ಚರಣಭಜಕರ ಮಾನಹಾನಿಯ
ಹರಿಬವಾರದು ಕೃಷ್ಣ ನಾಮ
ಸ್ಮರಣ ಧನಿಕರಿಗುಂಟೆ ಫಲ್ಲಣೆ ಘೋರಪಾತಕದ
ಪರಮ ಭಕ್ತ ಕುಟುಂಬಕನು ನೀ
ಕರುಣೀಯಲ್ಲದೊಡೀ ಕುಟುಂಬಕೆ
ಶರಣದಾರೈ ಕೃಷ್ಣ ಸಲಹೆಂದೊರಲಿದಳು ತರಳೆ (ಸಭಾ ಪರ್ವ, ೧೫ ಸಂಧಿ, ೧೨೨ ಪದ್ಯ)
ತಾತ್ಪರ್ಯ:
ನಿನ್ನ ಪಾದಕಮಲವನ್ನು ಭಜಿಸುವವರ ಮಾನವು ಹೋಗುವಂತಿರುವಾಗ ಅದನ್ನು ರಕ್ಷಿಸುವ ಹೊಣೆಗಾರಿಗೆ ನಿನ್ನದಲ್ಲವೇ, ಕೃಷ್ಣ ನಾಮಸ್ಮರಣೆಯೆಂಬ ಧನವಿರುವವರಿಗೆ ಘೋರ ಪಾಪವು ಅವರನ್ನು ಮುಟ್ಟುವುದೇ? ಭಕ್ತ ಕುಟುಂಬಿಯಾದ ನೀನು ಕರುಣೆಯನ್ನು ತೋರಿಸದಿದ್ದರೆ ಭಕ್ತರಿಗೆ ಆಶ್ರಯನೀಡುವವರಾರು! ಕೃಷ್ಣಾ ನನ್ನನ್ನು ರಕ್ಷಿಸೆಂದು ದ್ರೌಪದಿ ಕೃಷ್ಣನಲ್ಲಿ ಮೊರೆಯಿಟ್ಟಳು.
ಅರ್ಥ:
ಚರಣ: ಪಾದ; ಭಜಕ: ಆರಾಧಿಸುವ; ಮಾನ: ಮರ್ಯಾದೆ, ಗೌರವ; ಹಾನಿ: ನಷ್ಟ; ಹರಿಬ: ಕೆಲಸ, ಕಾರ್ಯ; ನಾಮ: ಹೆಸರು; ಸ್ಮರಣೆ: ಧ್ಯಾನ, ಚಿಂತನೆ; ಧನಿಕ: ಶ್ರೀಮಂತ; ಫಲ್ಲಣೆ: ಸೋಂಕು; ಘೋರ: ಉಗ್ರ; ಪಾತಕ: ಪಾಪ; ಪರಮ: ಶ್ರೇಷ್ಠ; ಭಕ್ತ: ಪೂಜಿಸುವವ; ಕುಟುಂಬಕ: ಪರಿವಾರದ; ಕರುಣಿ: ದಯೆಯುಳ್ಳವ; ಶರಣ: ಆಶ್ರಯ; ಸಲಹು: ಕಾಪಾಡು; ಒರಲು: ಗೋಳಿಡು, ಕೂಗು; ತರಳೆ: ಯುವತಿ;
ಪದವಿಂಗಡಣೆ:
ಚರಣ+ಭಜಕರ+ ಮಾನ+ಹಾನಿಯ
ಹರಿಬವಾರದು+ ಕೃಷ್ಣ +ನಾಮ
ಸ್ಮರಣ +ಧನಿಕರಿಗುಂಟೆ +ಫಲ್ಲಣೆ+ ಘೋರಪಾತಕದ
ಪರಮ+ ಭಕ್ತ +ಕುಟುಂಬಕನು +ನೀ
ಕರುಣೀ+ಅಲ್ಲದೊಡ್+ಈ+ ಕುಟುಂಬಕೆ
ಶರಣದಾರೈ+ ಕೃಷ್ಣ +ಸಲಹೆಂದ್+ಒರಲಿದಳು +ತರಳೆ
ಅಚ್ಚರಿ:
(೧) ಕೃಷ್ಣನ ಹಿರಿಮೆ – ಕೃಷ್ಣ ನಾಮಸ್ಮರಣ ಧನಿಕರಿಗುಂಟೆ ಫಲ್ಲಣೆ ಘೋರಪಾತಕದ