ಸಾಕು ನೇಮವ ಕೊಡಿಯೆನುತ ಕುಂ
ತೀಕುಮಾರರು ಬೀಳುಕೊಂಡರು
ನೂಕಿ ಹೊಕ್ಕುದು ದಾರವಟ್ಟದಲಿವರ ಪರಿವಾರ
ತೋಕಿದವು ಸೀಗುರಿಗಳೆಡ ಬಲ
ದಾಕೆಯಲಿ ಪಾಂಡವ ಕುಮಾರಾ
ನೀಕ ಬೆರಸಿತು ಗಜತುರಗ ರಥ ಪಾಯದಳ ಸಹಿತ (ಸಭಾ ಪರ್ವ, ೧೬ ಸಂಧಿ, ೬೬ ಪದ್ಯ)
ತಾತ್ಪರ್ಯ:
ಗಾಂಧಾರಿಯ ನುಡಿಗಳನ್ನು ಕೇಳಿ, ನಮಗೆ ಹೊರಡಲು ಅಪ್ಪಣೆ ನೀಡಿ ಎಂದು ಪಾಂದವರು ಧೃತರಾಷ್ಟ್ರ ಗಾಂಧಾರಿಯಿಂದ ಬೀಳ್ಕೊಂಡರು. ಅರಮನೆಯ ಮುಖ್ಯದ್ವಾರದಿಂದ ಹೊರಹೊರಟರು. ಅವರ ಎಡಬಲದಲ್ಲಿ ಚಾಮರಗಳು ಬೀಸುತ್ತಿದ್ದವು. ಅವರ ಎಡಬಲದಲ್ಲಿ ಪಾಂಡವರ ಕುಮಾರರೂ ಸೈನ್ಯವೂ ಬರುತ್ತಿದ್ದವು.
ಅರ್ಥ:
ಸಾಕು: ನಿಲ್ಲು; ನೇಮ: ನಿಯಮ; ಕೊಡಿ: ನೀಡಿ; ಕುಮಾರ:ಪುತ್ರ; ಬೀಳುಕೊಂಡು: ತೆರಳು; ನೂಕು: ತಳ್ಳು; ಹೊಕ್ಕು: ಸೇರು; ದಾರವಟ್ಟ: ಹೆಬ್ಬಾಗಿಲು; ಪರಿವಾರ: ಸುತ್ತಲಿನವರು, ಪರಿಜನ; ತೋಕು: ಪ್ರಯೋಗಿಸು; ಸೀಗುರಿ: ಚಾಮರ, ಚಮರಿ; ಎಡಬಲ: ಸುತ್ತಲು; ಬೆರಸು: ಸಹಿತ, ಒಡನೆ; ಗಜ: ಆನೆ; ತುರಗ: ಕುದುರೆ; ರಥ: ಬಂಡಿ; ಪಾಯದಳ: ಸೈನಿಕ; ಸಹಿತ: ಜೊತೆ;ಆನೀಕ: ಗುಂಪು, ಸೈನ್ಯ;
ಪದವಿಂಗಡಣೆ:
ಸಾಕು+ ನೇಮವ +ಕೊಡಿ+ಎನುತ +ಕುಂ
ತೀ+ಕುಮಾರರು +ಬೀಳುಕೊಂಡರು
ನೂಕಿ+ ಹೊಕ್ಕುದು +ದಾರವಟ್ಟದಲ್+ಇವರ +ಪರಿವಾರ
ತೋಕಿದವು +ಸೀಗುರಿಗಳ್+ಎಡ ಬಲದ್
ಆಕೆಯಲಿ +ಪಾಂಡವ +ಕುಮಾರ
ಅನೀಕ +ಬೆರಸಿತು +ಗಜ+ತುರಗ +ರಥ +ಪಾಯದಳ +ಸಹಿತ
ಅಚ್ಚರಿ:
(೧) ಕುಂತೀ ಕುಮಾರ, ಪಾಂಡವ ಕುಮಾರ – ಪದಗಳ ಬಳಕೆ