ನೀತಿ ಮರುಳನು ವಿದುರನೀತನ
ಮಾತಿನಲಿ ಫಲವೇನು ತೊತ್ತಿರೊ
ಳೀ ತಳೋದರಿ ಬೆರೆಸಿ ಬದುಕಲಿ ಕರ್ಣ ಕಳುಹಿವಳ
ಈ ತತುಕ್ಷಣ ದೃಷ್ಟಿಬಂಧನ
ವೇತರಲಿ ಮಾಡಿದಳೊ ಲಜ್ಜಾ
ಜಾತವುಳಿದುದು ಬೆಳೆದ ಸೀರೆಯ ಕಟ್ಟಿ ಹೊರಿಸೆಂದ (ಸಭಾ ಪರ್ವ, ೧೬ ಸಂಧಿ, ೮ ಪದ್ಯ)
ತಾತ್ಪರ್ಯ:
ದುರ್ಯೋಧನನು ತನ್ನ ಮಾತನ್ನು ಮುಂದುವರಿಸುತ್ತಾ, ಕರ್ಣಾ, ವಿದುರನು ನೀತಿಯ ಬೆನ್ನತ್ತಿ ಹುಚ್ಚಹಿಡಿದವನು, ಇವನ ಮಾತಿನಿಂದ ಏನು ಪ್ರಯೋಜನವಿಲ್ಲ. ದ್ರೌಪದಿಯು ದಾಸಿಯರೊಡನೆ ಸೇರಲಿ ಇವಳನ್ನು ಕಳಿಸು. ಯಾವ ಕಣ್ಣುಕಟ್ಟು ವಿದ್ಯೆಯಿಂದಲೋ ತನ್ನ ಮಾನವನ್ನು ರಕ್ಷಿಸಿಕೊಂಡಳು. ಈ ಸೀರೆಗಳನ್ನೆಲ್ಲಾ ಕಟ್ಟಿಸಿ ಇವಳ ಕೈಯಲ್ಲಿ ಹೊರಿಸು ಎಂದು ಅಪ್ಪಣೆ ನೀಡಿದನು.
ಅರ್ಥ:
ನೀತಿ: ಮಾರ್ಗದರ್ಶನ; ಮರುಳ: ತಿಳಿಗೇಡಿ, ದಡ್ಡ; ಮಾತು: ವಾಣಿ, ನುಡಿ; ಫಲ: ಪ್ರಯೋಜನ; ತೊತ್ತು: ದಾಸ; ತಳೋದರಿ: ಹೆಂಡತಿ; ಬೆರಸಿ:ಕೂಡಿಸು, ಜೊತೆ; ಬದುಕು: ಜೀವನ; ಕಳುಹು: ತೆರಳು, ಕಳಿಸು; ತತುಕ್ಷಣ: ಕೂಡಲೆ; ದೃಷ್ಟಿ: ನೋಟ; ಬಂಧನ: ಕಟ್ಟು; ಏತರಲಿ: ರೀತಿ; ಲಜ್ಜ: ನಾಚಿಕೆ; ಜಾತ: ಹುಟ್ಟಿದ; ಉಳಿ: ಮಿಕ್ಕ, ನಿಲ್ಲು; ಬೆಳೆದ: ಹೆಚ್ಚು; ಕಟ್ಟು: ಕಂತೆ, ಬಂಧಿಸು; ಹೊರಿಸು: ಹೇರು; ಸೀರೆ: ವಸ್ತ್ರ;
ಪದವಿಂಗಡಣೆ:
ನೀತಿ+ ಮರುಳನು+ ವಿದುರನ್+ಈತನ
ಮಾತಿನಲಿ +ಫಲವೇನು +ತೊತ್ತಿರೊಳ್
ಈ+ ತಳೋದರಿ+ ಬೆರೆಸಿ+ ಬದುಕಲಿ +ಕರ್ಣ +ಕಳುಹಿವಳ
ಈ +ತತುಕ್ಷಣ +ದೃಷ್ಟಿ+ಬಂಧನವ್
ಏತರಲಿ+ ಮಾಡಿದಳೊ+ ಲಜ್ಜಾ
ಜಾತ+ಉಳಿದುದು +ಬೆಳೆದ +ಸೀರೆಯ +ಕಟ್ಟಿ +ಹೊರಿಸೆಂದ
ಅಚ್ಚರಿ:
(೧) ದುರ್ಯೋಧನನ ನೀಚ ನುಡಿ – ತೊತ್ತಿರೊಳೀ ತಳೋದರಿ ಬೆರೆಸಿ ಬದುಕಲಿ
(೨) ವಿದುರನನ್ನು ಹಂಗಿಸುವ ಪರಿ – ನೀತಿ ಮರುಳನು