ಇತ್ತಲಾದ್ವಾರಕೆಯೊಳಗೆ ದೇ
ವೋತ್ತಮನು ನಿಜಭವನದೊಳು ನರ
ವೃತ್ತಿಯಿಂದಿರುತಾಗ ಕೇಳಿದ ಸತಿಯ ಹೊಲ್ಲೆಹವ
ಕೆತ್ತ ದುಮ್ಮಾನದಲಿ ದ್ರೌಪದಿ
ಯುತ್ತಮೆಯಲಾ ದೃಢಪತಿವ್ರತೆ
ಗೆತ್ತಣದು ಪರಿಭವವಿದೆಂದಸುರಾರಿ ಚಿಂತಿಸಿದ (ಸಭಾ ಪರ್ವ, ೧೫ ಸಂಧಿ, ೧೩೩ ಪದ್ಯ)
ತಾತ್ಪರ್ಯ:
ಇತ್ತ ದ್ವಾರಕೆಯಲ್ಲಿ ದೇವೋತ್ತಮನಾದ ಶ್ರೀಕೃಷ್ಣನು ತನ್ನ ಅರಮನೆಯಲ್ಲಿ ಮಾನವ ಸಹಜ ರೀತಿಯಿಂದಿರುವಾಗ ಅವನಿಗೆ ದ್ರೌಪದಿಯ ಮೊರೆಯು ಕೇಳಿಸಿತು. ದುಃಖದಿಂದ ಅದರಿದನು, ದ್ರೌಪದಿಯು ಉತ್ತಮಳು, ಶ್ರೇಷ್ಠ ಪತಿವ್ರತೆ, ಇಂತಹವಳಿಗೆ ಈ ಸ್ಥಿತಿ ಏಕೆ ಬಂದಿತೆಂದು ಚಿಂತಾಗ್ರಸ್ಥನಾದನು.
ಅರ್ಥ:
ದೇವೋತ್ತಮ: ಭಗವಂತನಲ್ಲಿ ಶ್ರೇಷ್ಠನಾದವನು; ನಿಜ: ದಿಟ; ಭವನ: ಮನೆ; ನರ: ಮನುಷ್ಯ; ವೃತ್ತಿ: ಕೆಲಸ, ಕಾರ್ಯ; ಕೇಳು: ಆಲಿಸು; ಸತಿ: ಹೆಂಗಸು; ಹೊಲ್ಲೆಹ: ದೋಷ; ಕೆತ್ತು:ಅದರು, ನಡುಗು; ದುಮ್ಮಾನ: ದುಃಖ; ಉತ್ತಮ: ಶ್ರೇಷ್ಠ; ದೃಢ: ಗಟ್ಟಿ, ಸ್ಥಿರತೆ; ಪತಿವ್ರತೆ: ಗರತಿ; ಎತ್ತಣ: ಎಲ್ಲಿಯ; ಪರಿಭವ: ಅನಾದರ, ತಿರಸ್ಕಾರ; ಅಸುರಾರಿ: ರಾಕ್ಷಸರ ವೈರಿ; ಚಿಂತೆ: ಯೋಚನೆ, ಕಳವಳ;
ಪದವಿಂಗಡಣೆ:
ಇತ್ತಲ್+ಆ+ ದ್ವಾರಕೆಯೊಳಗೆ +ದೇ
ವೋತ್ತಮನು +ನಿಜಭವನದೊಳು+ ನರ
ವೃತ್ತಿಯಿಂದಿರುತಾಗ+ ಕೇಳಿದ+ ಸತಿಯ +ಹೊಲ್ಲೆಹವ
ಕೆತ್ತ+ ದುಮ್ಮಾನದಲಿ +ದ್ರೌಪದಿ
ಉತ್ತಮೆಯಲಾ +ದೃಢಪತಿವ್ರತೆಗ್
ಎತ್ತಣದು +ಪರಿಭವವ್+ಇದೆಂದ್+ಅಸುರಾರಿ +ಚಿಂತಿಸಿದ
ಅಚ್ಚರಿ:
(೧) ದ್ರೌಪದಿಯ ಗುಣಗಾನ – ದ್ರೌಪದಿ ಯುತ್ತಮೆಯಲಾ ದೃಢಪತಿವ್ರತೆ