ಪದ್ಯ ೧೨೯: ದ್ರೌಪದಿಯು ಕೃಷ್ಣನನ್ನು ಹೇಗೆ ಪ್ರಾರ್ಥಿಸಿದಳು – ೧೮?

ಋಷಿಗಳತಿ ತಾರ್ಕಿಕರು ಕರ್ಮ
ವ್ಯಸನಿಗಳು ಕೋವಿದರು ಮಿಕ್ಕಿನ
ವಿಷಯದೆರೆ ಮೀನುಗಳು ಮೂಢ ಮನುಷ್ಯರೆಂಬುವರು
ಒಸೆದು ನಿನ್ನವರೆಂದು ಬಗೆವರೆ
ಬಸಿದು ಬೀಳುವ ಕೃಪೆಯ ನೀ ತೋ
ರಿಸೆಯಿದೇನೈ ಕೃಷ್ಣಯೆಂದೊರಲಿದಳು ನಳಿನಾಕ್ಷಿ (ಸಭಾ ಪರ್ವ, ೧೫ ಸಂಧಿ, ೧೨೯ ಪದ್ಯ)

ತಾತ್ಪರ್ಯ:
ಋಷಿಮುನಿಗಳು ತರ್ಕದಲ್ಲಿ ಪಾಂಡಿತ್ಯಹೊಂದಿದವರು, ಕರ್ಮದಲ್ಲಿ ನಿರತರಾದವರು ಪಂಡಿತರು,
ಮೂಢರಾದ ಮಿಕ್ಕ ಜನರು ವಿಷಯಗಳೆಂಬ ಎರೆಹುಳುಗಳು ಚುಚ್ಚಿದ ಗಾಳಕ್ಕೆ ಬೀಳುವ ಮೀನಿನಂತಿರುವವರು. ನನ್ನವರೆಂಬ ಮೋಹದಿಂದಾದರೂ ನಮ್ಮನ್ನು ರಕ್ಷಿಸಲು ಮುಗಿಬೀಳುವಂತಹ ಕೃಪೆಯನ್ನೇಕೆ ತೋರಿಸುತ್ತಿಲ್ಲ ಕೃಷ್ಣ ಎಂದು ದ್ರೌಪದಿ ಮೊರೆಯಿಟ್ಟಳು.

ಅರ್ಥ:
ಋಷಿ: ಮುನಿ; ತಾರ್ಕಿಕ: ತರ್ಕದಲ್ಲಿ ಪಾಂಡಿತ್ಯಪಡೆದವ; ಕರ್ಮ: ಕಾರ್ಯ; ವ್ಯಸನಿ: ಗೀಳುಳ್ಳವ, ಚಟ; ಕೋವಿದ: ಪಂಡಿತ; ಮಿಕ್ಕ: ಉಳಿದ; ವಿಷಯ: ವಿಚಾರ, ಸಂಗತಿ; ಎರೆ: ಮೀನು, ಹಕ್ಕಿ ಗಳಿಗೆ ಹಾಕುವ ಆಹಾರ; ಮೀನು: ಮತ್ಸ್ಯ; ಮೂಢ: ತಿಳಿವಳಿಕೆಯಿಲ್ಲದ, ಮೂರ್ಖ; ಮನುಷ್ಯ: ನರ; ಒಸೆ: ಪ್ರೀತಿಸು, ಮೆಚ್ಚು; ಬಗೆ: ಆಲೋಚನೆ, ಯೋಚನೆ; ಬಸಿ: ಸರು, ಸ್ರವಿಸು, ಜಿನುಗು; ಬೀಳು: ಎರಗು; ಕೃಪೆ: ದಯೆ; ತೋರು: ಕಾಣು, ದೃಷ್ಟಿಗೆ ಬೀಳು; ಒರಲು: ಗೋಳಿಡು, ಕೂಗು; ನಳಿನಾಕ್ಷಿ: ಕಮಲದಂತ ಕಣ್ಣುಳ್ಳವಳು (ಸುಂದರಿ);

ಪದವಿಂಗಡಣೆ:
ಋಷಿಗಳ್+ಅತಿ +ತಾರ್ಕಿಕರು+ ಕರ್ಮ
ವ್ಯಸನಿಗಳು +ಕೋವಿದರು+ ಮಿಕ್ಕಿನ
ವಿಷಯದ್+ಎರೆ +ಮೀನುಗಳು +ಮೂಢ +ಮನುಷ್ಯರೆಂಬುವರು
ಒಸೆದು +ನಿನ್ನವರೆಂದು +ಬಗೆವರೆ
ಬಸಿದು +ಬೀಳುವ +ಕೃಪೆಯ+ ನೀ+ ತೋ
ರಿಸೆ+ಇದೇನೈ +ಕೃಷ್ಣ+ಎಂದ್+ಒರಲಿದಳು +ನಳಿನಾಕ್ಷಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಮಿಕ್ಕಿನ ವಿಷಯದೆರೆ ಮೀನುಗಳು ಮೂಢ ಮನುಷ್ಯರೆಂಬುವರು
(೨) ಕೃಷ್ಣನನ್ನು ಮೊರೆಯಿಡುವ ಪರಿ – ಒಸೆದು ನಿನ್ನವರೆಂದು ಬಗೆವರೆ ಬಸಿದು ಬೀಳುವ ಕೃಪೆಯ ನೀ ತೋರಿಸೆ

ನಿಮ್ಮ ಟಿಪ್ಪಣಿ ಬರೆಯಿರಿ