ಪೂತುರೇ ಪಾಂಚಾಲಿ ಭುವನ
ಖ್ಯಾತೆಯಾದೆಲೆ ಜಾಗು ನಿನ್ನಯ
ಬೈತಲೆಯ ಮಣಿ ಮಾರುವೋದುದ ಮತ್ತೆ ಬಿಡಿಸಿದೆಲೆ
ಬೀತ ಮರ ಫಲವಾಯ್ತಲಾ ನಿ
ನ್ನಾತಗಳ ಬಹುಖೇದ ಜಲಧಿಗೆ
ಸೇತುವಾದೆಲೆ ನೀನೆನುತ ತಲೆದೂಗಿದನು ಕರ್ಣ (ಸಭಾ ಪರ್ವ, ೧೬ ಸಂಧಿ, ೫೪ ಪದ್ಯ)
ತಾತ್ಪರ್ಯ:
ಕರ್ಣನು ದ್ರೌಪದಿಗೆ ತನ್ನ ಹೊಗಳಿಕೆಯನ್ನು ಮುಂದುವರೆಸುತ್ತಾ, ಭಲೇ ದ್ರೌಪದಿ, ಲೋಕ ವಿಖ್ಯಾತೆಯಾದೆ, ನಿನ್ನ ಬೈತಲೆಯ ಸೌಭಾಗ್ಯದ ಮಣಿ ಮಾರಾಟವಾಗಿ ಹೋಗಿದುದನ್ನು ಮತ್ತೆ ಪಡೆದೆ. ಒಣಗಿದ ಮರ ಮತ್ತೆ ಚಿಗುರಿ ಫಲಕೊಡುವಂತೆ ಮಾದಿದೆ ನಿನ್ನ ಪತಿಗಳ ದುಃಖಸಮುದ್ರಕ್ಕೆ ಕಟ್ಟೆಯಾದೆ ಎಂದು ಹೊಗಳಿ ತಲೆದೂಗಿದನು.
ಅರ್ಥ:
ಪೂತು: ಭಲೆ; ಭುವನ: ಭೂಮಿ; ಖ್ಯಾತ: ಪ್ರಸಿದ್ಧ; ಜಾಗು: ಹೊಗಳಿಕೆ ಮಾತು; ಬೈತಲೆ: ಬಯ್ತಲೆ, ಬಾಚಿದ ತಲೆಯನ್ನು ವಿಭಾಗಿಸುವ ಗೆರೆಯಂಥ ಭಾಗ; ಮಣಿ: ರತ್ನ; ಮಾರು: ವಿಕ್ರಯಿಸು; ಮತ್ತೆ: ಪುನಃ; ಬಿಡಿಸು: ಹೋಗಲಾಡಿಸು; ಬೀತ: ಕಳೆದ; ಮರ: ತರು; ಫಲ: ಹಣ್ಣು; ಬಹು: ಬಹಳ; ಖೇದ: ದುಃಖ; ಜಲಧಿ; ಸಾಗರ; ಸೇತು: ಸೇತುವೆ, ಸಂಕ; ತಲೆ: ಶಿರ; ತೂಗು: ಅಲ್ಲಾಡಿಸು;
ಪದವಿಂಗಡಣೆ:
ಪೂತುರೇ +ಪಾಂಚಾಲಿ +ಭುವನ
ಖ್ಯಾತೆಯಾದೆಲೆ+ ಜಾಗು +ನಿನ್ನಯ
ಬೈತಲೆಯ +ಮಣಿ +ಮಾರುವೋದುದ +ಮತ್ತೆ +ಬಿಡಿಸಿದೆಲೆ
ಬೀತ+ ಮರ+ ಫಲವಾಯ್ತಲಾ+ ನಿನ್
ಆತಗಳ +ಬಹುಖೇದ+ ಜಲಧಿಗೆ
ಸೇತುವಾದೆಲೆ+ ನೀನೆನುತ+ ತಲೆದೂಗಿದನು+ ಕರ್ಣ
ಅಚ್ಚರಿ:
(೧) ಉಪಮಾನದ ಪ್ರಯೋಗ – ಬೀತ ಮರ ಫಲವಾಯ್ತಲಾ
(೨) ಪೂತುರೆ, ಜಾಗು – ಹೊಗಳಿಕೆಯ ಮಾತು