ಎಲೆ ವಿಲಾಸಿನಿಯರಿರ ಭೂಪನ
ತಿಳಿಹಿರೌ ತಾಯ್ಗಳಿರ ನೀವಿಂ
ದೆಲೆ ಪಸಾಯ್ತೆಯರಿರ ಸಹೋದರಿಯೆಂದು ಕೌರವನ
ತಿಳುಹಿರೌ ಶರಣಾಗತರ ತಾ
ನುಳುಹಿ ಕೊಂಬುದು ಧರ್ಮವಕಟಾ
ಕಲುಹೃದಯರೌ ನೀವೆನುತ ಹಲುಬಿದಳು ತರಳಾಕ್ಷಿ (ಸಭಾ ಪರ್ವ, ೧೫ ಸಂಧಿ, ೧೦೭ ಪದ್ಯ)
ತಾತ್ಪರ್ಯ:
ಭೀಷ್ಮಾದಿಗಳಿಂದ ಸಹಾಯ ಹಸ್ತ ದೊರೆಯದ ಕಾರಣ, ದುರ್ಯೋಧನನ ಅಂತಃಪುರದ ಸ್ತ್ರೀಯರಲ್ಲಿ ಮೊರೆಯಿಟ್ಟಳು, ಎಲೆ ವಿಲಾಸಿನಿಯರೇ, ನಿಮ್ಮ ದೊರೆಗೆ ತಿಳಿಸಿ, ನನ್ನನ್ನು ಉಳಿಸಿರಿ, ಆಪ್ತಸಖೀ ಜನರೇ ನನ್ನನ್ನು ನಿಮ್ಮ ತಂಗಿಯಂದೇ ಬಗೆದು ಕೌರವನಿಗೆ ತಿಳಿಸಿರಿ, ಶರಣಾಗತರನ್ನು ಕಾಪಾಡುವುದು ಧರ್ಮಮಾರ್ಗ, ಆದರೆ ನಿಮ್ಮದು ಕಲ್ಲು ಹೃದಯ ಎಂದು ದ್ರೌಪದಿ ಕಣ್ಣೀರಿಟ್ಟಳು.
ಅರ್ಥ:
ವಿಲಾಸಿನಿ: ಒಯ್ಯಾರಿ, ಬೆಡಗಿ; ಭೂಪ: ರಾಜ; ತಿಳಿಹಿ: ತಿಳಿಸಿ, ಹೇಳು; ತಾಯಿ: ಮಾತೆ; ಪಸಾಯ್ತೆ: ಆಪ್ತಸಖಿ; ಸಹೋದರಿ: ತಂಗಿ; ಶರಣು: ಆಶ್ರಯ; ಉಳುಹು: ಕಾಪಾಡು; ಧರ್ಮ: ಧಾರಣೆ ಮಾಡಿದುದು, ನಿಯಮ; ಅಕಟ: ಅಯ್ಯೋ; ಕಲು: ಗಟ್ಟಿ, ಕಲ್ಲು; ಹೃದಯ: ಎದೆ; ಹಲುಬು: ದುಃಖಪಡು; ತರಳಾಕ್ಷಿ: ಚಂಚಲವಾದ ಕಣ್ಣುಳ್ಳವಳು (ದ್ರೌಪದಿ);
ಪದವಿಂಗಡಣೆ:
ಎಲೆ +ವಿಲಾಸಿನಿಯರಿರ+ ಭೂಪನ
ತಿಳಿಹಿರೌ+ ತಾಯ್ಗಳಿರ +ನೀವಿಂ
ದೆಲೆ+ ಪಸಾಯ್ತೆಯರಿರ+ ಸಹೋದರಿಯೆಂದು +ಕೌರವನ
ತಿಳುಹಿರೌ +ಶರಣಾಗತರ+ ತಾನ್
ಉಳುಹಿ +ಕೊಂಬುದು +ಧರ್ಮವ್+ಅಕಟಾ
ಕಲು+ಹೃದಯರೌ+ ನೀವೆನುತ+ ಹಲುಬಿದಳು+ ತರಳಾಕ್ಷಿ
ಅಚ್ಚರಿ:
(೧) ತಂಗಿಯನ್ನಾಗಿ ನೋಡಿ ಎಂದು ಅಳುವ ಪರಿ – ನೀವಿಂದೆಲೆ ಪಸಾಯ್ತೆಯರಿರ ಸಹೋದರಿಯೆಂದು ಕೌರವನ ತಿಳುಹಿರೌ