ಪದ್ಯ ೨೪: ಮುನಿಸ್ತೋಮವು ಶಂಕರನಲ್ಲಿ ಏನು ಬೇಡಿದರು?

ಮತ್ತೆ ನಮ್ಮನು ಪಿಸುಣರೆಂದೇ
ಚಿತ್ತವಿಸಲಾಗದು ತಪೋವನ
ಹೊತ್ತುತಿದೆ ವಿಪರೀತ ತಪಸಿಯ ತೀವ್ರ ತೇಜದಲಿ
ಇತ್ತಲೊಂದು ತಪೋವನವನೆಮ
ಗಿತ್ತು ಕರುಣಿಸು ಮೇಣ್ವಿಕಾರಿಯ
ನೆತ್ತಿಕಳೆ ಕಾರುಣ್ಯನಿಧಿಯೆಂದುದು ಮುನಿಸ್ತೋಮ (ಅರಣ್ಯ ಪರ್ವ, ೬ ಸಂಧಿ, ೨೪ ಪದ್ಯ)

ತಾತ್ಪರ್ಯ:
ಹೇ ಪರಮಾತ್ಮ, ಕಾರುಣ್ಯನಿಧಿಯೇ, ನಮ್ಮನ್ನು ಮತ್ತೆ ಚಾಡಿಕೋರರು ಎಂದು ಪರಿಗಣಿಸಬೇಡ, ನಮ್ಮ ತಪೋಭೂಮಿಯು ಆ ತಪಸ್ವಿಯ ತಪದಿಂದ ಹೊತ್ತಿ ಉರಿಯುತ್ತಿದೆ, ಆ ತಪಸ್ವಿಯ ತೀವ್ರ ತಪೋಜ್ವಾಲೆ ಭಯಂಕರವಾಗಿದೆ. ತಪಸ್ಸು ಮಾಡಲು ನಮಗಿದ್ದದ್ದು ಒಂದು ತಪೋಭೂಮಿ, ನಮಗೆ ತಪಸ್ಸು ಮಾಡಲು ಇನ್ನೊಂದು ತಪೋಭೂಮಿಯನ್ನು ನೀಡು, ಇಲ್ಲದಿದ್ದರೆ ಆ ವಿಕಾರಿ ತಪಸ್ವಿಯನ್ನು ಅಲ್ಲಿಂದೆಬ್ಬಿಸಿ ಕಳಿಸು ಎಂದು ಮುನಿಗಳ ಗುಂಪು ಶಂಕರನಲ್ಲಿ ಬಿನ್ನವಿಸಿತು.

ಅರ್ಥ:
ಪಿಸುಣ: ಚಾಡಿಕೋರ; ಚಿತ್ತವಿಸು: ಗಮನವಿಡು; ತಪೋವನ: ತಪಸ್ಸುಮಾಡುವ ಕಾಡು; ಹೊತ್ತು: ಬೆಂದು ಹೋಗು, ಉರಿ; ವಿಪರೀತ: ತುಂಬ; ತಪಸಿ: ತಪಸ್ಸು ಮಾಡುವ ವ್ಯಕ್ತಿ; ತೀವ್ರ: ಬಹಳ; ತೇಜ: ಕಾಂತಿ; ಗಿತ್ತು: ನೀಡಿ; ಕರುಣಿಸು: ದಯಮಾಡು; ಮೇಣ್: ಅಥವ; ವಿಕಾರಿ: ದುಷ್ಟ; ಎತ್ತಿಕಳೆ: ಎಬ್ಬಿಸು; ಕಾರುಣ್ಯ: ದಯೆ; ನಿಧಿ: ಐಶ್ವರ್ಯ; ಕಾರುಣ್ಯನಿಧಿ: ಕರುಣೆಯಸಾಗರ; ಸ್ತೋಮ: ಗುಂಪು;

ಪದವಿಂಗಡಣೆ:
ಮತ್ತೆ +ನಮ್ಮನು +ಪಿಸುಣರೆಂದೇ
ಚಿತ್ತವಿಸಲಾಗದು+ ತಪೋವನ
ಹೊತ್ತುತಿದೆ +ವಿಪರೀತ +ತಪಸಿಯ +ತೀವ್ರ +ತೇಜದಲಿ
ಇತ್ತಲೊಂದು+ ತಪೋವನವನ್+ಎಮಗ್
ಇತ್ತು +ಕರುಣಿಸು +ಮೇಣ್+ವಿಕಾರಿಯನ್
ಎತ್ತಿಕಳೆ+ ಕಾರುಣ್ಯನಿಧಿ+ಎಂದುದು +ಮುನಿ+ಸ್ತೋಮ

ಅಚ್ಚರಿ:
(೧) ಅರ್ಜುನನನ್ನು ವಿಕಾರಿ ಎಂದು ಕರೆದಿರುವುದು
(೨) ತ ಕಾರದ ತ್ರಿವಳಿ ಪದ – ತಪಸಿಯ ತೀವ್ರ ತೇಜದಲಿ

ನಿಮ್ಮ ಟಿಪ್ಪಣಿ ಬರೆಯಿರಿ