವ್ಯರ್ಥನ್+ಆದೆನಲಾ +ಮಹಾದೇವ
ಧರೆಯು +ಕಾಮಿತವೆಂದು +ಸುಖವನು
ಮರೆದೆನ್+ಅಕಟಕಟಾ +ದುರಾಗ್ರಹ
ಪರಿವೃತಂಗೆ +ಸುಬುದ್ಧಿ+ಏಕಹುದ್+ಎಂದನಾ +ಪಾರ್ಥ
ಅಚ್ಚರಿ:
(೧) ಅರ್ಜುನನ ಮನಸ್ಸಿನ ತಳಮಳ – ಶಸ್ತ್ರಾಭಿಲಾಷೆಯ ಮರುಳತನದಲಿ ವ್ಯರ್ಥನಾದೆನಲಾ ಮಹಾದೇವ, ಧರೆಯು ಕಾಮಿತವೆಂದು ಸುಖವನು ಮರೆದೆನಕಟಕಟಾ