ಪದ್ಯ ೪೪: ಕೃಷ್ಣನ ಮಹಿಮೆಯನ್ನು ಸಹದೇವ ಹೇಗೆ ನುಡಿದನು?

ದೇವ ನಿಮ್ಮಡಿಯಂಘ್ರಿ ಕಮಲವ
ನಾವ ನೆನೆವನವಂಗೆ ಜಪತಪ
ಸಾವು ಹುಟ್ಟಿಲ್ಲೆಂಬುದೈ ವರವೇದಶಾಸ್ತ್ರಗಳು
ನಾವಲೇ ಕೃತಕೃತ್ಯರಿಂದೀ
ದೇವ ಸಾಕ್ಷಾತ್ಕಾರ ದರ್ಶನ
ಭಾವವೋಯಿದು ನಮಗೆನುತ ಹೊಗಳಿದನು ಸಹದೇವ (ಅರಣ್ಯ ಪರ್ವ, ೪ ಸಂಧಿ, ೪೪ ಪದ್ಯ)

ತಾತ್ಪರ್ಯ:
ಸಹದೇವನು ಶ್ರೀಕೃಷ್ಣನನ್ನು ಹೊಗಳುತ್ತಾ, ದೇವ ನಿಮ್ಮ ಪಾದಕಮಲಗಳನ್ನು ಯಾರು ನೆನೆಯುತ್ತಾರೋ ಅವನಿಗೆ ಹುಟ್ಟು ಸಾವುಗಳಿಲ್ಲ, ಅವನು ಜಪತಪಗಳನ್ನು ಮಾಡಬೇಕಿಲ್ಲ ಎಂದು ವೇದಗಳೂ, ಶಾಸ್ತ್ರಗಳೂ ಹೇಳುತ್ತವೆ. ನಿಮ್ಮ ಸಾಕ್ಷಾತ್ ದರ್ಶನದ ಫಲದಿಂದ ನಾವು ಕೃತಾರ್ಥರಾಗಿದ್ದೇವೆ ಎಂದು ಶ್ರೀಕೃಷ್ಣನನ್ನು ಹೊಗಳಿದನು.

ಅರ್ಥ:
ದೇವ: ಭಗವಂತ; ನಿಮ್ಮಡಿ: ನಿಮ್ಮ ಪಾದ; ಅಂಘ್ರಿ: ಪಾದ; ಕಮಲ: ತಾವರೆ; ನೆನೆ; ಜ್ಞಾಪಿಸು; ಜಪ: ದೇವರ ನಾಮದ ಪಠಣ; ತಪ: ಧ್ಯಾನ; ಸಾವು: ಮರಣ; ಹುಟ್ಟು: ಜನನ; ವರ: ಶ್ರೇಷ್ಠ; ವೇದ: ಆಗಮ, ಜ್ಞಾನ; ಶಾಸ್ತ್ರ: ಧಾರ್ಮಿಕ ವಿಷಯಗಳ ಬಗೆಗೆ ಬರೆದ ಪ್ರಮಾಣ ಗ್ರಂಥ, ದರ್ಶನ; ಕೃತಕೃತ್ಯ: ಧನ್ಯ, ಕೃತಾರ್ಥ; ಸಾಕ್ಷಾತ್ಕಾರ: ಜ್ಞಾನದ ಅನುಭವ, ಅರಿವು; ದರ್ಶನ: ನೋಟ; ಭಾವ: ಭಕ್ತಿಯ ರಹಸ್ಯ, ಜ್ಞಾನ; ಹೊಗಳು: ಪ್ರಶಂಶಿಸು;

ಪದವಿಂಗಡಣೆ:
ದೇವ +ನಿಮ್ಮಡಿ+ಅಂಘ್ರಿ +ಕಮಲವನ್
ಆವ +ನೆನೆವನ್+ಅವಂಗೆ +ಜಪತಪ
ಸಾವು +ಹುಟ್ಟಿಲ್+ಎಂಬುದೈ+ ವರ+ವೇದ+ಶಾಸ್ತ್ರಗಳು
ನಾವಲೇ+ ಕೃತಕೃತ್ಯರಿಂದೀ
ದೇವ+ ಸಾಕ್ಷಾತ್ಕಾರ+ ದರ್ಶನ
ಭಾವವೋಯಿದು +ನಮಗೆನುತ+ ಹೊಗಳಿದನು+ ಸಹದೇವ

ಅಚ್ಚರಿ:
(೧) ಶ್ರೀಕೃಷ್ಣನ ಮಹಿಮೆಯನ್ನು ಹೇಳುವ ಪರಿ – ನಿಮ್ಮಡಿಯಂಘ್ರಿ ಕಮಲವನಾವ ನೆನೆವನವಂಗೆ ಜಪತಪ ಸಾವು ಹುಟ್ಟಿಲ್ಲೆಂಬುದೈ ವರವೇದಶಾಸ್ತ್ರಗಳು

ನಿಮ್ಮ ಟಿಪ್ಪಣಿ ಬರೆಯಿರಿ