ಹರನ ಕೋಮಲಪಾಣಿ ಕಮಲ
ಸ್ಪರುಶ ಪೀಯೂಷದಲಿ ಮುಳುಗಿದ
ನರನ ತನು ನಿರ್ಮೋಕ ಮುಕ್ತ ಭುಜಂಗದಂದದಲಿ
ಕಿರಣ ಲಹರಿಯ ಲಳಿಯ ದಿವ್ಯೋ
ತ್ಕರದ ಚಪಲಚ್ಛವಿಯ ಚಾರು
ಸ್ಫುರಣದಲಿ ಬೋಳೈಸಿದುದು ಸುರನರರ ಕಣ್ಮನವ (ಅರಣ್ಯ ಪರ್ವ, ೭ ಸಂಧಿ, ೧೦೧ ಪದ್ಯ)
ತಾತ್ಪರ್ಯ:
ಶಿವನ ಕೋಮಲ ಹಸ್ತ ಕಮಲಗಳ ಸ್ಪರ್ಶದ ಅಮೃತದಿಂದ ಆವೃತವಾದ ಅರ್ಜುನನ ದೇಹವು ಪೊರೆ ಕಳಚಿದ ಹಾವಿನಂತೆ ಕಾಣಿಸಿತು. ದಿವ್ಯ ತೇಜಸ್ಸಿನ ಲಹರಿಯ ಕಾಂತಿಯು ಸ್ಫುರಿಸುತ್ತಿರಲು ಅರ್ಜುನನ ಕಾಂತಿಯು ನೋಡುತ್ತಿದ್ದ ದೇವತೆಗಳ ಮನುಷ್ಯರ ನೋಟಗಳನ್ನು ಆಕರ್ಷಿಸಿತು.
ಅರ್ಥ:
ಹರ: ಶಿವ; ಕೋಮಲ: ಮೃದು; ಪಾಣಿ: ಹಸ್ತ; ಕಮಲ: ಪದ್ಮ; ಸ್ಪರುಷ: ತಾಗು; ಪೀಯೂಷ: ಅಮೃತ, ಸುಧೆ; ಮುಳುಗು: ಮಿಂದು; ನರ: ಅರ್ಜುನ; ತನು: ದೇಹ; ನಿರ್ಮೋಕ: ಪೊರೆಬಿಡುವುದು; ಮುಕ್ತ: ಬಿಡುಗಡೆ ಹೊಂದಿದವನು; ಭುಜಂಗ: ಹಾವು; ಕಿರಣ: ರಶ್ಮಿ; ಲಹರಿ: ಅಲೆ, ರಭಸ; ಲಳಿ: ರಭಸ, ಆವೇಗ; ದಿವ್ಯ: ಶ್ರೇಷ್ಠ; ಉತ್ಕರ: ರಾಶಿ, ಸಮೂಹ; ಚಪಲ: ಚಂಚಲ; ಚ್ಛವಿ: ಕಾಂತಿ; ಚಾರು: ಸುಂದರ; ಸ್ಫುರಣ: ಹೊಳೆಯುವುದು, ಮಿನುಗು; ಬೋಳೈಸು: ಸಂತೈಸು, ಸಮಾಧಾನ ಮಾಡು; ಸುರ: ದೇವತೆ; ನರ: ಮನುಷ್ಯ; ಕಣ್ಣು: ನಯನ; ಮನ: ಮನಸ್ಸು;
ಪದವಿಂಗಡಣೆ:
ಹರನ +ಕೋಮಲಪಾಣಿ +ಕಮಲ
ಸ್ಪರುಶ +ಪೀಯೂಷದಲಿ +ಮುಳುಗಿದ
ನರನ +ತನು+ ನಿರ್ಮೋಕ +ಮುಕ್ತ +ಭುಜಂಗದಂದದಲಿ
ಕಿರಣ+ ಲಹರಿಯ +ಲಳಿಯ +ದಿವ್ಯೋ
ತ್ಕರದ+ ಚಪಲ+ಚ್ಛವಿಯ +ಚಾರು
ಸ್ಫುರಣದಲಿ+ ಬೋಳೈಸಿದುದು +ಸುರ+ನರರ+ ಕಣ್ಮನವ
ಅಚ್ಚರಿ:
(೧) ಚ ಕಾರದ ತ್ರಿವಳಿ ಪದ – ಚಪಲಚ್ಛವಿಯ ಚಾರುಸ್ಫುರಣದಲಿ
(೨) ಉಪಮಾನದ ಪ್ರಯೋಗ – ಹರನ ಕೋಮಲಪಾಣಿ ಕಮಲಸ್ಪರುಶ ಪೀಯೂಷದಲಿ ಮುಳುಗಿದ
ನರನ ತನು ನಿರ್ಮೋಕ ಮುಕ್ತ ಭುಜಂಗದಂದದಲಿ