ಪದ್ಯ ೨೩: ಧೃತರಾಷ್ಟ್ರನು ಯಾರನ್ನು ಬರೆಮಾಡಿಕೊಂಡನು?

ಪ್ರಾತಿಕಾಮಿಕ ಬಾ ಯುಧಿಷ್ಠಿರ
ಭೂತಲೇಶನ ಕರೆದು ತಾರೈ
ತಾತ ಕಳುಹಿದನೆಂಬುದಿಂದ್ರಪ್ರಸ್ಥದಲ್ಲಿರಲಿ
ಪ್ರೀತಿ ಪೂರ್ವಕವಲ್ಲದಿಲ್ಲಿ ವಿ
ಘಾತಿಯಿಲ್ಲೆಂದುಚಿತವಚನದೊ
ಳಾತಗಳನೊಡಗೊಂಡು ಬಾ ಹೋಗೆಂದನಂಧನೃಪ (ಸಭಾ ಪರ್ವ, ೧೭ ಸಂಧಿ, ೨೩ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ಪ್ರಾತಿಕಾಮಿಕನನ್ನು ಕರೆದು, ನೀನು ಇಂದ್ರಪ್ರಸ್ಥನಗರಕ್ಕೆ ಹೋಗು, ಅಲ್ಲಿರುವ ಯುಧಿಷ್ಥಿರನನ್ನು ಭೇಟಿ ಮಾಡಿ ಅವನನ್ನು ಕರೆದುಕೊಂಡು ಬಾ, ನಿಮ್ಮ ದೊಡ್ಡಪ್ಪನಾದ ನಾನು ನಿನ್ನನ್ನು ಕಳಿಸಿದ್ದೇನೆ, ಇದು ಪ್ರೀತಿಪೂರ್ವಕವಾದ ಆಹ್ವಾನ, ಇದರಲ್ಲೇನು ತೊಡಕಿಲ್ಲ ಎಂದು ಅವನಿಗೆ ತಿಳಿಸಿ ಅವನನ್ನು ನಿನ್ನೊಂದಿಗೆ ಕರೆದುಕೊಂಡು ಬಾ ಎಂದು ಧೃತರಾಷ್ಟ್ರನು ಹೇಳಿದನು.

ಅರ್ಥ:
ಬಾ: ಆಗಮಿಸು; ಭೂತಲೇಶ: ರಾಜ; ಭೂತಲ: ಭೂಮಿ; ಕರೆ: ಬರೆಮಾಡು; ತಾತ: ತಂದೆ; ಕಳುಹು: ಕಳಿಸು; ಪ್ರೀತಿ: ಒಲವು; ಪೂರ್ವ: ಹಿಂದಣ; ವಿಘಾತ: ನಾಶ, ಧ್ವಂಸ; ಉಚಿತ: ಸರಿಯಾದ; ವಚನ: ಮಾತು; ಒಡಗೊಂಡು: ಸೇರಿ; ಹೋಗು: ತೆರಳು; ಅಂಧ: ಕುರುಡು; ನೃಪ: ರಾಜ;

ಪದವಿಂಗಡಣೆ:
ಪ್ರಾತಿಕಾಮಿಕ +ಬಾ +ಯುಧಿಷ್ಠಿರ
ಭೂತಲೇಶನ +ಕರೆದು +ತಾರೈ
ತಾತ +ಕಳುಹಿದನ್+ಎಂಬುದ್+ಇಂದ್ರಪ್ರಸ್ಥದಲ್ಲಿರಲಿ
ಪ್ರೀತಿ +ಪೂರ್ವಕವ್+ಅಲ್ಲದಿಲ್ಲಿ +ವಿ
ಘಾತಿ+ಇಲ್ಲೆಂದ್+ಉಚಿತ+ವಚನದೊಳ್
ಆತಗಳನ್+ಒಡಗೊಂಡು +ಬಾ +ಹೋಗೆಂದನ್+ಅಂಧನೃಪ

ಅಚ್ಚರಿ:
(೧) ಅಂಧನೃಪ, ತಾತ – ಧೃತರಾಷ್ಟ್ರನನ್ನು ಕರೆದ ಬಗೆ
(೨) ನೃಪ, ಭೂತಲೇಶ – ಸಮನಾರ್ಥಕ ಪದ

ನಿಮ್ಮ ಟಿಪ್ಪಣಿ ಬರೆಯಿರಿ