ಕಡಲ ತೆರೆಗಳ ತರುಬಿ ತುಡುಕುವ
ವಡಬನಂತಿರೆ ಮೇಘಪಟಲವ
ನೊಡೆದು ಸೂಸುವ ಸಿಡಿಲಿನಂತಿರೆ ಸಭೆಯೊಳಡಹಾಯ್ದು
ಕುಡಿ ಕುಠಾರನ ರಕುತವನು ತಡೆ
ಗಡಿ ಸುಯೋಧನನೂರುಗಳ ನಿ
ಮ್ಮಡಿಸಿ ಮುನಿಯಲಿ ಧರ್ಮಸುತನೆಂದೆದ್ದನಾ ಭೀಮ (ಸಭಾ ಪರ್ವ, ೧೬ ಸಂಧಿ, ೩೧ ಪದ್ಯ)
ತಾತ್ಪರ್ಯ:
ದುರ್ಯೋಧನನು ತನ್ನ ತೊಡೆಯನ್ನು ದ್ರೌಪದಿಗೆ ತೋರಲು ಭೀಮನು ಅತೀವ ಕೋಪಗೊಂಡನು. ಸಮುದ್ರದ ತೆರೆಗಳನ್ನು ತಡೆದು ಮೇಲಕ್ಕೆ ಬರುವ ವಡಬಾಗ್ನಿಯಂತೆ, ಮೋಡಗಳ ತೆರೆಯನ್ನು ಸೀಳಿ ಬಡಿಯುವ ಸಿಡಿಲಿನಂತೆ, ಭೀಮನು ಸಭೆಯ ಮಧ್ಯದಿಂದೆದ್ದು ದ್ರೌಪದಿಯ ಕಡೆಗೆ ನುಗ್ಗಿ, ಈ ಕ್ರೂರಿಯ ರಕ್ತವನ್ನು ಕುಡಿದು, ದುರ್ಯೋಧನನ ತೊಡೆಗಳನ್ನು ಬಡಿದು ಕಡಿಯುತ್ತೇನೆ, ಧರ್ಮರಾಯನು ಎರಡು ಪಟ್ಟು ಸಿಟ್ಟಾಗಲಿ ಎಂದು ಭೀಮನು ಗರ್ಜಿಸಿದನು.
ಅರ್ಥ:
ಕಡಲು: ಸಮುದ್ರ; ತೆರೆ: ಅಲೆ; ತರುಬು: ತಡೆ, ನಿಲ್ಲಿಸು; ತುಡುಕು: ಹೋರಾಡು, ಸೆಣಸು; ವಡಬ: ಸಮುದ್ರದಲ್ಲಿರುವ ಬೆಂಕಿ, ಬಡ ಬಾಗ್ನಿ; ಮೇಘ: ಮೋಡ; ಪಟಲ: ಸಮೂಹ; ಒಡೆ: ಸೀಳು; ಸೂಸು: ಹೊರಹೊಮ್ಮು; ಸಿಡಿಲು: ಅಶನಿ, ಆರ್ಭಟಿಸು; ಸಭೆ: ಓಲಗ; ಹಾಯ್ದು: ಮೇಲೆಬೀಳು; ಕುಡಿ: ಪಾನಮಾಡು; ಕುಠಾರ: ಕ್ರೂರಿ; ರಕುತ: ನೆತ್ತರು; ತಡೆ: ಅಡ್ಡಿ, ವಿಘ್ನ; ಊರು: ತೊಡೆ; ಇಮ್ಮಡಿಸು: ಎರಡು ಪಟ್ಟು; ಮುನಿ: ಕೋಪಗೊಳ್ಳು; ಸುತ: ಮಗ; ಎದ್ದು: ಮೇಲೇಳು;
ಪದವಿಂಗಡಣೆ:
ಕಡಲ+ ತೆರೆಗಳ+ ತರುಬಿ+ ತುಡುಕುವ
ವಡಬನಂತಿರೆ+ ಮೇಘ+ಪಟಲವನ್
ಒಡೆದು +ಸೂಸುವ +ಸಿಡಿಲಿನಂತಿರೆ+ ಸಭೆಯೊಳಡ+ಹಾಯ್ದು
ಕುಡಿ+ ಕುಠಾರನ+ ರಕುತವನು +ತಡೆ
ಗಡಿ +ಸುಯೋಧನನ್+ಊರುಗಳನ್+
ಇಮ್ಮಡಿಸಿ+ ಮುನಿಯಲಿ +ಧರ್ಮಸುತನ್+ಎಂದ್+ಎದ್ದನಾ +ಭೀಮ
ಅಚ್ಚರಿ:
(೧) ಉಪಮಾನದ ಪ್ರಯೋಗ – ಕಡಲ ತೆರೆಗಳ ತರುಬಿ ತುಡುಕುವ ವಡಬನಂತಿರೆ ಮೇಘಪಟಲವ
ನೊಡೆದು ಸೂಸುವ ಸಿಡಿಲಿನಂತಿರೆ
(೨) ಭೀಮನ ಪ್ರತಿಜ್ಞೆ – ಕುಡಿ ಕುಠಾರನ ರಕುತವನು ತಡೆಗಡಿ ಸುಯೋಧನನೂರುಗಳ