ಹರಹರಾತ್ರೈಮೂರ್ತಿ ರೂಪನು
ಧರಿಸಿ ಯತುಳ ಮಹಾಷ್ಟಮೂರ್ತಿಯ
ಧರಿಸಿಯನುಪಮ ವಿಶ್ವಮೂರ್ತಿಯ ಧರಿಸಿರಂಜಿಸುವ
ಪರಿಯನರಿವವರಾರು ದೇವಾ
ಸುರ ಮುನೀಶರಿಗರಿದು ಕೃಪೆಯಿಂ
ಕರುಣಿಸಲು ಬಂದೈ ಮಹಾದೇವೆಂದನಾ ಪಾರ್ಥ (ಅರಣ್ಯ ಪರ್ವ, ೭ ಸಂಧಿ, ೯೧ ಪದ್ಯ)
ತಾತ್ಪರ್ಯ:
ಅರ್ಜುನನು ಶಿವನ ಗುಣಮಹಿಮೆಯನ್ನು ಹೇಳುತ್ತಾ, ಶಿವ ಶಿವಾ ನೀನು ಬ್ರಹ್ಮ ವಿಷ್ಣು ರುದ್ರರೆಂಬ ತ್ರಿಮೂರ್ತಿಗಳ ರೂಪನು. ಭೂಮಿ, ನೀರು, ಗಾಳಿ, ಬೆಂಕಿ, ಆಕಾಶ, ಸೂರ್ಯ, ಚಂದ್ರ, ಸಚೇತನ ಪ್ರಾಣಿಗಳು ಎಂಬ ಅಷ್ಟ ಮೂರ್ತಿಗಳ ರೂಪವನ್ನು ಧರಿಸಿ ಹೋಲಿಕೆಗೆ ನಿಲುಕದ ವಿಶ್ವದ ರೂಪವನ್ನು ಧರಿಸಿ ರಂಜಿಸುವ ನಿನ್ನ ನಿಜವನ್ನು ಅರಿಯುವರಾರು! ದೇವತೆಗಳು, ರಾಕ್ಷಸರು, ಋಷಿ ಮುಖ್ಯರಿಗೂ ಅದು ಸಾಧ್ಯವಿಲ್ಲ. ಇಂತಹ ನೀನು ನನ್ನ ಮೇಲೆ ಕೃಪೆಯಿಟ್ಟು ಕರುಣಿಸಲು ಬಂದೆಯಲ್ಲಾ ಎಂದನು.
ಅರ್ಥ:
ಹರ: ಶಂಕರ; ತ್ರೈಮೂರ್ತಿ: ತ್ರಿಮೂರ್ಥಿಗಳು (ಬ್ರಹ್ಮ, ವಿಷ್ಣು, ಮಹೇಶ್ವರ); ರೂಪ: ಆಕಾರ; ಧರಿಸು: ತೊಡು; ಅತುಳ: ತುಂಬ; ಮಹಾ: ದೊಡ್ಡ; ಅಷ್ಟ: ಎಂಟು; ಅನುಪಮ: ಉತ್ಕೃಷ್ಟವಾದುದು; ವಿಶ್ವ: ಜಗತ್ತು; ಮೂರ್ತಿ: ರೂಪ; ರಂಜಿಸು: ಹೊಳೆ, ಪ್ರಕಾಶಿಸು; ಪರಿ: ರೀತಿ; ಅರಿ: ತಿಳಿ; ಅಸುರ: ರಾಕ್ಷಸ; ಮುನಿ: ಋಷಿ; ಅರಿ: ತಿಳಿ; ಕೃಪೆ: ದಯೆ; ಕರುಣಿಸು: ದಯಪಾಲಿಸು;
ಪದವಿಂಗಡಣೆ:
ಹರಹರಾ+ತ್ರೈಮೂರ್ತಿ +ರೂಪನು
ಧರಿಸಿ +ಅತುಳ +ಮಹ+ಅಷ್ಟ+ಮೂರ್ತಿಯ
ಧರಿಸಿ+ಅನುಪಮ +ವಿಶ್ವಮೂರ್ತಿಯ +ಧರಿಸಿ+ರಂಜಿಸುವ
ಪರಿಯನ್+ಅರಿವವರ್+ಆರು+ ದೇವ
ಅಸುರ +ಮುನೀಶರಿಗ್+ಅರಿದು +ಕೃಪೆಯಿಂ
ಕರುಣಿಸಲು+ ಬಂದೈ +ಮಹಾದೇವೆಂದನಾ +ಪಾರ್ಥ
ಅಚ್ಚರಿ:
(೧) ತ್ರೈಮೂರ್ತಿ, ಅಷ್ಟಮೂರ್ತಿ, ವಿಶ್ವಮೂರ್ತಿ – ಪದಗಳ ಬಳಕೆ