ಪದ್ಯ ೬೬: ಪಾಂಡವರು ಹೇಗೆ ಹಸ್ತಿನಾಪುರದಿಂದ ಹಿಂದಿರುಗಿದರು?

ಸಾಕು ನೇಮವ ಕೊಡಿಯೆನುತ ಕುಂ
ತೀಕುಮಾರರು ಬೀಳುಕೊಂಡರು
ನೂಕಿ ಹೊಕ್ಕುದು ದಾರವಟ್ಟದಲಿವರ ಪರಿವಾರ
ತೋಕಿದವು ಸೀಗುರಿಗಳೆಡ ಬಲ
ದಾಕೆಯಲಿ ಪಾಂಡವ ಕುಮಾರಾ
ನೀಕ ಬೆರಸಿತು ಗಜತುರಗ ರಥ ಪಾಯದಳ ಸಹಿತ (ಸಭಾ ಪರ್ವ, ೧೬ ಸಂಧಿ, ೬೬ ಪದ್ಯ)

ತಾತ್ಪರ್ಯ:
ಗಾಂಧಾರಿಯ ನುಡಿಗಳನ್ನು ಕೇಳಿ, ನಮಗೆ ಹೊರಡಲು ಅಪ್ಪಣೆ ನೀಡಿ ಎಂದು ಪಾಂದವರು ಧೃತರಾಷ್ಟ್ರ ಗಾಂಧಾರಿಯಿಂದ ಬೀಳ್ಕೊಂಡರು. ಅರಮನೆಯ ಮುಖ್ಯದ್ವಾರದಿಂದ ಹೊರಹೊರಟರು. ಅವರ ಎಡಬಲದಲ್ಲಿ ಚಾಮರಗಳು ಬೀಸುತ್ತಿದ್ದವು. ಅವರ ಎಡಬಲದಲ್ಲಿ ಪಾಂಡವರ ಕುಮಾರರೂ ಸೈನ್ಯವೂ ಬರುತ್ತಿದ್ದವು.

ಅರ್ಥ:
ಸಾಕು: ನಿಲ್ಲು; ನೇಮ: ನಿಯಮ; ಕೊಡಿ: ನೀಡಿ; ಕುಮಾರ:ಪುತ್ರ; ಬೀಳುಕೊಂಡು: ತೆರಳು; ನೂಕು: ತಳ್ಳು; ಹೊಕ್ಕು: ಸೇರು; ದಾರವಟ್ಟ: ಹೆಬ್ಬಾಗಿಲು; ಪರಿವಾರ: ಸುತ್ತಲಿನವರು, ಪರಿಜನ; ತೋಕು: ಪ್ರಯೋಗಿಸು; ಸೀಗುರಿ: ಚಾಮರ, ಚಮರಿ; ಎಡಬಲ: ಸುತ್ತಲು; ಬೆರಸು: ಸಹಿತ, ಒಡನೆ; ಗಜ: ಆನೆ; ತುರಗ: ಕುದುರೆ; ರಥ: ಬಂಡಿ; ಪಾಯದಳ: ಸೈನಿಕ; ಸಹಿತ: ಜೊತೆ;ಆನೀಕ: ಗುಂಪು, ಸೈನ್ಯ;

ಪದವಿಂಗಡಣೆ:
ಸಾಕು+ ನೇಮವ +ಕೊಡಿ+ಎನುತ +ಕುಂ
ತೀ+ಕುಮಾರರು +ಬೀಳುಕೊಂಡರು
ನೂಕಿ+ ಹೊಕ್ಕುದು +ದಾರವಟ್ಟದಲ್+ಇವರ +ಪರಿವಾರ
ತೋಕಿದವು +ಸೀಗುರಿಗಳ್+ಎಡ ಬಲದ್
ಆಕೆಯಲಿ +ಪಾಂಡವ +ಕುಮಾರ
ಅನೀಕ +ಬೆರಸಿತು +ಗಜ+ತುರಗ +ರಥ +ಪಾಯದಳ +ಸಹಿತ

ಅಚ್ಚರಿ:
(೧) ಕುಂತೀ ಕುಮಾರ, ಪಾಂಡವ ಕುಮಾರ – ಪದಗಳ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ