ಪದ್ಯ ೪೭: ಇಂದ್ರನು ಅರ್ಜುನನಿಗೆ ಏನು ಹೇಳಿ ತೆರಳಿದನು?

ಮಗನೆ ನಿನ್ನಯ ಮನದ ನಿಷ್ಠೆಗೆ
ಸೊಗಸಿದೆನು ಪಿರಿದಾಗಿ ಹರನಿ
ಲ್ಲಿಗೆ ಬರಲಿ ಕರುಣಿಸಲಿ ನಿನ್ನ ಮನೋಭಿವಾಂಛಿತವ
ಹಗೆಗೆ ಹರಿವಹುದೆಂದು ಸುರಮೌ
ಳಿಗಳ ಮಣಿ ಸರಿದನು ವಿಮಾನದ
ಲಗಧರನ ಮೈದುನನ ಮಹಿಮೆಯನಿನ್ನು ಕೇಳೆಂದ (ಅರಣ್ಯ ಪರ್ವ, ೫ ಸಂಧಿ, ೪೭ ಪದ್ಯ)

ತಾತ್ಪರ್ಯ:
ದೇವೇಂದ್ರನು ತನ್ನ ನಿಜ ಸ್ವರೂಪವನ್ನು ತೋರುತ್ತಾ, ಮಗನೇ, ನಿನ್ನ ಮನಸ್ಸಿನ ನಿಷ್ಠೆಗೆ ನಾನು ಬಹಳ ಸಂತೋಷಿಸುತ್ತೇನೆ. ಶಿವನು ಇಲ್ಲಿಗೆ ಬರಲಿ, ನಿನ್ನ ಮನಸ್ಸಿನ ಇಷ್ಟಾರ್ಥವನ್ನು ಕರುಣಿಸಲಿ. ನಿಮ್ಮ ವೈರಿಗಳು ನಾಶವಾಗುತ್ತಾರೆ, ಎಂದು ಹೇಳಿ ದೇವತೆಗಳಲ್ಲಿ ಶ್ರೇಷ್ಠವನಾದ ಇಂದ್ರನು ವಿಮಾನದ ಮೂಲಕ ಸ್ವರ್ಗಲೋಕಕ್ಕೆ ತೆರಳಿದನು. ಜನಮೇಜಯ ಈಗ ಕೃಷ್ಣನ ಮೈದುನನಾದ ಅರ್ಜುನನ ಮಹಿಮೆಯನ್ನು ಕೇಳು ಎಂದು ವೈಶಂಪಾಯನರು ಕಥೆಯನ್ನು ಮುಂದುವರೆಸಿದರು.

ಅರ್ಥ:
ಮಗ: ಸುತ; ಮನ: ಮನಸ್ಸು; ನಿಷ್ಠೆ: ಶ್ರದ್ಧೆ; ಸೊಗಸು: ಚೆಲುವು; ಪಿರಿದು: ಹಿರಿದು; ಹರ: ಶಿವ; ಬರಲಿ: ಆಗಮಿಸು; ಕರುಣಿಸು: ದಯೆತೋರು; ಮನ: ಮನಸ್ಸು; ವಾಂಛನ: ಆಸೆ, ಇಚ್ಛೆ; ಹಗೆ:ವೈರಿ; ಹರಿ: ನಾಶ; ಸುರಮೌಳಿ: ದೇವೇಂದ್ರ; ಮಣಿ: ಶ್ರೇಷ್ಠ; ಸರಿ: ತೆರಳು; ವಿಮಾನ: ಆಕಾಶದಲ್ಲಿ ಚಲಿಸುವ ವಾಹನ; ಅಗ: ಬೆಟ್ಟ; ಅಗಧರ: ಕೃಷ್ಣ; ಮೈದುನ: ತಂಗಿಯ ಗಂಡ; ಮಹಿಮೆ: ಶ್ರೇಷ್ಠತೆ, ಔನ್ನತ್ಯ;

ಪದವಿಂಗಡಣೆ:
ಮಗನೆ +ನಿನ್ನಯ +ಮನದ +ನಿಷ್ಠೆಗೆ
ಸೊಗಸಿದೆನು +ಪಿರಿದಾಗಿ +ಹರನ್
ಇಲ್ಲಿಗೆ +ಬರಲಿ +ಕರುಣಿಸಲಿ +ನಿನ್ನ +ಮನೋಭಿ+ವಾಂಛಿತವ
ಹಗೆಗೆ+ ಹರಿವಹುದ್+ಎಂದು +ಸುರಮೌ
ಳಿಗಳ +ಮಣಿ +ಸರಿದನು +ವಿಮಾನದಲ್
ಅಗಧರನ +ಮೈದುನನ +ಮಹಿಮೆಯನ್+ಇನ್ನು+ ಕೇಳೆಂದ

ಅಚ್ಚರಿ:
(೧) ಕೃಷ್ಣನನ್ನು ಅಗಧರ ಎಂದು ಕರೆದಿರುವುದು
(೨) ಇಂದ್ರನನ್ನು ಕರೆದ ಬಗೆ – ಸುರಮೌಳಿಗಳ ಮಣಿ
(೩) ದೇವತೆಗಳ ವಾಹನ – ವಿಮಾನದ ಪ್ರಸ್ತಾಪ
(೪) ಮ, ನ ಅಕ್ಷರದ ಬಳಕೆ – ಮಗನೆ ನಿನ್ನಯ ಮನದ ನಿಷ್ಠೆಗೆ

ನಿಮ್ಮ ಟಿಪ್ಪಣಿ ಬರೆಯಿರಿ