ಗಾಯವುಂಟೇ ತೋರು ನಿನಗಡು
ಪಾಯೊ ಬಿಡು ಚೊಕ್ಕೆಯವನೆನುತಲ
ಜೇಯನೊಡನಿದಿರೆದ್ದು ತಿವಿದನು ಹರನ ಪೇರುರವ
ಗಾಯ ಘಾತಿಗೆ ನಿಮ್ಮ ಮತವೆಮ
ಗಾಯಿತೆನುತ ಪುರಾರಿ ಕಡು ಪೂ
ರಾಯದಲಿ ಕರವೆತ್ತಿ ನಸು ತಿವಿದನು ಧನಂಜಯನ (ಅರಣ್ಯ ಪರ್ವ, ೭ ಸಂಧಿ, ೩೧ ಪದ್ಯ)
ತಾತ್ಪರ್ಯ:
ನೀನು ನನ್ನನ್ನು ಹೊಡೆಯುವ ಬಗೆಯನ್ನರಿತಿದ್ದರೆ ಅದನ್ನು ತೋರಿಸು, ಈ ಪಟ್ಟುಗಳಿಂದ ನೀನು ಏನೂ ಮಾಡಲಾರೆ ಬಿಡು ಎನ್ನುತ್ತಾ ಅರ್ಜುನನು ಕಿರಾತನ ವಿಶಾಲವಾದ ಎದೆಗೆ ಗುದ್ದಿದನು. ಹಾಗೋ ಹೊಡೆತ ಕೊಡಲು ನೀನು ಹೇಳಿದ್ದೇ ನನ್ನ ಅಭಿಪ್ರಾಯ ಎಂದು ಶಿವನು ಕೈಯನ್ನು ಪೂರಾ ಎತ್ತಿ ಅರ್ಜುನನನ್ನು ಸ್ವಲ್ಪವೇ ತಿವಿದನು.
ಅರ್ಥ:
ಗಾಯ: ಪೆಟ್ಟು; ತೋರು: ಗೋಚರ, ಪ್ರದರ್ಶಿಸು; ಅಡುಪಾಯ: ಮಲ್ಲಯುದ್ಧದ ಒಂದು ವರಸೆ; ಬಿಡು: ತೊರೆ, ತ್ಯಜಿಸು; ಚೊಕ್ಕೆಯ: ಮಲ್ಲಯುದ್ಧದಲ್ಲಿ ಒಂದು ಪಟ್ಟು; ಅಜೇಯ: ಗೆಲ್ಲಲಾಗದವನು; ಇದಿರು: ಎದುರು; ಎದ್ದು: ಮೇಲೇಳು; ತಿವಿ: ಚುಚ್ಚು; ಹರ: ಶಂಕರ; ಉರ: ಎದೆ; ಘಾತಿ: ಹೊಡೆತ; ಮತ: ವಿಚಾರ;ಪುರಾರಿ: ಶಿವ; ಅರಿ: ವೈರಿ; ಕಡು: ಬಹಳ; ಪೂರಾಯ: ಪರಿಪೂರ್ಣ; ಕರ: ಹಸ್ತ; ನಸು: ಸ್ವಲ್ಪ; ತಿವಿ: ಚುಚ್ಚು;
ಪದವಿಂಗಡಣೆ:
ಗಾಯವುಂಟೇ +ತೋರು +ನಿನಗ್+ಅಡು
ಪಾಯೊ +ಬಿಡು +ಚೊಕ್ಕೆಯವನ್+ಎನುತಲ್
ಅಜೇಯನೊಡನ್+ಇದಿರೆದ್ದು+ ತಿವಿದನು +ಹರನ+ ಪೇರ್+ಉರವ
ಗಾಯ +ಘಾತಿಗೆ +ನಿಮ್ಮ +ಮತವ್+ಎಮಗ್
ಆಯಿತೆನುತ +ಪುರಾರಿ +ಕಡು +ಪೂ
ರಾಯದಲಿ +ಕರವೆತ್ತಿ+ ನಸು +ತಿವಿದನು +ಧನಂಜಯನ
ಅಚ್ಚರಿ:
(೧) ಅಡುಪಾಯ, ಚೊಕ್ಕೆಯ – ಮಲ್ಲಯುದ್ಧದ ವರಸೆಗಳು
(೨) ಅಜೇಯ, ಪುರಾರಿ, ಹರ – ಶಿವನನ್ನು ಕರೆದ ಬಗೆ