ಪದ್ಯ ೪೯: ಧನಂಜಯನ ಕಣ್ಣುಗಳು ಯಾವ ರಸದಲ್ಲಿ ಮುಳುಗಿದವು?

ಮತ್ತೆ ಕಂಡನು ಖಂಡಪರುಶುವಿ
ನುತ್ತಮಾಂಗದಲೀಚೆಯಲಿ ಲಿಂ
ಗೋತ್ತಮಾಂಗದ ಮೇಲೆ ಕಾಣನು ಕುಸುಮ ಮಂಜರಿಯ
ತುತ್ತಿದವು ಕೌತುಕವ ರಂಜಿಸಿ
ಹೊತ್ತವದುಭುತವನು ಭಯಾನಕ
ವೆತ್ತರಸದಲಿ ಮುಳುಗಿದವು ಕಂಗಳು ಧನಂಜಯನ (ಅರಣ್ಯ ಪರ್ವ, ೭ ಸಂಧಿ, ೪೯ ಪದ್ಯ)

ತಾತ್ಪರ್ಯ:
ಕಿರಾತನ ತಲೆಯ ಮೇಲೆ ತಾನು ಪೂಜಿಸಿದ ಹೂಗಳನ್ನು ಮತ್ತೆ ನೋಡಿದನು. ಇತ್ತ ತಿರುಗಿದರೆ ಆ ಹೂಗಳು ಲಿಂಗದ ಮೇಲಿರಲಿಲ್ಲ. ಅರ್ಜುನನ ಕಣ್ಣುಗಳು ಕೌತುಕಗೊಂಡು, ಇದು ಅದ್ಭುತವೆಂದುಕೊಳ್ಳುತ್ತಿದ್ದಂತೆಯೇ, ಅವನ ಕಣ್ಣುಗಳು ಭಯಾನಕ ರಸದಲ್ಲಿ ಮುಳುಗಿದವು.

ಅರ್ಥ:
ಕಂಡು: ನೋಡು; ಖಂಡಪರುಶು: ಶಿವ;ಉತ್ತಮಾಂಗ: ಶಿರ; ಲಿಂಗ: ಶಿವನ ಒಂದು ಪ್ರತೀಕ ಸ್ಥಾವರ ಲಿಂಗ; ಕಾಣು: ತೋರು; ಕುಸುಮ: ಹೂವು; ಮಂಜರಿ: ಗೊಂಚಲು; ತುತ್ತು: ಅನುಭವ, ಅಡಗಿಸು; ಕೌತುಕ: ಆಶ್ಚರ್ಯ; ರಂಜಿಸು: ಹೊಳೆ, ಪ್ರಕಾಶಿಸು, ಶೋಭಿಸು; ಅದುಭುತ: ಆಶ್ಚರ್ಯ; ಭಯಾನಕ: ಭಯಂಕರ, ಘೋರ; ರಸ: ಸಾರ; ಮುಳುಗು: ತೋಯು; ಕಂಗಳು: ಕಣ್ಣು;

ಪದವಿಂಗಡಣೆ:
ಮತ್ತೆ+ ಕಂಡನು +ಖಂಡಪರುಶುವಿನ್
ಉತ್ತಮಾಂಗದಲ್+ಈಚೆಯಲಿ +ಲಿಂಗ
ಉತ್ತಮಾಂಗದ+ ಮೇಲೆ +ಕಾಣನು +ಕುಸುಮ +ಮಂಜರಿಯ
ತುತ್ತಿದವು +ಕೌತುಕವ +ರಂಜಿಸಿ
ಹೊತ್ತವ್+ಅದುಭುತವನು +ಭಯಾನಕ
ವೆತ್ತ+ರಸದಲಿ +ಮುಳುಗಿದವು+ ಕಂಗಳು +ಧನಂಜಯನ

ಅಚ್ಚರಿ:
(೧) ಅರ್ಜುನನಿಗಾದ ಭಾವನೆ: ತುತ್ತಿದವು ಕೌತುಕವ ರಂಜಿಸಿಹೊತ್ತವದುಭುತವನು ಭಯಾನಕ
ವೆತ್ತರಸದಲಿ ಮುಳುಗಿದವು ಕಂಗಳು ಧನಂಜಯನ

ನಿಮ್ಮ ಟಿಪ್ಪಣಿ ಬರೆಯಿರಿ