ಹೇಳಿರೈ ಭೂಸುರರು ಋಷಿಗಳು
ಮೇಲೆ ಹತ್ತುವುಪಾಯವನು ಋಷಿ
ಜಾಲದೊಳಗೆಂದೆನಲು ನುಡಿದನು ಧೌಮ್ಯ ನಸುನಗುತ
ಹೇಳಲರಿದಿದ ನಿಮ್ಮ ಸಲಹುವ
ಬಾಲಕೇಳಿಯ ಕೃಷ್ಣ ಬಲ್ಲನು
ಕಾಲವನು ನೂಕದೆ ಮಹಾತ್ಮನ ಭಜಿಸು ನೀನೆಂದ (ಅರಣ್ಯ ಪರ್ವ, ೪ ಸಂಧಿ, ೨೧ ಪದ್ಯ)
ತಾತ್ಪರ್ಯ:
ಧರ್ಮಜನಿಗೆ ಯಾವ ಮಾರ್ಗವು ತೋರದೆ ತನ್ನ ಜೊತೆಯಲ್ಲಿದ್ದ ಬ್ರಾಹ್ಮಣರ ಕಡೆ ಮುಖಮಾಡಿ, ಈ ಹಣ್ಣನ್ನು ಮತ್ತೆ ಮರದ ಮೇಲಿರಿಸುವ ಉಪಾಯವನ್ನು ಋಷಿಗಳಲೊಬ್ಬರು ತಿಳಿಸಿರಿ ಎಂದು ಕೇಳಲು, ಆಗ ಧೌಮ್ಯನು ಇದರ ಉಪಾಯವನ್ನು ಹೇಳಿಕೊಡಲು ನಮ್ಮಿಂದ ಸಾಧ್ಯವಿಲ್ಲ, ನಿಮ್ಮ ರಕ್ಷಕನೂ, ಬಾಲ ಲೀಲೆಗಳಿಂದ ಪ್ರಸಿದ್ಧನಾದ ಶ್ರೀಕೃಷ್ಣನೇ ಇದಕ್ಕೆ ಉಪಾಯವನ್ನು ಸೂಚಿಸಬೇಕು, ನೀವು ಕಾಲಹರಣ ಮಾಡದೆ ಅವನನ್ನು ಭಜಿಸಿರಿ ಎಂದು ಹೇಳಿದರು.
ಅರ್ಥ:
ಹೇಳು: ತಿಳಿಸು; ಭೂಸುರ: ಬ್ರಾಹ್ಮಣ; ಋಷಿ: ಮುನಿ; ಹತ್ತು: ಮೇಲೇರು; ಉಪಾಯ: ಸಲಹೆ, ಯುಕ್ತಿ; ಜಾಲ: ಬಲೆ; ನುಡಿ: ಮಾತಾಡು; ನಗು: ಸಂತಸ; ಅರಿ: ತಿಳಿ; ಸಲಹು: ಕಾಪಾಡು; ಬಾಲ: ಚಿಕ್ಕವ; ಕೇಳಿ: ಕ್ರೀಡೆ; ಬಲ್ಲನು: ತಿಳಿದವ; ಕಾಲ: ಸಮಯ; ನೂಕು: ತಳ್ಳು; ಮಹಾತ್ಮ: ಶ್ರೇಷ್ಠ; ಭಜಿಸು: ಆರಾಧಿಸು;
ಪದವಿಂಗಡಣೆ:
ಹೇಳಿರೈ +ಭೂಸುರರು +ಋಷಿಗಳು
ಮೇಲೆ+ ಹತ್ತುವ್+ಉಪಾಯವನು+ ಋಷಿ
ಜಾಲದೊಳಗೆಂದ್+ಎನಲು +ನುಡಿದನು+ ಧೌಮ್ಯ +ನಸುನಗುತ
ಹೇಳಲ್+ಅರಿದಿದ+ ನಿಮ್ಮ +ಸಲಹುವ
ಬಾಲ+ಕೇಳಿಯ +ಕೃಷ್ಣ +ಬಲ್ಲನು
ಕಾಲವನು +ನೂಕದೆ +ಮಹಾತ್ಮನ +ಭಜಿಸು +ನೀನೆಂದ
ಅಚ್ಚರಿ:
(೧) ಕೃಷ್ಣನ ಗುಣಗಾನ – ನಿಮ್ಮ ಸಲಹುವ ಬಾಲಕೇಳಿಯ ಕೃಷ್ಣ ಬಲ್ಲನು