ಸರಿಹಸುಗೆಯಿಂದರ್ಧರಾಜ್ಯದ
ಸಿರಿಗೆ ಯೋಗ್ಯರು ಬಾಹು ಸತ್ವಕೆ
ಸುರರು ಸರಿಯಿಲ್ಲವರ ಪಾಡೇ ಮನುಜ ಜಂತುಗಳು
ಚರಿತವೆಂಬರೆ ಋಷಿಗಳಿಗೆ ಗೋ
ಚರಿಸದವರಾಚರಣೆ ನಿನಗೆಂ
ತರಿವಿನಾಶನ ಸಿದ್ಧಿಯೆಂದನು ಮಗಗೆ ಧೃತರಾಷ್ಟ್ರ (ಸಭಾ ಪರ್ವ, ೧೭ ಸಂಧಿ, ೧೩ ಪದ್ಯ)
ತಾತ್ಪರ್ಯ:
ಪಾಂಡವರ ಪಾಲಿಗೆ ನ್ಯಾಯಬದ್ಧವಾಗಿ ಅರ್ಧಭಾಗ ರಾಜ್ಯವು ಸಲ್ಲುತ್ತದೆ, ಆ ರಾಜ್ಯದ ಸಿರಿಗೆ ಅವರು ಯೋಗ್ಯರು, ಅವರ ಪರಾಕ್ರಮಕ್ಕೆ ದೇವತೆಗಳೂ ಅಂಜುವರು, ಇನ್ನು ಹುಲು ಮಾನವರು ಅವರೆದುರು ನಿಲ್ಲಲು ಸಾಧ್ಯವೇ, ಅವರ ನಡವಳಿಕೆಯು ಋಷಿ ಮುನಿಗಳನ್ನೂ ಮೀರಿಸುತ್ತದೆ. ಹೀಗಿರುವಾಗ ನಿನ್ನ ಶತ್ರುಗಳಾದ ಪಾಂಡವರನ್ನು ನೀನು ಹೇಗೆ ಗೆಲ್ಲುವೆ ಹೇಳು ಎಂದು ಧೃತರಾಷ್ಟ್ರನು ದುರ್ಯೋಧನನನ್ನು ಪ್ರಶ್ನಿಸಿದನು.
ಅರ್ಥ:
ಹಸುಗೆ: ವಿಭಾಗ, ಹಂಚಿಕೆ; ಅರ್ಧ: ವಸ್ತುವಿನ ಎರಡು ಸಮಪಾಲುಗಳಲ್ಲಿ ಒಂದು; ರಾಜ್ಯ: ರಾಷ್ಟ್ರ; ಸಿರಿ: ಐಶ್ವರ್ಯ; ಯೋಗ್ಯ: ಅರ್ಹತೆ; ಬಾಹು: ಭುಜ, ಪರಾಕ್ರಮ; ಸತ್ವ: ಸಾರ; ಸುರ: ದೇವತೆ; ಸರಿಯಿಲ್ಲ: ಸಮಾನರಲ್ಲ; ಪಾಡು: ಸ್ಥಿತಿ; ಮನುಜ: ನರ, ಮನುಷ್ಯ; ಜಂತು: ಜೀವಿ; ಚರಿತ: ನಡವಳಿಕೆ; ಋಷಿ: ಮುನಿ; ಗೋಚರಿಸು: ನೋಡು, ತೋರು; ಆಚರಣೆ: ಅನುಸರಿಸುವುದು; ಅರಿ: ವೈರಿ; ವಿನಾಶ: ಹಾಳು; ಸಿದ್ಧ: ತಯಾರಾದ; ಮಗ: ಸುತ;
ಪದವಿಂಗಡಣೆ:
ಸರಿಹಸುಗೆಯಿಂದ್+ಅರ್ಧ+ರಾಜ್ಯದ
ಸಿರಿಗೆ +ಯೋಗ್ಯರು +ಬಾಹು +ಸತ್ವಕೆ
ಸುರರು +ಸರಿಯಿಲ್ಲ್+ಅವರ+ ಪಾಡೇ +ಮನುಜ+ ಜಂತುಗಳು
ಚರಿತವೆಂಬರೆ +ಋಷಿಗಳಿಗೆ +ಗೋ
ಚರಿಸದ್+ಅವರ್+ಆಚರಣೆ+ ನಿನಗೆಂತ್
ಅರಿ+ವಿನಾಶನ+ ಸಿದ್ಧಿಯೆಂದನು+ ಮಗಗೆ+ ಧೃತರಾಷ್ಟ್ರ
ಅಚ್ಚರಿ:
(೧) ಪಾಂಡವರ ಪರಾಕ್ರಮವನ್ನು ಹೇಳುವ ಪರಿ – ಬಾಹು ಸತ್ವಕೆ ಸುರರು ಸರಿಯಿಲ್ಲವರ ಪಾಡೇ ಮನುಜ ಜಂತುಗಳು