ನರನು ನೀ ಪೂರ್ವದಲಿ ಪೀತಾಂ
ಬರನ ವಿಮಲಾಂಶ ಪ್ರಸೂತನು
ಪರಮಋಷಿ ನೀನೆನ್ನ ಭಕ್ತನು ಚಿಂತೆ ಬೇಡಿನ್ನು
ವರದನಾದೆನು ಮಗನೆ ಶಸ್ತ್ರೋ
ತ್ಕರವನಿದನೀ ಮುನ್ನ ಕೊಳ್ಳೆಂ
ದುರುತರ ಪ್ರೇಮದಲಿ ಕೊಟ್ಟನು ಖಡ್ಗಶರಧನುವ (ಅರಣ್ಯ ಪರ್ವ, ೭ ಸಂಧಿ, ೯೬ ಪದ್ಯ)
ತಾತ್ಪರ್ಯ:
ಅರ್ಜುನ, ನೀನು ಹಿಂದೆ ವಿಷ್ಣುವಿನ ಅಂಶದಿಂದ ಅವತರಿಸಿದ್ದ ನರಮಹರ್ಷಿ. ನೀನು ನಮ್ಮ ಪರಮ ಭಕ್ತನು. ನಿನಗೆ ವರಗಳನ್ನು ಕೊಡುತ್ತೇನೆ. ಅದಕ್ಕೆ ಮೊದಲು ಯುದ್ಧದಲ್ಲಿ ಕಳೆದುಕೊಂಡ ನಿನ್ನ ಆಯುಧಗಳನ್ನೆಲ್ಲಾ ತೆಗೆದುಕೋ ಎಂದು ಗಾಂಡೀವಾದಿ ಸಮಸ್ತ ಆಯುಧಗಳನ್ನು ಹಿಂದಿರುಗಿಸಿದನು.
ಅರ್ಥ:
ನರ: ಅರ್ಜುನ; ಪೂರ್ವ: ಹಿಂದೆ; ಪೀತಾಂಬರ: ರೇಷ್ಮೆಯ ಬಟ್ಟೆ; ವಿಮಲ: ಶುದ್ಧ; ಅಂಶ: ಭಾಗ, ವಿವರ; ಪ್ರಸೂತ: ಜನಿಸು; ಪರಮ: ಶ್ರೇಷ್ಠ; ಋಷಿ: ಮುನಿ; ಭಕ್ತ: ಆರಾಧಕ; ಚಿಂತೆ: ಯೋಚನೆ; ಬೇಡ: ತೊರೆ; ಮಗ: ಸುತ; ಶಸ್ತ್ರ: ಆಯುಧ; ಉತ್ಕರ: ಸಮೂಹ; ಮುನ್ನ: ಮೊದಲು; ಉರುತರ: ಹೆಚ್ಚು; ಪ್ರೇಮ: ಒಲವು; ಖಡ್ಗ: ಕತ್ತಿ; ಶರ: ಬಾಣ; ಧನು: ಧನಸ್ಸು;
ಪದವಿಂಗಡಣೆ:
ನರನು +ನೀ +ಪೂರ್ವದಲಿ +ಪೀತಾಂ
ಬರನ +ವಿಮಲಾಂಶ +ಪ್ರಸೂತನು
ಪರಮಋಷಿ+ ನೀನೆನ್ನ+ ಭಕ್ತನು +ಚಿಂತೆ +ಬೇಡಿನ್ನು
ವರದನಾದೆನು +ಮಗನೆ+ ಶಸ್ತ್ರ
ಉತ್ಕರವನ್+ಇದನ್+ಈ+ ಮುನ್ನ +ಕೊಳ್ಳೆಂದ್
ಉರುತರ +ಪ್ರೇಮದಲಿ +ಕೊಟ್ಟನು +ಖಡ್ಗ+ಶರ+ಧನುವ