ಕೇಳಿದನು ಮುರವೈರಿ ತನ್ನಯ
ಮೇಳದೈವರ ಸತಿಯ ಹುಯ್ಯಲ
ನಾಳಿನೊಂದಪಮಾನವಾಳ್ದಂಗೆಂಬ ನುಡಿಯಿಂದ
ಕೋಳುವೋದವೆ ಪಾಂಡುಪುತ್ರರ
ಬಾಳುವೆಗಳಕಟೆನುತ ಲಕ್ಷ್ಮೀ
ಲೋಲ ಚಿಂತಿಸಿ ನುಡಿದ ರುಕ್ಮಿಣಿದೇವಿಗೀ ಹದನ (ಸಭಾ ಪರ್ವ, ೧೫ ಸಂಧಿ, ೧೩೯ ಪದ್ಯ)
ತಾತ್ಪರ್ಯ:
ದ್ರೌಪದಿಯು ತನ್ನೆರಡು ಕೈಗಳನ್ನು ಎತ್ತಿ ಕೃಷ್ಣನಲ್ಲಿ ಮೊರೆಯಿಟ್ಟುದನ್ನು ಕೇಳಿದನು. ಆಳಿಗೆ ಆದ ಅಪಮಾನ ಒಡೆಯನಿಗೇ ಆದದ್ದು ಎಂಬ ನ್ಯಾಯವನ್ನು ಅವನು ಮನಗೊಂಡನು. ಅಯ್ಯೋ ಪಾಂಡುಪುತ್ರರು ದಾಸರಾಗಿ ಬಾಳುವಂತಾಯಿತೇ ಎಂದು ನೊಂದು ಚಿಂತಿಸಿ ರುಕ್ಮಿಣಿದೇವಿಗೆ ಹೀಗೆ ಹೇಳಿದನು.
ಅರ್ಥ:
ಕೇಳು: ಆಲಿಸು; ಮೇಳ: ಸಂಬಂಧ, ನಂಟು, ಗುಂಪು; ಸತಿ: ಹೆಂಡತಿ; ಹುಯ್ಯಲು: ಗೋಳು, ಕೂಗು; ಆಳು: ದಾಸ; ಅಪಮಾನ: ಅಗೌರವ; ಆಳ್ದ: ಒಡೆಯ; ನುಡಿ: ಮಾತು; ಕೋಳು: ಹೊಡೆತ, ಪೆಟ್ಟು; ಬಾಳುವೆ: ಜೀವನ; ಅಕಟ: ಅಯ್ಯೋ; ಚಿಂತಿಸು: ಯೋಚಿಸು; ನುಡಿ: ಮಾತಾಡು; ಹದ: ಸ್ಥಿತಿ, ರೀತಿ; ಲೋಲ: ಪ್ರೀತಿ;
ಪದವಿಂಗಡಣೆ:
ಕೇಳಿದನು +ಮುರವೈರಿ +ತನ್ನಯ
ಮೇಳದ್+ಐವರ +ಸತಿಯ +ಹುಯ್ಯಲನ್
ಆಳಿನ್+ಒಂದ್+ಅಪಮಾನವ್+ಆಳ್ದಂಗೆಂಬ+ ನುಡಿಯಿಂದ
ಕೋಳುವೋದವೆ+ ಪಾಂಡುಪುತ್ರರ
ಬಾಳುವೆಗಳ್+ಅಕಟೆನುತ +ಲಕ್ಷ್ಮೀ
ಲೋಲ +ಚಿಂತಿಸಿ +ನುಡಿದ +ರುಕ್ಮಿಣಿದೇವಿಗ್+ಈ+ ಹದನ
ಅಚ್ಚರಿ:
(೧) ಹಿತನುಡಿಯ ಬಳಕೆ – ಆಳಿನೊಂದಪಮಾನವಾಳ್ದಂಗೆಂಬ ನುಡಿಯಿಂದ