ಪದ್ಯ ೧೫: ಭೀಮನು ನೇರಳೆ ಹಣ್ಣನು ಹೇಗೆ ಕಿತ್ತನು?

ಇದು ವಿಚಿತ್ರದ ಫಲವು ತಾನೊಂ
ದಿದೆ ಮತಂಗಜ ಗಾತ್ರದಲಿ ನಾ
ನಿದನು ಕೊಂಡೊಯ್ವೆನು ಮಹೀಪಾಲನ ನಿರೀಕ್ಷಣೆಗೆ
ಗದೆಯ ಕಕ್ಷದೊಳೌಕಿ ಮಾರುತಿ
ಮುದದಿ ಕೃಷ್ಣನ ನೆನೆಯುತಾನಂ
ದದಲಿ ವೃಕ್ಷವನಡರಿ ಕೊಯ್ದಿಳುಹಿದನು ತವಕದಲಿ (ಅರಣ್ಯ ಪರ್ವ, ೪ ಸಂಧಿ, ೧೫ ಪದ್ಯ)

ತಾತ್ಪರ್ಯ:
ಮರಗಳ ಗುಂಪಿನಲ್ಲಿದ್ದ ಒಂದು ನೇರಳೆ ಮರವನ್ನು ನೋಡಿ, ಇದು ಬಹಳ ವಿಚಿತ್ರವಾಗಿದೆಯೆಲ್ಲಾ, ಮರಿಯಾನೆಯ ಗಾತ್ರದಲ್ಲಿ ಒಂದು ವಿಚಿತ್ರವಾದ ಹಣ್ಣಿದೆ, ಇದನ್ನು ತೆಗೆದುಕೊಂಡು ಧರ್ಮಜನಿಗೆ ತೋರಿಸಬೇಕೆಂದುಕೊಂಡು, ಭೀಮನು ತನ್ನ ಗದೆಯನ್ನು ಕಂಕುಳಲ್ಲಿ ನೂಕಿ, ಕೃಷ್ಣನನ್ನು ನೆನೆಯುತ್ತಾ ಮರವನ್ನು ಹತ್ತಿ ಆ ಹಣ್ಣನ್ನು ಕಿತ್ತುಕೊಂಡು ಕೆಳಕ್ಕಿಳಿದನು.

ಅರ್ಥ:
ವಿಚಿತ್ರ: ಆಶ್ಚರ್ಯ, ಬೆರಗು; ಫಲ: ಹಣ್ಣು; ಮತಂಗಜ: ಆನೆಯ ಮರಿ; ಗಾತ್ರ: ದಪ್ಪ; ಒಯ್ಯು: ತೆಗೆದುಕೊಂಡು ಹೋಗು; ಮಹೀಪಾಲ: ರಾಜ; ಮಹೀ: ಭೂಮಿ; ನಿರೀಕ್ಷೆ: ನೋಡುವುದು; ಗದೆ: ಮುದ್ಗರ; ಕಕ್ಷ: ಕಂಕಳು; ಔಕು: ನೂಕು; ಮಾರುತಿ: ಭೀಮ; ಮುದ: ಸಂತಸ; ನೆನೆ: ಜ್ಞಾಪಿಸಿಕೊ; ಆನಂದ: ಸಂತಸ; ವೃಕ: ಮರ; ಅಡರು: ಹತ್ತು; ಕೊಯ್ದು: ಸೀಳು; ತವಕ: ಬಯಕೆ, ಆತುರ;

ಪದವಿಂಗಡಣೆ:
ಇದು+ ವಿಚಿತ್ರದ +ಫಲವು +ತಾನೊಂ
ದಿದೆ +ಮತಂಗಜ+ ಗಾತ್ರದಲಿ +ನಾನ್
ಇದನು +ಕೊಂಡೊಯ್ವೆನು +ಮಹೀಪಾಲನ +ನಿರೀಕ್ಷಣೆಗೆ
ಗದೆಯ +ಕಕ್ಷದೊಳ್+ಔಕಿ+ ಮಾರುತಿ
ಮುದದಿ+ ಕೃಷ್ಣನ +ನೆನೆಯುತ್+ಆನಂ
ದದಲಿ +ವೃಕ್ಷವನ್+ಅಡರಿ +ಕೊಯ್ದ್+ಇಳುಹಿದನು +ತವಕದಲಿ

ಅಚ್ಚರಿ:
(೧) ಹಣ್ಣನ್ನು ವಿವರಿಸುವ ಪರಿ – ಫಲವು ತಾನೊಂದಿದೆ ಮತಂಗಜ ಗಾತ್ರದಲಿ
(೨) ಮುದ, ಆನಂದ – ಸಮನಾರ್ಥಕ ಪದ

ನಿಮ್ಮ ಟಿಪ್ಪಣಿ ಬರೆಯಿರಿ