ತುರುವ ನುಂಗಿದ ಫಣಿಯ ಗಂಟಲ
ಮುರಿದು ಕಾಯ್ದೈ ಗೋವುಗಳ ಗಿರಿ
ಮರೆಯಲಿಂದ್ರನ ಖಾತಿಗಳುಕದೆ ಕಾಯ್ದೆ ಗೋಕುಲವ
ಮೆರೆದೆಲಾ ಕೃಪೆಯಲಿ ಗಜೇಂದ್ರನ
ಮುರಿಯಲೀಯದೆ ಖಳನು ಸೋಕಿದ
ಸೆರಗ ಬಿಡಿಸೈ ಕೃಷ್ಣಯೆಂದಳು ಪಾಂಡವರ ರಾಣಿ (ಸಭಾ ಪರ್ವ, ೧೫ ಸಂಧಿ, ೧೧೯ ಪದ್ಯ)
ತಾತ್ಪರ್ಯ:
ಹಸುಗಳನ್ನು ನುಂಗುತ್ತಿದ್ದ ಕಾಳಿಯೆಂಬ ರಾಕ್ಷಸನ ಗಂಟಲನ್ನು ಸಂಹಾರಮಾಡಿ ಗೋವುಗಳನ್ನು ರಕ್ಷಿಸಿದೆ, ಇಂದ್ರನಿಗೆ ಹೆದರದೆ ಗೋವರ್ಧನ ಪರ್ವತವನ್ನು ಎತ್ತಿ ಗೋಕುಲವನ್ನು ಕಾಪಾಡಿದೆ, ಗಜೇಂದ್ರನನ್ನು ರಕ್ಷಿಸಿದೆ, ಹೇ ಕೃಷ್ಣ ಈ ಖಳನು ಹಿಡಿದಿರುವ ನನ್ನ ಸೆರಗನ್ನು ಬಿಡಿಸಲಾರೆಯಾ ಎಂದು ದ್ರೌಪದಿಯು ಕೃಷ್ಣನಲ್ಲಿ ಮೊರೆಯಿಟ್ಟಳು.
ಅರ್ಥ:
ತುರು: ದನ, ಗೋವು; ನುಂಗು: ಕಬಳಿಸು, ತಿನ್ನು; ಫಣಿ: ಹಾವು; ಗಂಟಲು: ಕಂಠ; ಮುರಿ: ಸೀಳು; ಕಾಯ್ದೆ: ಕಾಪಾಡು; ಗೋವು: ಹಸು; ಗಿರಿ: ಬೆಟ್ಟ; ಮರೆ: ಗುಟ್ಟು, ರಹಸ್ಯ; ಖಾತಿ: ಕೋಪ, ಕ್ರೋಧ; ಅಳುಕು: ಹೆದರು; ಕಾಯ್ದೆ: ಕಾಪಾಡು; ಮೆರೆ: ಹೊಳೆ, ಪ್ರಕಾಶಿಸು; ಕೃಪೆ: ಕರುಣೆ; ಗಜೇಂದ್ರ: ಆನೆಗಳ ರಾಜ; ಮುರಿ: ಸೀಳು; ಖಳ: ದುಷ್ಟ; ಸೋಕು: ಮುಟ್ಟು; ಸೆರಗು: ಸೀರೆಯಲ್ಲಿ ಹೊದೆಯುವ ಭಾಗ, ಮೇಲುದು; ಬಿಡಿಸು: ಕಳಚು, ಸಡಿಲಿಸು; ರಾಣಿ: ಅರಸಿ;
ಪದವಿಂಗಡಣೆ:
ತುರುವ +ನುಂಗಿದ +ಫಣಿಯ +ಗಂಟಲ
ಮುರಿದು +ಕಾಯ್ದೈ +ಗೋವುಗಳ+ ಗಿರಿ
ಮರೆಯಲ್+ಇಂದ್ರನ +ಖಾತಿಗ್+ಅಳುಕದೆ +ಕಾಯ್ದೆ +ಗೋಕುಲವ
ಮೆರೆದೆಲಾ+ ಕೃಪೆಯಲಿ +ಗಜೇಂದ್ರನ
ಮುರಿಯಲೀಯದೆ +ಖಳನು +ಸೋಕಿದ
ಸೆರಗ+ ಬಿಡಿಸೈ+ ಕೃಷ್ಣ+ಎಂದಳು +ಪಾಂಡವರ +ರಾಣಿ
ಅಚ್ಚರಿ:
(೧) ತುರು, ಗೋವು – ಸಮನಾರ್ಥಕ ಪದ
(೨) ಕಾಳಿಂಗ ಮರ್ಧನದ ವಿವರ – ತುರುವ ನುಂಗಿದ ಫಣಿಯ ಗಂಟಲಮುರಿದು ಕಾಯ್ದೈ ಗೋವುಗಳ
(೩) ಗೋವರ್ಧನ ಗಿರಿಧಾರಿಯ ವಿವರ – ಗಿರಿ ಮರೆಯಲಿಂದ್ರನ ಖಾತಿಗಳುಕದೆ ಕಾಯ್ದೆ ಗೋಕುಲವ
(೪) ಗಜೇಂದ್ರ ಮೋಕ್ಷದ ವಿವರ – ಮೆರೆದೆಲಾ ಕೃಪೆಯಲಿ ಗಜೇಂದ್ರನ