ಅಂಧನೊಬ್ಬನೆ ಮಾವ ನೀವೇ
ನಂಧರಾದಿರೆ ಪಾಂಡು ಕರುಣಾ
ಸಿಂಧು ನೀ ಸೈರಿಸುವುದೇ ತನ್ನೀ ವಿಪತ್ತಿನಲಿ
ಅಂಧಕಾಸುರಮಥನ ನೀನೇ
ಬಂಧಿಸಿದೆಲಾ ಪೂರ್ವವರ ಸಂ
ಬಂಧವನು ನೀ ಸೆರಗ ಬಿಡಿಸೆಂದೊರಲಿದಳು ತರಳೆ (ಸಭಾ ಪರ್ವ, ೧೬ ಸಂಧಿ, ೨೬ ಪದ್ಯ)
ತಾತ್ಪರ್ಯ:
ಹೇ ಮಾವ ಪಾಂಡು ಮಹಾರಾಜರೇ, ಮಾವ ಧೃತರಾಷ್ಟ್ರ ಕುರುಡನಾದರೇ, ನೀವು ಕುರುಡರಾದಿರೇ? ನನಗೆ ಬಂದಿರುವ ಈ ವಿಪತ್ತನ್ನು ನೋಡಿ ನೀವು ಸುಮ್ಮನಿರುವಿರೇ? ಹೇ ಪರಮೇಶ್ವರ, ಅಂಧಕಾಸುರಮಥನ ಮಾಡಿ ಹಿಂದೆ ಧರೆಯನ್ನು ರಕ್ಷಿಸಿದವ, ಪಾಂಡವರ ನನ್ನ ಸಂಬಂಧವನ್ನು ಹಿಂದೆ ಏರ್ಪಡಿಸಿದವನು ನೀನೆ ಅಲ್ಲವೇ ನೀನಾದರೂ ನನ್ನ ಸೆರಗನ್ನು ಬಿಡಿಸು ಎಂದು ಗೋಳಿಟ್ಟಳು ದ್ರೌಪದಿ.
ಅರ್ಥ:
ಅಂಧ: ಕುರುಡ; ಕರುಣಾಸಿಂಧು: ದಯಾ ಸಾಗರ; ಸೈರಿಸು: ತಾಳು, ಸಹಿಸು; ವಿಪತ್ತು: ಕಷ್ಟ; ಮಥನ: ನಾಶಮಾಡಿದ; ಬಂಧಿಸು: ಕೂಡಿಸು; ಪೂರ್ವ: ಹಿಂದೆ; ವರ: ಶ್ರೇಷ್ಠ; ಸಂಬಂಧ: ಸಹವಾಸ, ಹೊಂದಾಣಿಕೆ; ಸೆರಗು: ವಸ್ತ್ರ, ಸೀರೆಯ ಭಾಗ; ಬಿಡಿಸು: ಕಳಚು, ಸಡಿಲಿಸು; ಒರಲು: ಗೋಳಿಡು; ತರಳೆ: ಯುವತಿ;
ಪದವಿಂಗಡಣೆ:
ಅಂಧನ್+ಒಬ್ಬನೆ +ಮಾವ +ನೀವೇನ್
ಅಂಧರಾದಿರೆ+ ಪಾಂಡು +ಕರುಣಾ
ಸಿಂಧು +ನೀ +ಸೈರಿಸುವುದೇ+ ತನ್ನೀ+ ವಿಪತ್ತಿನಲಿ
ಅಂಧಕಾಸುರಮಥನ +ನೀನೇ
ಬಂಧಿಸಿದೆಲಾ +ಪೂರ್ವ+ವರ+ ಸಂ
ಬಂಧವನು +ನೀ +ಸೆರಗ +ಬಿಡಿಸೆಂದ್+ಒರಲಿದಳು +ತರಳೆ
ಅಚ್ಚರಿ:
(೧) ಶಿವನನ್ನು ಅಂಧಕಾಸುರಮಥನ ಎಂದು ಕರೆದಿರುವುದು