ಮರೆದೆನಭ್ಯುದಯದಲಿ ನೀನೆಂ
ದರಿವೆನಾಪತ್ತಿನಲಿ ಮದದಲಿ
ಮುರುಕಿಸುವೆನುಬ್ಬಿನಲಿ ಕಳವಳಿಸುವೆನು ಖೋಡಿಯಲಿ
ಅರಿಯದಜ್ಞರ ಗುಣವ ದೋಷವ
ನರಸುವರೆ ನಿನ್ನಡಿಯ ಕೃಪೆಯನು
ಮೆರೆಯಲಾಗದೆ ಕೃಷ್ಣಯೆಂದೊರಲಿದಳು ನಳಿನಾಕ್ಷಿ (ಸಭಾ ಪರ್ವ, ೧೫ ಸಂಧಿ, ೧೨೮ ಪದ್ಯ)
ತಾತ್ಪರ್ಯ:
ಏಳಿಗೆಯ ಕಾಲದಲ್ಲಿ ನಿನ್ನನ್ನು ಮರೆಯುತ್ತೇನೆ, ಆಪತ್ತು, ಕಷ್ಟ ಬಂದಾಗ ನೀನೇ ಗತಿಯೆಂಬ ಅರಿವು ಬರುತ್ತದೆ . ಏಳಿಗೆಯ ಕಾಲದಲ್ಲಿ ಮದದಿಂದ ಸೋಕ್ಕುತ್ತೇನೆ, ಆಪತ್ತು, ಕಷ್ಟ ಬಂದಾಗ ಕಳವಳಿಸುತ್ತೇನೆ. ಅಜ್ಞಾನಿಗಳಾದ ನಮ್ಮಂತಹವರಲ್ಲಿ ಗುಣ ದೋಷಗಳನ್ನು ಪ್ರಭವಾದ ನೀನು ಹುಡುಕಬಹುದೇ? ನಿನ್ನ ಕೃಪೆಯನ್ನು ತೋರಿಸಬಾರದೇ, ಕೃಷ್ಣಾ ಎಂದು ದ್ರೌಪದಿಯು ಕೃಷ್ಣನಲ್ಲಿ ಮೊರೆಯಿಟ್ಟಳು.
ಅರ್ಥ:
ಮರೆ: ನೆನಪಿನಿಂದ ದೂರ ಮಾಡು; ಅಭ್ಯುದಯ: ಏಳಿಗೆ; ಅರಿ: ತಿಳಿ; ಆಪತ್ತು: ಸಂಕಟ; ಮದ: ಅಹಂಕಾರ; ಮುರುಕಿಸು: ಅಹಂಕಾರಮಾಡು; ಉಬ್ಬು: ಹಿಗ್ಗು, ಗರ್ವಿಸು; ಕಳವಳ: ಗೊಂದಲ, ಚಿಂತೆ; ಖೋಡಿ: ದುರುಳತನ, ನೀಚತನ; ಅಜ್ಞರ: ತಿಳಿದವರಲ್ಲದ; ಗುಣ: ನಡತೆ, ಸ್ವಭಾವ; ದೋಷ: ತಪ್ಪು; ಅರಸು: ಹುಡುಕು; ಅಡಿ: ಪಾದ; ಕೃಪೆ: ಕರುಣೆ, ದಯೆ; ಒರಲು: ಗೋಳಿಡು, ಕೂಗು; ನಳಿನಾಕ್ಷಿ: ಕಮಲದಂತ ಕಣ್ಣುಳ್ಳವಳು (ಹೆಣ್ಣು),
ಪದವಿಂಗಡಣೆ:
ಮರೆದೆನ್+ಅಭ್ಯುದಯದಲಿ+ ನೀನೆಂದ್
ಅರಿವೆನ್+ಆಪತ್ತಿನಲಿ +ಮದದಲಿ
ಮುರುಕಿಸುವೆನ್+ಉಬ್ಬಿನಲಿ +ಕಳವಳಿಸುವೆನು +ಖೋಡಿಯಲಿ
ಅರಿಯದ್+ಅಜ್ಞರ +ಗುಣವ +ದೋಷವನ್
ಅರಸುವರೆ +ನಿನ್ನಡಿಯ +ಕೃಪೆಯನು
ಮೆರೆಯಲಾಗದೆ+ ಕೃಷ್ಣ+ಎಂದ್+ಒರಲಿದಳು +ನಳಿನಾಕ್ಷಿ
ಅಚ್ಚರಿ:
(೧) ಮರೆ – ೧, ೬ ಸಾಲಿನ ಮೊದಲ ಪದ
(೨) ಅರಿ – ೨, ೪ ಸಾಲಿನ ಮೊದಲ ಪದ