ಪದ್ಯ ೮೯: ಭೀಮನು ಸಹದೇವನಿಗೆ ಏನನ್ನು ತರಲು ಹೇಳಿದನು?

ನೊಂದನೀಮಾತಿನಲಿ ಮಾರುತ
ನಂದನನು ಸಹದೇವನನು ಕರೆ
ದೆಂದನಗ್ನಿಯ ತಾ ಯುಧಿಷ್ಠಿರ ನೃಪನ ತೋಳುಗಳ
ಮಂದಿ ನೋಡಲು ಸುಡುವೆನೇಳೇ
ಳೆಂದು ಜರೆದರೆ ಹಿಡಿದು ಮಾದ್ರೀ
ನಂದನನ ನಿಲಿಸಿದನು ಫಲುಗುಣ ನುಡಿದನನಿಲಜನ (ಸಭಾ ಪರ್ವ, ೧೫ ಸಂಧಿ, ೮೯ ಪದ್ಯ)

ತಾತ್ಪರ್ಯ:
ದುರ್ಯೋಧನನ ಮಾತನ್ನು ಕೇಳಿ ಭೀಮನಿಗೆ ತುಂಬ ದುಃಖವಾಯಿತು, ತನ್ನ ತಮ್ಮ ಸಹದೇವನನ್ನು ಕರೆದು, ಹೋಗಿ ಬೆಂಕಿಯನ್ನು ತೆಗೆದುಕೊಂಡು ಬಾ, ನಮ್ಮನ್ನು ಈ ಸ್ಥಿತಿಗೆ ತಂದ ಅಣ್ಣನ ತೋಳುಗಳನ್ನು ಸುಡುತ್ತೇನೆ, ಏಳು ಏಳು ಎಂದು ಹೇಳಲು, ಅರ್ಜುನನು ಮಧ್ಯ ಪ್ರವೇಶಿಸಿ ಸಹದೇವನನ್ನು ನಿಲ್ಲಿಸಿ ಭೀಮನಿಗೆ ಹೀಗೆ ಹೇಳಿದನು

ಅರ್ಥ:
ನೊಂದು: ಬೇಜಾರು ಪಟ್ಟು, ದುಃಖಿಸು; ಮಾತು: ವಾಣಿ, ನುಡಿ; ಮಾರುತನಂದನ: ವಾಯು ಪುತ್ರ; ಕರೆ: ಬರೆಮಾಡು; ಅಗ್ನಿ: ಬೆಂಕಿ; ನೃಪ: ರಾಜ; ತೋಳು: ಬಾಹು; ಮಂದಿ: ಜನ; ನೋಡಲು: ವೀಕ್ಷಿಸಲು; ಸುಡು: ದಹಿಸು; ಜರೆ: ಬಯ್ಯು; ಹಿಡಿ: ಕಾವು, ಬಂಧನ; ನಂದನ: ಮಗ; ನಿಲಿಸು: ತಡೆ; ನುಡಿ: ಮಾತಾಡು; ಅನಿಲಜ: ವಾಯುಪುತ್ರ; ಅನಿಲ: ವಾಯು;

ಪದವಿಂಗಡಣೆ:
ನೊಂದನ್+ಈ+ಮಾತಿನಲಿ +ಮಾರುತ
ನಂದನನು +ಸಹದೇವನನು +ಕರೆದ್
ಎಂದನ್+ಅಗ್ನಿಯ +ತಾ +ಯುಧಿಷ್ಠಿರ +ನೃಪನ +ತೋಳುಗಳ
ಮಂದಿ +ನೋಡಲು +ಸುಡುವೆನ್+ಏಳ್
ಏಳೆಂದು +ಜರೆದರೆ+ ಹಿಡಿದು +ಮಾದ್ರೀ
ನಂದನನ+ ನಿಲಿಸಿದನು +ಫಲುಗುಣ +ನುಡಿದನ್+ಅನಿಲಜನ

ಅಚ್ಚರಿ:
(೧) ಮಾರುತನಂದನ, ಅನಿಲಜ – ಭೀಮನನ್ನು ಕರೆದ ಬಗೆ
(೨) ಸಹದೇವನ, ಮಾದ್ರೀನಂದನ – ಸಹದೇವನನ್ನು ಕರೆದ ಬಗೆ

ನಿಮ್ಮ ಟಿಪ್ಪಣಿ ಬರೆಯಿರಿ