ಪದ್ಯ ೯೭: ಅರ್ಜುನನು ಶಂಕರನನ್ನು ಏನು ಬೇಡಿದನು?

ಸಲಿಸುವೆನು ನೀ ಬೇಡಿದುದ ನಿ
ಸ್ಖಲಿತವಂಜದಿರಿನ್ನು ಸಾಕೆನೆ
ಸುಲಭ ನೀ ಭಕ್ತರಿಗೆ ಭಯವಿನ್ನೇಕೆ ನಮಗೆನುತ
ಸಲಿಸು ಪಾಶುಪತಾಸ್ತ್ರವನು ವೆ
ಗ್ಗಳದ ಬ್ರಹ್ಮ ಶಿರೋಸ್ತ್ರವನು ಕೈ
ಗೊಳಿಸುವುದು ಕೃಪೆಯುಳ್ಳೊಡೆಂದನು ನಗುತ ಕಲಿಪಾರ್ಥ (ಅರಣ್ಯ ಪರ್ವ, ೭ ಸಂಧಿ, ೯೭ ಪದ್ಯ)

ತಾತ್ಪರ್ಯ:
ನೀನು ಬೇಡಿದ ವರವನ್ನು ನಾನು ಖಂಡಿತ ನೀಡುತ್ತೇನೆ ಎಂದು ಶಿವನು ಹೇಳಲು, ಅರ್ಜುನನು ನಗುತ್ತಾ ನನಗೆ ಪಾಶುಪತಾಸ್ತ್ರವನ್ನೂ, ಬ್ರಹ್ಮ ಶಿರೋಸ್ತ್ರವನ್ನೂ ಕೃಪೆಯಿಂದ ಕರುಣಿಸು ಎಂದು ಕೇಳಿದನು. ಶಂಕರನೇ, ನೀನು ಭಕ್ತಪರಾಧೀನ, ಭಕ್ತರಿಗೆ ಸುಲಭವಾಗಿ ಒಲಿಯುವವನು ಎಂದು ಸಂತಸದಿಂದ ಬಣ್ಣಿಸಿದನು.

ಅರ್ಥ:
ಸಲಿಸು: ದೊರಕಿಸಿ ಕೊಡು, ಪೂರೈಸು; ಬೇಡು: ಕೇಳು; ನಿಸ್ಖಲಿತ: ಜಾರಿಬಿದ್ದ, ಕಳಚಿ ಬಿದ್ದಿರುವ; ಅಂಜು: ಹೆದರು; ಸಾಕು: ಕೊನೆ, ಬೆಳೆಸು; ಸುಲಭ: ಕಷ್ಟವಲ್ಲದುದು, ಸರಾಗ; ಭಕ್ತ: ಆರಾಧಕ; ಭಯ: ಅಂಜಿಕೆ; ಅಸ್ತ್ರ: ಶಸ್ತ್ರ; ವೆಗ್ಗಳ: ಶ್ರೇಷ್ಠ; ಶಿರಸ್ಸು: ತಲೆ; ಕೈಗೊಳಿಸು: ನೀಡು; ಕೃಪೆ: ದಯೆ; ನಗು: ಸಂತಸ; ಕಲಿ: ಶೂರ;

ಪದವಿಂಗಡಣೆ:
ಸಲಿಸುವೆನು +ನೀ +ಬೇಡಿದುದ+ ನಿ
ಸ್ಖಲಿತವ್+ಅಂಜದಿರ್+ಇನ್ನು +ಸಾಕೆನೆ
ಸುಲಭ+ ನೀ +ಭಕ್ತರಿಗೆ+ ಭಯವಿನ್ನೇಕೆ +ನಮಗೆನುತ
ಸಲಿಸು+ ಪಾಶುಪತಾಸ್ತ್ರವನು +ವೆ
ಗ್ಗಳದ +ಬ್ರಹ್ಮ +ಶಿರೋಸ್ತ್ರವನು +ಕೈ
ಗೊಳಿಸುವುದು +ಕೃಪೆಯುಳ್ಳೊಡೆಂದನು+ ನಗುತ+ ಕಲಿಪಾರ್ಥ

ಅಚ್ಚರಿ:
(೧) ಪಾಶುಪತಾಸ್ತ್ರ, ಬ್ರಹ್ಮಶಿರೋಸ್ತ್ರ – ಅಸ್ತ್ರಗಳನ್ನು ವಿವರಿಸುವ ಪರಿ

ನಿಮ್ಮ ಟಿಪ್ಪಣಿ ಬರೆಯಿರಿ