ಹೃದಯವಿಬ್ಬಗಿಯಾಯ್ತು ಕಂಗಳು
ಬೆದರಿದವು ವೈವರ್ಣ್ಯದಲಿ ತನು
ಗದಗದಿಸಿತಡಿಗಡಿಗೆ ಜಡಿದುದು ರೋಮಹರುಷದಲಿ
ಉದುರಿದವು ನೇತ್ರಾಂಬು ಬಿಂಕದ
ಬೆದರಿಕೆಯ ಮೂಢತೆಯ ತಿಳಿವಿನ
ಮುದದ ಖೇದದ ಗಾಯಘಾತಿಗೆ ಪಾರ್ಥನೊಳಗಾದ (ಅರಣ್ಯ ಪರ್ವ, ೭ ಸಂಧಿ, ೫೧ ಪದ್ಯ)
ತಾತ್ಪರ್ಯ:
ಮನಸ್ಸು ಎರಡು ಬಗೆಯಾಯಿತು. ಕಣ್ಣುಗಳು ಹೆದರಿ ಬಣ್ಣ ಕಳೆದುಕೊಂಡವು. ಮೈ ಗದಗದನೆ ನಡುಗಿತು. ಸಂತೋಷದಿಂದ ರೋಮಾಂಚನಗೊಂಡಿತು. ಕಣ್ಣೀರು ಸುರಿಯಿತು. ಹೆಮ್ಮೆ, ಭಯ, ದಡ್ಡತನ, ತಿಳಿವು, ಸಂತೋಷ ದುಃಖಗಳು ಮತ್ತೆ ಮತ್ತೆ ಸರದಿಯಿಂದ ಬಂದು ಹೊಡೆದುದರಿಂದ ಅರ್ಜುನನ ಪೆಟ್ಟು ತಿಂದನು.
ಅರ್ಥ:
ಹೃದಯ: ವಕ್ಷಸ್ಥಳ; ಇಬ್ಬಗೆ: ಎರಡು ಹೋಳು; ಕಂಗಳು: ಕಣ್ಣು; ಬೆದರು: ಹೆದರು; ವೈವರ್ಣ್ಯ: ಬಣ್ಣ ಕಳೆದುಕೊಳ್ಳು; ತನು: ದೇಹ; ಗದಗದಿಸು: ನಡುಗು; ಅಡಿಗಡಿಗೆ: ಮತ್ತೆ ಮತ್ತೆ; ಜಡಿ: ಗದರಿಸು, ಬೆದರಿಸು; ರೋಮ: ಕೂದಲು; ಹರುಷ: ಸಂತಸ; ಉದುರು: ಕೆಳಕ್ಕೆ ಬೀಳು; ನೇತ್ರಾಂಬು: ಕಣ್ಣೀರು; ಬಿಂಕ: ಗರ್ವ, ಜಂಬ; ಬೆದರಿಕೆ: ಹೆದರಿಕೆ; ಮೂಢ:ತಿಳಿವಳಿಕೆಯಿಲ್ಲದವನು; ತಿಳಿವು: ಅರಿವು; ಮುದ: ಸಂತಸ; ಖೇದ: ದುಃಖ; ಘಾತಿ: ಹೊಡೆತ;
ಪದವಿಂಗಡಣೆ:
ಹೃದಯವ್+ಇಬ್ಬಗಿಯಾಯ್ತು +ಕಂಗಳು
ಬೆದರಿದವು +ವೈವರ್ಣ್ಯದಲಿ +ತನು
ಗದಗದಿಸಿತ್+ಅಡಿಗಡಿಗೆ +ಜಡಿದುದು +ರೋಮ+ಹರುಷದಲಿ
ಉದುರಿದವು +ನೇತ್ರಾಂಬು +ಬಿಂಕದ
ಬೆದರಿಕೆಯ +ಮೂಢತೆಯ +ತಿಳಿವಿನ
ಮುದದ +ಖೇದದ +ಗಾಯಘಾತಿಗೆ+ ಪಾರ್ಥನೊಳಗಾದ
ಅಚ್ಚರಿ:
(೧) ಮುದ, ಖೇದ – ವಿರುದ್ಧ ಪದಗಳು
(೨) ಹರುಷ, ಮುದ – ಸಮನಾರ್ಥಕ ಪದ
(೩) ಕಣ್ಣೀರು ಎನ್ನಲು – ಉದುರಿದವು ನೇತ್ರಾಂಬು