ಪದ್ಯ ೧೬: ಧರ್ಮಜನು ಹಣ್ಣನ್ನು ನೋಡಿ ಹೇಗೆ ಪ್ರತಿಕ್ರಯಿಸಿದನು?

ಫಲವ ಕೊಂಡಾ ಭೀಮ ಬೇಗದಿ
ನಲವಿನಲಿ ನಡೆತಂದು ಭೂಪನ
ನಿಳಯದಲಿ ತಂದಿಳುಹಿದರೆ ಯಮಸೂನು ಬೆರಗಾಗಿ
ಕೆಲದಲಿದ್ದನುಜರಿರ ಋಷಿ ಜನ
ಗಳಿರ ನೋಡಿರೆಯೆನಲು ಶಿವಶಿವ
ನಳಿನನಾಭನೆ ಬಲ್ಲನೆಂದರು ಸಕಲ ಋಷಿವರರು (ಅರಣ್ಯ ಪರ್ವ, ೪ ಸಂಧಿ, ೧೬ ಪದ್ಯ)

ತಾತ್ಪರ್ಯ:
ಭೀಮನು ಮರಿಯಾನೆ ಗಾತ್ರದ ಜಂಬೂಫಲವನ್ನು ಕೊಂಡು ಬೇಗನೆ ನಡೆದು ಧರ್ಮಜನಿದ್ದ ಮನೆಗೆ ತಂದನು. ಇದನ್ನು ನೋಡಿದ ಧರ್ಮಜನು ಆಶ್ಚರ್ಯಪಟ್ಟು ತನ್ನ ಹತ್ತಿರದಲ್ಲಿದ್ದ ತಮ್ಮಂದಿರು, ಋಷಿಗಳನ್ನು ಕರೆದು ಈ ವಿಚಿತ್ರ ಹಣ್ಣನ್ನು ತೋರಿಸಿದನು, ಇದನ್ನು ನೀವೆಲ್ಲಾದರೂ ನೋಡಿದ್ದೀರಾ ಎಂದು ಪ್ರಶ್ನೆಯನ್ನು ಕೇಳಲು, ಋಷಿಮುನಿಗಳು ಈ ಪ್ರಶ್ನೆಗೆ ಶ್ರೀಕೃಷ್ಣನೇ ಉತ್ತರಿಸಬಲ್ಲ ಎಂದು ಹೇಳಿದರು.

ಅರ್ಥ:
ಫಲ: ಹಣ್ಣು; ಕೊಂಡು: ತೆಗೆದು; ಬೇಗ: ಶೀಘ್ರ; ನಲವು: ಸಂತಸ; ನಡೆ: ಚಲಿಸು; ಭೂಪಳ್ ರಾಜ; ನಿಳಯ: ಮನೆ; ಇಳುಹು: ಇಳಿಸು; ಸೂನು: ಮಗ; ಬೆರಗು: ಆಶ್ಚರ್ಯ; ಕೆಲ: ಹತ್ತಿರ; ಅನುಜ: ತಮ್ಮ; ಋಷಿ: ಮುನಿ; ನೋಡಿ: ವೀಕ್ಷಿಸಿ; ನಳಿನನಾಭ: ವಿಷ್ಣು, ಕೃಷ್ಣ; ನಳಿನ: ಕಮಲ; ಬಲ್ಲ: ತಿಳಿ; ಸಕಲ: ಎಲ್ಲಾ;

ಪದವಿಂಗಡಣೆ:
ಫಲವ +ಕೊಂಡ್+ಆ+ ಭೀಮ+ ಬೇಗದಿ
ನಲವಿನಲಿ +ನಡೆತಂದು +ಭೂಪನ
ನಿಳಯದಲಿ +ತಂದ್+ಇಳುಹಿದರೆ+ ಯಮಸೂನು +ಬೆರಗಾಗಿ
ಕೆಲದಲ್+ಇದ್ದ್+ಅನುಜರಿರ+ ಋಷಿ+ ಜನ
ಗಳಿರ+ ನೋಡಿರೆ+ಎನಲು +ಶಿವಶಿವ
ನಳಿನನಾಭನೆ+ ಬಲ್ಲನೆಂದರು +ಸಕಲ +ಋಷಿವರರು

ಅಚ್ಚರಿ:
(೧) ಆಶ್ಚರ್ಯಗೊಂಡಾಗ ಹೇಳುವ ಪದ – ಶಿವ ಶಿವ
(೨) ಧರ್ಮಜನನ್ನು ಯಮಸೂನು, ಕೃಷ್ಣನನ್ನು ನಳಿನನಾಭ ಎಂದು ಕರೆದಿರುವುದು

ನಿಮ್ಮ ಟಿಪ್ಪಣಿ ಬರೆಯಿರಿ