ಪದ್ಯ ೪೦: ಹಣ್ಣನ್ನು ಎಷ್ಟು ಭಾಗಗಳನ್ನಾಗಿ ಮಾಡಿದನು?

ವರ ಮುನೀಶ್ವರನಿತ್ತಫಲವನು
ಹರಿಣಲೋಚನೆಗೀಯಲಾ ಪಂ
ಕರುಹಮುಖಿ ಬಾಗಿನವನಿತ್ತಳು ಮುನಿಪಗೊಲವಿನಲಿ
ಪರಮ ಹರುಷದಿ ಹತ್ತು ಭಾಗಾಂ
ತರವ ಮಾಡಿ ಮುರಾರಿ ಕರೆಕರೆ
ಧರಣಿಸುರರನು ಸರ್ವರನು ಬರಹೇಳು ನೀನೆಂದ (ಅರಣ್ಯ ಪರ್ವ, ೪ ಸಂಧಿ, ೪೦ ಪದ್ಯ)

ತಾತ್ಪರ್ಯ:
ಕಣ್ವಮುನಿಗಳು ಕೃಷ್ಣನಿಗೆ ನೀಡಿದ ಫಲವನ್ನು ಕೃಷ್ಣನು ದ್ರೌಪದಿಗೆ ಎಲ್ಲರಿಗೂ ನೀಡಲು ಹೇಳಲು, ದ್ರೌಪದಿಯು ಆ ಹಣ್ಣನ್ನು ಬಾಗಿನವಾಗಿ ಕಣ್ವಮಹರ್ಷಿಗಳಿಗೆ ನೀಡಿದಳು. ನಂತರ ಶ್ರೀಕೃಷ್ಣನು ಆ ಹಣ್ಣನ್ನು ಹತ್ತು ಭಾಗಗಳಾಗಿ ವಿಂಗಡಿಸಿ ಬ್ರಾಹ್ಮಣರೆಲ್ಲರನ್ನೂ ಬೇಗ ಕರೆ ಎಂದು ಹೇಳಿದನು.

ಅರ್ಥ:
ವರ: ಶ್ರೇಷ್ಠ; ಮುನಿ: ಋಷಿ; ಇತ್ತ: ನೀಡಿದ; ಫಲ: ಹಣ್ಣು; ಹರಿಣ: ಜಿಂಕೆ; ಲೋಚನ: ಕಣ್ಣು; ಹರಿಣಲೋಚನೆ: ಜಿಂಕೆಯಂತಹ ಕಣ್ಣುಳ್ಳವಳು, ಸುಂದರಿ; ಪಂಕ: ಕೆಸರು; ಪಂಕರುಹ: ಕಮಲ; ಪಂಕರುಹಮುಖಿ: ಕಮಲದಂತ ಮುಖವುಳ್ಳವಳು (ದ್ರೌಪದಿ); ಬಾಗಿನ: ಮುತ್ತೈದೆಗೆ ಕೊಡುವ ಕಾಣಿಕೆ; ಒಲವು: ಪ್ರೀತಿ; ಪರಮ: ಶ್ರೇಷ್ಠ; ಹರುಷ: ಸಂತಸ; ಹತ್ತು: ದಶ; ಭಾಗ: ಚೂರು; ಅಂತರ: ಭೇದ; ಮುರಾರಿ: ಕೃಷ್ಣ; ಕರೆ: ಬರೆಮಾಡು; ಧರಣಿಸುರ: ಬ್ರಾಹ್ಮಣ; ಸರ್ವ: ಎಲ್ಲರು; ಬರಹೇಳು: ಆಗಮಿಸು, ಕರೆ;

ಪದವಿಂಗಡಣೆ:
ವರ +ಮುನೀಶ್ವರನ್+ಇತ್ತ+ಫಲವನು
ಹರಿಣಲೋಚನೆಗ್+ಈಯಲ್+ಆ+ ಪಂ
ಕರುಹಮುಖಿ +ಬಾಗಿನವನ್+ಇತ್ತಳು +ಮುನಿಪಗ್+ಒಲವಿನಲಿ
ಪರಮ +ಹರುಷದಿ+ ಹತ್ತು +ಭಾಗಾಂ
ತರವ+ ಮಾಡಿ +ಮುರಾರಿ +ಕರೆಕರೆ
ಧರಣಿಸುರರನು+ ಸರ್ವರನು +ಬರಹೇಳು +ನೀನೆಂದ

ಅಚ್ಚರಿ:
(೧) ದ್ರೌಪದಿಯನ್ನು ಕರೆದ ಪರಿ – ಹರಿಣಲೋಚನೆ, ಪಂಕರುಹಮುಖಿ

ನಿಮ್ಮ ಟಿಪ್ಪಣಿ ಬರೆಯಿರಿ