ಹುದುವ ಸೈರಿಸಿ ಬಳಸಿದರು ದುರು
ಪದಿಯನೈವರು ಈ ಧರಿತ್ರಿಯ
ಹುದುವ ಸೈರಿಸಲಾರೆನವರೊಡನಿಂದು ಮೊದಲಾಗಿ
ಒದೆದುಕಳೆ ನಮ್ಮಿನಿಬರನು ನೇ
ಹದಲಿ ಸಲಹೈವರನು ನೀ ನಿಂ
ದೊದೆವುದೈವರ ನಮ್ಮ ಹಿಡಿ ಬೇರಿಲ್ಲ ಮತವೆಂದ (ಸಭಾ ಪರ್ವ, ೧೭ ಸಂಧಿ, ೧೮ ಪದ್ಯ)
ತಾತ್ಪರ್ಯ:
ಪಾಂಡವರು ದ್ರೌಪದಿಯನ್ನು ಒಂದಾಗಿ ಸರದಿಯಲ್ಲಿ ಆಳಿದರು, ಆದರೆ ಇಂದು ಹಾಗು ಮೊದಲಿನಿಂದಲೂ ನನಗೆ ಅವರೊಡನೆ ಒಂದುಗೂಡಿ ಭೂಮಿಯನ್ನು ಹಂಚಿಕೊಂಡು ಆಳುವುದನ್ನು ಸೈರಿಸಲಾರೆ. ನಮ್ಮನ್ನು ಹೊರಹಾಕಿ ಅವರೊಡನೆ ಸ್ನೇಹದಿಂದ ಬಾಳು, ಇಲ್ಲವೇ ಅವರನ್ನು ದೂರಮಾಡಿ ನಮ್ಮನ್ನು ಸ್ವೀಕರಿಸು, ಇದೇ ನನ್ನ ಅಭಿಪ್ರಾಯ, ಇದು ಬಿಟ್ಟು ಬೇರೆ ದಾರಿ ಇಲ್ಲ ಎಂದು ದುರ್ಯೋಧನನು ಹೇಳಿದನು.
ಅರ್ಥ:
ಹುದು: ಕೂಡುವಿಕೆ, ಸೇರುವಿಕೆ, ನಂಟು; ಸೈರಿಸು: ತಾಳು, ಸಹಿಸು; ಬಳಸು: ಉಪಯೋಗಿಸು; ದುರುಪದಿ: ದ್ರೌಪದಿ; ಧರಿತ್ರಿ: ಭೂಮಿ; ಮೊದಲು: ಮುಂಚೆ; ಒದೆ: ಆಚೆ ಹಾಕು, ತಳ್ಳು; ಇನಿಬರು: ಇಷ್ಟು ಜನ; ನೇಹ: ಗೆಳೆತನ, ಸ್ನೇಹ, ಪ್ರೀತಿ; ಸಲಹು: ರಕ್ಷಿಸು, ಕಾಪಾಡು; ಹಿಡಿ: ಗ್ರಹಿಸು; ಮತ: ವಿಚಾರ;
ಪದವಿಂಗಡಣೆ:
ಹುದುವ +ಸೈರಿಸಿ +ಬಳಸಿದರು +ದುರು
ಪದಿಯನ್+ಐವರು +ಈ +ಧರಿತ್ರಿಯ
ಹುದುವ +ಸೈರಿಸಲಾರೆನ್+ಅವರೊಡನ್+ಇಂದು+ ಮೊದಲಾಗಿ
ಒದೆದು+ಕಳೆ+ ನಮ್+ಇನಿಬರನು +ನೇ
ಹದಲಿ +ಸಲಹು+ಐವರನು +ನೀನ್+ಇಂದ್
ಒದೆವುದ್+ಐವರ+ ನಮ್ಮ +ಹಿಡಿ +ಬೇರಿಲ್ಲ+ ಮತವೆಂದ
ಅಚ್ಚರಿ:
(೧) ಹುದು, ಒದೆ – ೧,೩; ೪,೬ ಸಾಲಿನ ಮೊದಲ ಪದ