ಪದ್ಯ ೩೦: ಕಿಮ್ಮೀರನು ಯುದ್ಧಕ್ಕೆ ಹೇಗೆ ಸಿದ್ಧನಾದನು?

ಎಂಬೆನೇನನು ಪವನಜನ ಕೈ
ಕೊಂಬ ದೈತ್ಯನೆ ಹೆಮ್ಮರನ ಹೆ
ಗ್ಗೊಂಬ ಮುರಿದನು ಸವರಿದನು ಶಾಖೋಪಶಾಖೆಗಳ
ತಿಂಬೆನಿವನನು ತಂದು ತನ್ನ ಹಿ
ಡಿಂಬಕನ ಹಗೆ ಸಿಲುಕಿತೇ ತಾ
ನಂಬಿದುದು ನೆರೆ ದೈವವೆನುತಿದಿರಾದನಮರಾರಿ (ಅರಣ್ಯ ಪರ್ವ, ೧ ಸಂಧಿ, ೩೦ ಪದ್ಯ)

ತಾತ್ಪರ್ಯ:
ಭೀಮನು ಕಿಮ್ಮೀರನೆದುರು ಗರ್ಜಿಸಲು, ಕಿಮ್ಮೀರನು ಭೀಮನಿಗೆ ಹೆದರುವಾನೇ, ದೊಡ್ಡಮರದ ದೊಡ್ಡ ಕೊಂಬೆಯನ್ನು ಕಿತ್ತು ಅದನ್ನು ನಾಶಗೊಳಿಸಿ ನನ್ನ ಹಿಡಿಂಬನ ಶತ್ರುಗಳು ಇದೀಗ ಸಿಕ್ಕಿದ್ದಾರೆ, ನಾನು ಪೂಜಿಸುತ್ತಿರುವುದು ನಿಜವಾಗಿಯೂ ದೊಡ್ಡ ದೇವರು ಎನ್ನುತ್ತಾ ಯುದ್ಧಕ್ಕೆ ಸಿದ್ಧನಾದನು.

ಅರ್ಥ:
ಪವನಜ: ಭೀಮ; ಕೈಕೊಂಬ: ಸಿಲುಕು; ದೈತ್ಯ: ರಾಕ್ಷಸ; ಹೆಮ್ಮರ: ದೊಡ್ಡ ಮರ; ಕೊಂಬೆ: ಟೊಂಗೆ; ಮುರಿ: ಸೀಳು; ಸವರು: ಸಾರಿಸು, ನಾಶಮಾಡು; ಶಾಖ: ಮರದ ಕೊಂಬೆ; ತಿಂಬೆ: ತಿನ್ನು; ತಂದು: ಬರೆಮಾಡು; ಹಗೆ: ವೈರ; ಸಿಲುಕು: ಸಿಕ್ಕು, ಬಂಧನಕ್ಕೊಳಗಾಗು; ನಂಬು: ವಿಶ್ವಾಸ, ಭರವಸೆ; ನೆರೆ: ಸೇರು, ಜೊತೆಗೂಡು; ದೈವ: ಭಗವಂತ; ಇದಿರು: ಎದುರು; ಅಮರಾರಿ: ದೇವತೆಗಳ ವೈರಿ (ರಾಕ್ಷಸ);

ಪದವಿಂಗಡಣೆ:
ಎಂಬೆನೇನ್+ಅನು +ಪವನಜನ+ ಕೈ
ಕೊಂಬ +ದೈತ್ಯನೆ +ಹೆಮ್ಮರನ+ ಹೆ
ಗ್ಗೊಂಬ +ಮುರಿದನು+ ಸವರಿದನು+ ಶಾಖೋಪ+ಶಾಖೆಗಳ
ತಿಂಬೆನ್+ಇವನನು +ತಂದು +ತನ್ನ +ಹಿ
ಡಿಂಬಕನ+ ಹಗೆ+ ಸಿಲುಕಿತೇ+ ತಾ
ನಂಬಿದುದು +ನೆರೆ+ ದೈವವೆನುತ್+ಇದಿರಾದನ್+ಅಮರಾರಿ

ಅಚ್ಚರಿ:
(೧) ಕಿಮ್ಮೀರನ ಎದುರಿಸಲು ಸಿದ್ಧನಾದ ಪರಿ – ತಿಂಬೆನಿವನನು ತಂದು ತನ್ನ ಹಿ
ಡಿಂಬಕನ ಹಗೆ ಸಿಲುಕಿತೇ ತಾನಂಬಿದುದು ನೆರೆ ದೈವವೆನುತಿದಿರಾದನಮರಾರಿ
(೨) ಭೀಮನ ಗುಣಗಾನ – ಹೆಮ್ಮರನ ಹೆಗ್ಗೊಂಬ ಮುರಿದನು ಸವರಿದನು ಶಾಖೋಪಶಾಖೆಗಳ

ನಿಮ್ಮ ಟಿಪ್ಪಣಿ ಬರೆಯಿರಿ