ಎತ್ತಿತ್ತೀ ಪಾಳೆಯವು ನಿಜಪುರ
ದತ್ತ ತಿರುಗಿತು ಜನಜನಿತ ರಾ
ಜೋತ್ತಮನ ಕಡೆಯಾಯ್ತು ಸತ್ಯ ಕ್ಷಮೆ ಪರಾಕ್ರಮಕೆ
ಇತ್ತಲಡುಪಾಯ್ಬೇಗೆ ಬಿಸುಗುದಿ
ಕಿತ್ತಡವು ಕಾರ್ಪಣ್ಯ ಕಪಟ ಖ
ಳೋತ್ತಮರ ಹೃದಯದಲಿ ಮೂಡಿತು ನೃಪತಿ ಕೇಳೆಂದ (ಸಭಾ ಪರ್ವ, ೧೭ ಸಂಧಿ, ೨ ಪದ್ಯ)
ತಾತ್ಪರ್ಯ:
ಜನಮೇಜಯ ರಾಜ ಕೇಳು, ಇತ್ತ ಪಾಂಡವರು ತಮ್ಮ ಊರು ಇಂದ್ರಪ್ರಸ್ಥಕ್ಕೆ ಮರಳಿ, ಸತ್ಯ, ಕ್ಷಮೆ, ಪರಾಕ್ರಮಗಳಿಂದ ರಾಜ್ಯವನ್ನಾಳಿ ಲೋಕಪ್ರಸಿದ್ಧರಾದರು, ಕೌರವರ ಮನಸ್ಸಿನಲ್ಲಿ ಬೇಗೆ, ಕುದಿತ, ದೈನ್ಯ, ಮೋಸಗಳು ಮೂಡಿ ಅವರು ವ್ಯಗ್ರರಾದರು.
ಅರ್ಥ:
ಎತ್ತು: ಮೇಲೇಳು; ಪಾಳೆ: ಗುಂಪು; ನಿಜ: ತಮ್ಮದಾದ, ದಿಟ; ಪುರ: ಊರು; ತಿರುಗು: ಹೊರಳು; ಜನಜನಿತ: ಪ್ರಸಿದ್ಧವಾದ ವಿಷಯ; ರಾಜ: ನೃಪ; ಉತ್ತಮ: ಶ್ರೇಷ್ಠ; ಕಡೆ: ಪಕ್ಕ; ಸತ್ಯ: ನಿಜ; ಕ್ಷಮೆ: ಇತರರ ತಪ್ಪನ್ನು ಮನ್ನಿಸುವ ಗುಣ, ಸೈರಣೆ, ತಾಳ್ಮೆ; ಪರಾಕ್ರಮ: ಶೌರ್ಯ; ಬೇಗೆ: ಉರಿ, ಜ್ವಾಲೆ, ತಳಮಳ; ಬಿಸು: ಹೊಂದಿಸು; ಕುದಿ: ಶಾಖದಿಂದ ಉಕ್ಕು; ಕಾರ್ಪಣ್ಯ: ಬಡತನ, ದೈನ್ಯ; ಕಪಟ: ಮೋಸ; ಕಿತ್ತಡ: ಮೋಸ; ಖಳ: ದುಷ್ಟ; ಹೃದಯ: ಎದೆ, ಮನಸ್ಸು; ಮೂಡು: ಕಾಣಿಸಿಕೋ; ನೃಪ: ರಾಜ; ಕೇಳು: ಆಲಿಸು;
ಪದವಿಂಗಡಣೆ:
ಎತ್ತಿತ್+ಈ+ ಪಾಳೆಯವು +ನಿಜಪುರ
ದತ್ತ +ತಿರುಗಿತು +ಜನಜನಿತ+ ರಾ
ಜೋತ್ತಮನ +ಕಡೆಯಾಯ್ತು +ಸತ್ಯ+ ಕ್ಷಮೆ+ ಪರಾಕ್ರಮಕೆ
ಇತ್ತಲ್+ಅಡುಪಾಯ್+ಬೇಗೆ +ಬಿಸು+ಕುದಿ
ಕಿತ್ತಡವು+ ಕಾರ್ಪಣ್ಯ+ ಕಪಟ+ ಖ
ಳೋತ್ತಮರ+ ಹೃದಯದಲಿ +ಮೂಡಿತು +ನೃಪತಿ +ಕೇಳೆಂದ
ಅಚ್ಚರಿ:
(೧) ರಾಜೋತ್ತಮ, ಖಳೋತ್ತಮ – ಪದಗಳ ಬಳಕೆ