ಪದ್ಯ ೧: ಪಾಂಡವರು ಕಾಡಿನಲ್ಲಿ ಯಾವ ಪ್ರಾಣಿಗಳನ್ನು ನೋಡಿದರು?

ಕೇಳು ಜನಮೇಜಯ ಧರಿತ್ರೀ
ಪಾಲ ಯಮಸುತ ಮುನಿಜನಂಗಳ
ಮೇಳದಲಿ ಹೊರವಂಟು ತನ್ನನುಜಾತರೊಡಗೂಡಿ
ತಾಳಿಗೆಯ ತಲ್ಲಣದ ಗಿರಿಗಳ
ಮೇಲೆ ಚರಿಸುತ ಬಂದು ವಿಪಿನ
ವ್ಯಾಳಗಜ ಶಾರ್ದೂಲ ಸಿಂಹಾದಿಗಳನೀಕ್ಷಿಸುತ (ಅರಣ್ಯ ಪರ್ವ, ೪ ಸಂಧಿ, ೧ ಪದ್ಯ)

ತಾತ್ಪರ್ಯ:
ರಾಜ ಜನಮೇಜಯ ಕೇಳು, ಯುಧಿಷ್ಠಿರನು ತನ್ನ ತಮ್ಮಂದಿರು ದ್ರೌಪದಿ ಮತ್ತು ಮುನಿಗಳೊಡನೆ ಬಹು ಕಷ್ಟಕರವಾದ ಬೆಟ್ಟಗಳಲ್ಲಿ ಓಡಾಡುತ್ತಾ ಬಂದು ಕಾಡಿನಲ್ಲಿದ್ದ ಸರ್ಪ, ಆನೆ, ಹುಲಿ, ಸಿಂಹ ಮೊದಲಾದ ಪ್ರಾಣಿಗಳನ್ನು ನೋಡಿದರು.

ಅರ್ಥ:
ಕೇಳು: ಆಲಿಸು; ಧರಿತ್ರೀ: ಭೂಮಿ; ಧರಿತ್ರೀಪಾಲ: ರಾಜ; ಸುತ: ಮಗ; ಮುನಿ: ಋಷಿ; ಜನ:
ಮನುಷ್ಯರ ಗುಂಪು; ಮೇಳ: ಗುಂಪು; ಹೊರವಂಟು: ಹೊರಟು; ಅನುಜ: ತಮ್ಮ; ಒಡಗೂಡು: ಜೊತೆ; ತಾಳಿಗೆ: ಗಂಟಲು; ತಲ್ಲಣ: ತಾಪ, ಸಂಕಟ; ಗಿರಿ: ಬೆಟ್ಟ; ಚರಿಸು: ಓಡಾಡು; ವಿಪಿನ: ಅರಣ್ಯ; ವ್ಯಾಳ: ಸರ್ಪ; ಗಜ: ಆನೆ; ಶಾರ್ದೂಲ: ಹುಲಿ; ಸಿಂಹ: ಕೇಸರಿ; ಈಕ್ಷಿಸು: ನೋಡು;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಯಮಸುತ +ಮುನಿ+ಜನಂಗಳ
ಮೇಳದಲಿ+ ಹೊರವಂಟು+ ತನ್+ಅನುಜಾತರ್+ಒಡಗೂಡಿ
ತಾಳಿಗೆಯ +ತಲ್ಲಣದ+ ಗಿರಿಗಳ
ಮೇಲೆ +ಚರಿಸುತ+ ಬಂದು +ವಿಪಿನ
ವ್ಯಾಳ+ಗಜ+ ಶಾರ್ದೂಲ +ಸಿಂಹಾದಿಗಳನ್+ಈಕ್ಷಿಸುತ

ಅಚ್ಚರಿ:
(೧) ಕಷ್ಟಕರವಾದುದು ಎಂದು ಹೇಳಲು – ತಾಳಿಗೆಯ ತಲ್ಲಣದ ಗಿರಿಗಳ ಮೇಲೆ ಚರಿಸುತ

ನಿಮ್ಮ ಟಿಪ್ಪಣಿ ಬರೆಯಿರಿ