ಹಂದಿಯೈತರಲೇಕೆ ಬನದ ಪು
ಳಿಂದನಲಿ ಸೆಣಸಾಗಲೇಕೆ ಪು
ಳಿಂದರವಮಾನಕರು ತಾವವಮಾನ್ಯರಾದೆವಲೆ
ಇಂದು ಮೌಳಿಯುಪೇಕ್ಷೇಯೋ ತಾ
ನಿಂದು ಶಿವಪದ ಭಕ್ತಿಶೂನ್ಯನೊ
ಮಂದಭಾಗ್ಯನು ತಾನಲಾ ಹಾಯೆನುತ ಚಿಂತಿಸಿದ (ಅರಣ್ಯ ಪರ್ವ, ೭ ಸಂಧಿ, ೪೧ ಪದ್ಯ)
ತಾತ್ಪರ್ಯ:
ಈ ಹಂದಿಯು ಏಕೆ ಬಂತು? ಕಾಡಿನ ಈ ಶಬರನೊಂದಿಗೆ ಯುದ್ಧವೇಕೆ ಸಂಭವಿಸಿತು? ಈ ಶಬರನೇ ಮಾನ್ಯನಾದ, ನಾನು ಅವಮಾನಿತನಾದೆನಲ್ಲಾ? ಶಿವನು ನನ್ನನ್ನು ಕಡೆಗಣಿಸಿದನೇ? ನನಗೆ ಶಿವನ ಪಾದಗಳ ಮೇಲೆ ಭಕ್ತಿ ಇಲ್ಲದಿರಬಹುದೇ? ಅಯ್ಯೋ ನಾನು ಅದೃಷ್ಟಹೀನನಾದೆನೇ ಎಂದು ಅರ್ಜುನನು ಚಿಂತಿಸಿದನು.
ಅರ್ಥ:
ಹಂದಿ: ಸೂಕರ; ಐತರು: ಬಂದು ಸೇರು; ಬನ: ಕಾದು; ಪುಳಿಂದ: ಬೇಡ; ಸೆಣಸು: ಹೋರಾಡು; ಮಾನ್ಯ: ಶ್ರೇಷ್ಠ; ಅವಮಾನ್ಯ: ಅಗೌರವ; ಇಂದು: ಚಂದ್ರ; ಮೌಳಿ: ಶಿರ; ಉಪೇಕ್ಷೆ: ಕಡೆಗಣಿಸುವಿಕೆ; ಶಿವ: ಶಂಕರ; ಪದ: ಚರಣ; ಭಕ್ತಿ: ಭಗವಂತನಲ್ಲಿರುವ ನಿಷ್ಠೆ; ಶೂನ್ಯ: ಬರಿದಾದುದು; ಮಂದ: ನಿಧಾನ ಗತಿಯುಳ್ಳದು; ಭಾಗ್ಯ: ಮಂಗಳ, ಶ್ರೇಯಸ್ಸು; ಚಿಂತಿಸು: ಯೋಚಿಸು;
ಪದವಿಂಗಡಣೆ:
ಹಂದಿ+ಐತರಲೇಕೆ +ಬನದ +ಪು
ಳಿಂದನಲಿ +ಸೆಣಸಾಗಲೇಕೆ+ ಪು
ಳಿಂದರವ+ಮಾನಕರು+ ತಾವ್+ಅವಮಾನ್ಯರ್+ಆದೆವಲೆ
ಇಂದು +ಮೌಳಿ+ಉಪೇಕ್ಷೆಯೋ +ತಾನ್
ಇಂದು +ಶಿವಪದ+ ಭಕ್ತಿಶೂನ್ಯನೊ
ಮಂದಭಾಗ್ಯನು+ ತಾನಲಾ+ ಹಾಯೆನುತ +ಚಿಂತಿಸಿದ
ಅಚ್ಚರಿ:
(೧) ಳಿಂದರವಮಾನಕರು ತಾವವಮಾನ್ಯರಾದೆವಲೆ – ಪದಗಳ ರಚನೆ
(೨) ಅರ್ಜುನನು ವ್ಯಥೆಪಟ್ಟ ಬಗೆ – ಮಂದಭಾಗ್ಯನು ತಾನಲಾ ಹಾಯೆನುತ ಚಿಂತಿಸಿದ