ಪದ್ಯ ೯೨: ಭೀಮನು ಕೋಪದಿಂದ ಏನೆಂದು ನುಡಿದನು?

ಈಯವಸ್ಥೆಗೆ ತಂದ ಕೌರವ
ನಾಯಿಗಳ ನಿಟ್ಟೆಲುವ ಮುರಿದು ನ
ವಾಯಿಯಲಿ ಘಟ್ಟಿಸದೆ ಕೊಬ್ಬಿದ ತನ್ನ ತೋಳುಗಳ
ವಾಯುಸಖನಲಿ ಸುಡುವೆನೀಗಳೆ
ಬೀಯವಾಗಲಿ ದೇಹವಾಚಂ
ದ್ರಾಯತವೆ ಎಂದೊಡನೊಡನೆ ಮಿಡುಕಿದನು ಕಲಿಭೀಮ (ಸಭಾ ಪರ್ವ, ೧೫ ಸಂಧಿ, ೯೨ ಪದ್ಯ)

ತಾತ್ಪರ್ಯ:
ನಮಗೆ ಈ ದುರವಸ್ಥೆಯನ್ನು ತಂದ ಕೌರವ ನಾಯಿಗಳ ಬೆನ್ನು ಮೂಳೆಗಳನ್ನು ಮುರಿದು, ಹೊಸ ಠೀವಿಯಲ್ಲಿ ಬಡೆಯದಿದ್ದರೆ ನನ್ನು ತೋಳುಗಳು ಕೊಬ್ಬಿದ್ದಕ್ಕೆ ಏನು ಪ್ರಯೋಜನ> ಆದುದರಿಂದ ನನ್ನ ತೋಳುಗಳನ್ನೇ ಸುಟ್ಟು ಹಾಕುತ್ತೇನೆ. ಈ ಪ್ರಾಣವು ಸೂರ್ಯಚಂದ್ರರಿರುವರಗೇನೂ ಇರುವುದಿಲ್ಲ. ಈಗಲೇ ಈ ಪ್ರಾಣವು ಹೋಗಲಿ, ಎಂದು ಭೀಮನು ಹೆಜ್ಜೆ ಹೆಜ್ಜೆಗೂ ಕೋಪದಿಂದ ನುಡಿದನು.

ಅರ್ಥ:
ಅವಸ್ಥೆ: ಸ್ಥಿತಿ; ತಂದ: ಒಡ್ಡಿದ; ನಾಯಿ: ಶ್ವಾನ; ನಿಟ್ಟೆಲವು: ನೇರವಾದ ಎಲುಬು; ಮುರಿ: ಸೀಳು; ನವಾಯಿ: ಠೀವಿ; ಘಟ್ಟಿಸು: ಹೊಡೆ, ಅಪ್ಪಳಿಸು; ಕೊಬ್ಬು: ಸೊಕ್ಕು, ಹೆಚ್ಚಾಗು; ತೋಳು: ಬಾಹು; ವಾಯು: ಗಾಳಿ; ಸಖ: ಸ್ನೇಹಿತ; ವಾಯುಸಖ: ಅಗ್ನಿ; ಸುಡು: ದಹಿಸು; ಬೀಯ: ನಷ್ಟ, ಹಾಳು, ಆಹಾರ; ದೇಹ: ತನು; ಚಂದ್ರ: ಶಶಿ; ಆಯತ: ನೆಲೆ, ವಿಶಾಲ; ಒಡನೊಡನೆ: ಹೆಜ್ಜೆ ಹೆಜ್ಜೆ; ಮಿಡುಕು: ಅಲುಗಾಟ, ಚಲನೆ; ಕಲಿ: ಶೂರ;

ಪದವಿಂಗಡನೆ:
ಈ+ಅವಸ್ಥೆಗೆ +ತಂದ +ಕೌರವ
ನಾಯಿಗಳ+ ನಿಟ್ಟೆಲುವ +ಮುರಿದು +ನ
ವಾಯಿಯಲಿ+ ಘಟ್ಟಿಸದೆ +ಕೊಬ್ಬಿದ +ತನ್ನ +ತೋಳುಗಳ
ವಾಯುಸಖನಲಿ +ಸುಡುವೆನ್+ಈಗಳೆ
ಬೀಯವಾಗಲಿ +ದೇಹವ್+ಆಚಂ
ದ್ರಾಯತವೆ +ಎಂದ್+ಒಡನೊಡನೆ +ಮಿಡುಕಿದನು+ ಕಲಿಭೀಮ

ಅಚ್ಚರಿ:
(೧) ಕೌರವರನ್ನು ಬಯ್ಯುವ ಪರಿ – ಕೌರವ ನಾಯಿಗಳ
(೨) ಅಗ್ನಿಯನ್ನು ವಾಯುಸಖನೆಂದು ಕರೆದಿರುವುದು

ನಿಮ್ಮ ಟಿಪ್ಪಣಿ ಬರೆಯಿರಿ