ಪದ್ಯ ೧೩: ಭೀಮನ ಆಶ್ಚರ್ಯಕ್ಕೆ ಕಾರಣವೇನು?

ಎಂದನೀ ಪವಮಾನಸುತನು ಮು
ಕುಂದನನು ಬೆಸನೇನು ಮುನಿ ಕ್ಷಣ
ವೆಂದೆನಲು ಶೋಕಿಸಿದ ಕಾರಣವೇನು ಧರ್ಮಜಗೆ
ಬಂದ ವಿವರವ ವಿಸ್ತರಿಸೆ ನೆರೆ
ಸಂದ ಕಣ್ಣೀರ್ಸುರಿದುದಿಮ್ಮಡಿ
ಬಂದಪುವಿದೇನು ನಯನಾಂಬುಗಳು ಹದನೆಂದ (ಅರಣ್ಯ ಪರ್ವ, ೩ ಸಂಧಿ, ೧೩ ಪದ್ಯ)

ತಾತ್ಪರ್ಯ:
ಹೀಗೆ ಆಶ್ಚರ್ಯಪಟ್ಟ ಭೀಮನು ಕೃಷ್ಣನನ್ನು ಕೇಳಲು ಮುಂದಾದನು, ಹೇ ಕೃಷ್ಣ ಆಮಂತ್ರಣವನ್ನು ಸ್ವೀಕರಿಸು ಎಂದು ಹೇಳಲು ಮುನಿವರ್ಯರೇಕೆ ಅತ್ತರು? ಆ ವಿವರವನ್ನು ಕೇಳಿ ನಿಮ್ಮ ಹಾಗು ಧರ್ಮಜನ ಕಣ್ಣಗಳಲ್ಲಿ ನೀರು ತುಂಬಲು ಕಾರಣವೇನು ಎಂದು ಕೇಳಿದನು.

ಅರ್ಥ:
ಪವಮಾನ: ವಾಯು; ಸುತ: ಪುತ್ರ; ಬೆಸ: ಅಪ್ಪಣೆ, ಆದೇಶ; ಮುನಿ: ಋಷಿ; ಕ್ಷಣ: ಆಮಂತ್ರಣ, ಸಮಯ; ಶೋಕ: ದುಃಖ; ಕಾರಣ: ನಿಮಿತ್ತ, ಹೇತು; ಬಂದ: ಆಗಮಿಸು; ವಿವರ: ವಿಸ್ತಾರ, ಸಂದು; ವಿಸ್ತರಿಸು: ಹಬ್ಬುಗೆ; ನೆರೆ: ಜೊತೆಗೂಡು; ಸಂದ: ಕಳೆದ, ಹಿಂದಿನ; ಕಣ್ಣೀರು: ದೃಗಜಲ; ಇಮ್ಮಡಿ: ಎರಡು ಪಟ್ಟು; ನಯನಾಂಬು: ಕಣ್ಣಿರು; ಹದ: ರೀತಿ;

ಪದವಿಂಗಡಣೆ:
ಎಂದನೀ +ಪವಮಾನಸುತನು +ಮು
ಕುಂದನನು +ಬೆಸನ್+ಏನು +ಮುನಿ +ಕ್ಷಣವ್
ಎಂದೆನಲು +ಶೋಕಿಸಿದ+ ಕಾರಣವೇನು +ಧರ್ಮಜಗೆ
ಬಂದ +ವಿವರವ +ವಿಸ್ತರಿಸೆ +ನೆರೆ
ಸಂದ +ಕಣ್ಣೀರ್+ಸುರಿದುದ್+ಇಮ್ಮಡಿ
ಬಂದಪುವ್+ಇದೇನು +ನಯನಾಂಬುಗಳು +ಹದನೆಂದ

ಅಚ್ಚರಿ:
(೧) ಕಣ್ಣೀರು, ನಯನಾಂಬು – ಸಮನಾರ್ಥಕ ಪದ

ನಿಮ್ಮ ಟಿಪ್ಪಣಿ ಬರೆಯಿರಿ